ವಿದ್ಯುತ್‌ ಕ್ಷೇತ್ರ ಖಾಸಗೀಕರಣಕ್ಕೆ ಅವಕಾಶವಿರುವ ʼವಿದ್ಯುತ್ ತಿದ್ದುಪಡಿ ವಿಧೇಯಕʼ ಲೋಕಸಭೆಯಲ್ಲಿ ಮಂಡನೆ

Update: 2022-08-08 18:17 GMT

ಹೊಸದಿಲ್ಲಿ, ಆ. ೮: ಇಂಧನ ಸಚಿವ ಆರ್.ಕೆ. ಸಿಂಗ್ ಅವರು ಲೋಕಸಭೆಯಲ್ಲಿ ಸೋಮವಾರ ವಿದ್ಯುತ್ (ತಿದ್ದುಪಡಿ)ವಿಧೇಯಕ -೨೦೨೨ ಅನ್ನು  ಮಂಡಿಸಿದ್ದಾರೆ. ಈ ನಡುವೆ ಸಚಿವರು ವಿಧೇಯಕವನ್ನು ಪರಿಶೀಲಿಸಲು ಇಂಧನ ಕುರಿತ ಸ್ಥಾಯಿ ಸಮಿತಿಗೆ ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದಾರೆ.

ಸಂವಹನದ ಮಾದರಿಯಲ್ಲಿ ವಿದ್ಯುತ್ ರಂಗವನ್ನು ಕೂಡ ಖಾಸಗೀಕರಣಗೊಳಿಸಲು ಅವಕಾಶ ನೀಡುವುದು ಈ ವಿಧೇಯಕದ ಉದ್ದೇಶವಾಗಿದೆ. ವಿಧೇಯಕ ಉಭಯ ಸದನಗಳಲ್ಲಿ ಮಂಜೂರಾದರೆ ಗ್ರಾಹಕರು ಟೆಲಿಫೋನ್, ಮೊಬೈಲ್ ಹಾಗೂ ಇಂಟರ್‌ನೆಟ್ ಸೇವೆಯಂತೆ ವಿದ್ಯುತ್ ಪೂರೈಕೆದಾರರನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ. 

ವಿತರಣಾ ಪರವಾನಿದಾರರು ವಿತರಣಾ ಜಾಲಕ್ಕೆ ತಾರತಮ್ಯ ರಹಿತ ಮುಕ್ತ ಪ್ರವೇಶವನ್ನು ಸುಲಭಗೊಳಿಸಲು ವಿಧೇಯಕವು ವಿದ್ಯುತ್ ಕಾಯ್ದೆಯ ೪೨ನೇ ಸೆಕ್ಷನ್‌ನ ತಿದ್ದುಪಡಿ ಬಯಸಿದೆ.  

ಸ್ಪರ್ಧೆಯನ್ನು ಸಕ್ರಿಯಗೊಳಿಸುವುದು, ಸೇವೆಯನ್ನು ಸುಧಾರಿಸಲು ಪರವಾನಿಗೆದಾರರ ವಿತರಣಾ ಸಾಮರ್ಥ್ಯವನ್ನು ವೃದ್ಧಿಸುವುದು, ವಿದ್ಯುತ್ ವಲಯದ ಸುಸ್ಥಿರತೆಯ ಖಾತರಿ ನೀಡುವುದು ಮೊದಲಾದ ಉದ್ದೇಶದೊಂದಿಗೆ ತಾರತಮ್ಯ ರಹಿತ ಮುಕ್ತ ಪ್ರವೇಶದ ನಿಬಂಧನೆಗಳ ಅಡಿಯಲ್ಲಿ ಎಲ್ಲ ಪರವಾನಿಗೆದಾರರು ವಿತರಣಾ ಜಾಲಗಳ ಬಳಕೆಯನ್ನು ಸುಲಭಗೊಳಿಸಲು ಕಾಯ್ದೆಯ ಸೆಕ್ಷನ್ ೧೪ರ ತಿದ್ದುಪಡಿಯನ್ನು ವಿಧೇಯಕ ಬಯಸಿದೆ.

ಇದರ ಪರಿಣಾಮ ಡಿಸ್ಕಾಮ್‌ಗಳು ಇತರ ಪರವಾನಿಗೆದಾರರ ವಿದ್ಯುತ್ ವಿತರಣಾ ಜಾಲವನ್ನು ಬಳಸಲು ಸಾಧ್ಯವಾಗುತ್ತದೆ. ಒಂದೇ ಪೂರೈಕೆ ಪ್ರದೇಶದಲ್ಲಿ ಬಹು ವಿತರಣಾ ಪರವಾನಿದಾರರ ಸಂದರ್ಭ ವಿದ್ಯುತ್ ಖರೀದಿ ಹಾಗೂ ಅಡ್ಡ ಸಬ್ಸಿಡಿ ನಿರ್ವಹಣೆಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿರುವ ಸೆಕ್ಷನ್ ೬೦ ಎಯನ್ನು ಅಳವಡಿಸಲು ಕೂಡ ಈ ಮಸೂದೆ ಅವಕಾಶ ನೀಡುತ್ತದೆ.

ಸೂಕ್ತ ಆಯೋಗದಿಂದ ಗರಿಷ್ಠ ಮಿತಿ ಹಾಗೂ ಕನಿಷ್ಠ ಸುಂಕವನ್ನು ಕಡ್ಡಾಯವಾಗಿ ನಿಗದಿಪಡಿಸುವುದರ ಜೊತೆಗೆ ಒಂದು ವರ್ಷದ ಸುಂಕದಲ್ಲಿ ಸಂಬಂಧಿಸಿದ ಶ್ರೇಣೀಕೃತ ಪರಿಷ್ಕಾರದ ನಿಬಂಧನೆಗಳನ್ನು ರೂಪಿಸಲು ಕಾಯ್ತೆಯ ಸೆಕ್ಷನ್ ೬೨ರ ತಿದ್ದುಪಡಿಗೆ ಬಯಸುತ್ತದೆ. ನಿಯಂತ್ರಕರು ನಿರ್ವಹಿಸುವ ಕಾರ್ಯಗಳನ್ನು ಬಲಪಡಿಸಲು ಸೆಕ್ಷನ್ ೧೬೬ರ ತಿದ್ದುಪಡಿಗೆ ಇದು ಬಯಸುತ್ತದೆ. ಶಿಕ್ಷೆಯ ಪ್ರಮಾಣವನ್ನು  ಕಾರಾಗೃಹ ಶಿಕ್ಷೆ ಅಥವಾ ದಂಡಕ್ಕೆ ಪರಿವರ್ತಿಸಲು ಸೆಕ್ಷನ್ ೧೪೬ರ ತಿದ್ದುಪಡಿಗೆ ವಿಧೇಯಕ ಬಯಸುತ್ತದೆ. 

ವಿದ್ಯುತ್ ತಿದ್ದುಪಡಿ ವಿಧೇಯಕವನ್ನು ಸಂಸತ್ತಿನ ಕೆಳಮನೆಯಲ್ಲಿ ಮಂಡಿಸಿದ ಕೂಡಲೇ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ವಿದೇಯಕ ಅಪಾಯಕಾರಿ ಎಂದಿದ್ದಾರೆ. ತರಾತುರಿಯಲ್ಲಿ ಮುಂದುವರಿಸಬೇಡಿ ಎಂದು ಅವರು ಕೇಂದ್ರ ಸರಕಾರವನ್ನು ವಿನಂತಿಸಿದ್ದಾರೆ. ಇದು ಕೆಲವು ವಿದ್ಯುತ್ ವಿತರಣಾ ಕಂಪೆನಿ (ಡಿಸ್ಕೋಮ್)ಗಳಿಗೆ ಪ್ರಯೋಜನ ನೀಡುತ್ತದೆ ಎಂದು ಅವರು ಹೇಳಿದರು. 

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕೇಜ್ರಿವಾಲ್, ‘‘ವಿದ್ಯುತ್ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಗಿದೆ. ಇದು ಅತಿ ಅಪಾಯಕಾರಿ ಕಾನೂನು. ಇದರಿಂದ ದೇಶದಲ್ಲಿ ವಿದ್ಯುತ್ ಸಮಸ್ಯೆ ಸುಧಾರಿಸುವ ಬದಲು ಗಂಭೀರವಾಗಲಿದೆ. ಜನರು ತೊಂದರೆಗೊಳಗಾಗುವುದು ಹೆಚ್ಚಾಗಲಿದೆ. ಕೇವಲ ಕೆಲವು ಕಂಪೆನಿಗಳು ಮಾತ್ರ ಲಾಭ ಮಾಡಿಕೊಳ್ಳಲಿವೆ. ಈ ವಿಧೇಯಕವನ್ನು ತರಾತುರಿಯಾಗಿ ಜಾರಿಗೆ ತರಬೇಡಿ ಎಂದು ನಾನು ಕೇಂದ್ರ ಸರಕಾರದಲ್ಲಿ ವಿನಂತಿಸುತ್ತೇನೆ’’ ಎಂದಿದ್ದಾರೆ. 

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ತಮ್ಮ ಇತ್ತೀಚೆಗಿನ ಟ್ವೀಟ್‌ನಲ್ಲಿ, ‘‘ವಿದ್ಯುತ್ ತಿದ್ದುಪಡಿ ವಿಧೇಯಕ ೨೦೨೨ ರಾಜ್ಯದ ಹಕ್ಕುಗಳ ಮೇಲೆ ಇನ್ನೊಂದು ದಾಳಿ. ಸಂಸತ್ತಿನಲ್ಲಿ ಈ ವಿಧೇಯಕವನ್ನು ಮಂಡಿಸುವುದನ್ನು ವಿರೋಧಿಸಬೇಕು. ರಾಜ್ಯಗಳನ್ನು ಆಟದ ಬೊಂಬೆಗಳಂತೆ ಕೇಂದ್ರ ಸರಕಾರ ಪರಿಗಣಿಸಬಾರದು. ನಾವು ನಮ್ಮ ಹಕ್ಕುಗಳಿಗಾಗಿ ರಸ್ತೆಯಿಂದ ಸಂಸತ್ತಿನ ವರೆಗೆ ಹೋರಾಡಲಿದ್ದೇವೆ’’ ಎಂದು ಹೇಳಿದ್ದರು. 

ಈ ನಡುವೆ ಆರ್.ಕೆ. ಸಿಂಗ್ ಟ್ವೀಟ್ ಮಾಡಿ, ಈ ವಿಧೇಯಕ ರೈತರಿಗೆ ಹಾನಿ ಮಾಡುವ ಯಾವುದೇ ನಿಬಂಧನೆಗಳನ್ನು ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News