ಕೆಎಸ್ಸಾರ್ಟಿಸಿ ಮೊದಲನೇ ವಾಹನಕ್ಕೂ ಅಮೃತ ಮಹೋತ್ಸವ ಸಂಭ್ರಮ: ಅನ್ಬುಕುಮಾರ್

Update: 2022-08-15 17:04 GMT

ಬೆಂಗಳೂರು, ಆ. 15: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೊದಲನೇ ವಾಹನವಾದ ‘ಶ್ರೀ ಬನಶಂಕರಿ ಬಸ್’ ಈ ವರ್ಷ ತನ್ನ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಇದನ್ನು ಸಾರಿಗೆ ನಿಗಮದ ಆರಂಭದ ವಾಹನದ ಕುರುಹಾಗಿ ಕೇಂದ್ರ ಕಚೇರಿಯ ಮುಂದೆ ನಿಲ್ಲಿಸಲಾಗಿರುವುದು ಹೆಮ್ಮೆಯ ವಿಷಯ' ಎಂದು ಕೆಎಸ್ಸಾರ್ಟಿಸಿ (KSRTC) ವ್ಯವಸ್ಥಾಪಕ ನಿರ್ದೇಶನ ವಿ.ಅನ್ಬುಕುಮಾರ್ ಇಂದಿಲ್ಲಿ ಬಣ್ಣಿಸಿದ್ದಾರೆ.

ಸೋಮವಾರ ಇಲ್ಲಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸಂಸ್ಥೆಯ ಸಮಸ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶುಭಾಶಯಗಳನ್ನು ಕೋರಿದರು.

‘ನಿಗಮದ ಎಲ್ಲ ಘಟಕ, ಬಸ್ ನಿಲ್ದಾಣ, ವಿಭಾಗ ಕಚೇರಿಗಳಲ್ಲಿಯೂ ಸ್ವಾತಂತ್ರ್ಯದ ಅಮೃತೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಗುತ್ತಿದೆ. ದೇಶವು ಇಡೀ ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ತಮ್ಮ ಪ್ರಾಣವನ್ನು ದೇಶಕ್ಕಾಗಿ ತ್ಯಾಗ ಮಾಡಿದ ವೀರ ಸ್ವಾತಂತ್ರ್ಯಯೋಧರ ಧೈರ್ಯ ಹಾಗೂ ಬಲಿದಾನವನ್ನು ನೆನಪಿಸಿಕೊಳ್ಳುವ ಮತ್ತು ಅವಿರತ ಹೋರಾಟದ ಕಾರಣದಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಮಹತ್ವದ ದಿನದ ಸಂಭ್ರಮ ಇದಾಗಿದೆ' ಎಂದು ನುಡಿದರು.

‘ಭಾರತೀಯರಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರೀಯತೆ ರಕ್ತಗತವಾಗಿ ಬಂದಿದೆ. ನಮ್ಮ ದೇಶವು ಎಲ್ಲ ರೀತಿಯ ಜನರು, ಸಂಸ್ಕೃತಿ, ಆಚರಣೆಗಳ ಶ್ರೀಮಂತ ನೆಲೆವೀಡಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ಗೌರವಿಸುವ ಸಂದರ್ಭ ಇದಾಗಿದೆ. ಕೋವಿಡ್ ಸಂದರ್ಭದಲ್ಲಿ ನಿಗಮವು ಅನುಭವಿಸುತ್ತಿದ್ದ ಆರ್ಥಿಕ ತೊಂದರೆಯಿಂದ ಎರಡು ವರ್ಷಗಳಲ್ಲಿ ಯಾವುದೇ ರೀತಿಯ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಿಬ್ಬಂದಿಗಳಿಗೆ ಏರ್ಪಡಿಸಲಾಗಿರಲಿಲ್ಲ. ಆದರೆ ಪ್ರಸ್ತುತ ವರುಷದಲ್ಲಿ ಘಟಕ ಮಟ್ಟದಲ್ಲಿಯೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು' ಎಂದರು.

‘ಸಿಬ್ಬಂದಿಗಳು ಆಹ್ಲಾದಕರ ವಾತಾವರಣದಲ್ಲಿ ಕೆಲಸ ಮಾಡಿದರೆ ನಿಗಮದ ಉತ್ಪಾದಕತೆಯು ಅಭಿವೃದ್ಧಿ ಹೊಂದುತ್ತದೆ. ಅವರುಗಳೊಡನೆ ಅತೀಹೆಚ್ಚು ಸಮಯ ಕಚೇರಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಸಿಬ್ಬಂದಿಗಳೊಡನೆ ಒಡನಾಟ ಸೌಹಾರ್ದತೆಯಿಂದ ಕೂಡಿರುವುದಕ್ಕೆ ಈ ರೀತಿಯ ಕಾರ್ಯಕ್ರಮಗಳು ಪೂರಕವಾಗಲಿದೆ ಎಂದು ಅನ್ಬುಕುಮಾರ್ ತಿಳಿಸಿದರು.

ಇದೇ ಸಂದರ್ಭದಲ್ಲಿ ನಿಗಮದ ಆಂತರಿಕ ನಿಯತಕಾಲಿಕವಾದ ‘ಸಾರಿಗೆ ಸಂಪದ' ಪತ್ರಿಕೆಯನ್ನು ಕೋವಿಡ್ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದು, ನಿಗಮದಲ್ಲಿನ ಎಲ್ಲ ವಿದ್ಯಮಾನಗಳು ಪ್ರತಿಯೊಬ್ಬ ಸಿಬ್ಬಂದಿಗೂ ತಲುಪಬೇಕಾಗಿರುವ ಅವಶ್ಯಕತೆಯನ್ನು ಮನಗೊಂಡು, ಸಾರಿಗೆ ಸಂಪದದ ಮುದ್ರಣ ಪುನರಾಂಭಿಸಿ, 75ನೆ ಸ್ವಾತಂತ್ರ್ಯದ ವಿಶೇಷ ಆವೃತ್ತಿಯನ್ನು ಇಂದು ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ, ಬಿಎಂಟಿಸಿಯ ನಿರ್ದೇಶಕರಾದ ಜಿ.ರಾಧಿಕಾ, ಸೂರ್ಯ ಸೇನ್, ಡಾ.ನವೀನ್ ಭಟ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News