ರೈತರು, ಗ್ರಾಹಕರು ಒಳಿತೇ ನಮ್ಮ ಧ್ಯೇಯ: KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Update: 2022-08-15 18:23 GMT

ಬೆಂಗಳೂರು, ಆ. 15: ‘ಕರ್ನಾಟಕ ಹಾಲು ಉತ್ಪಾದಕ ಮಹಾ ಮಂಡಳ(ಕೆಎಂಎಫ್)ನ ನಂದಿನಿ ಉತ್ಪನ್ನಗಳನ್ನು ಎತ್ತರಕ್ಕೆ ಏರಿಸಲು ಅವಿರತವಾಗಿ ಶ್ರಮಿಸಲಾಗುತ್ತಿದೆ. ರೈತರು, ಗ್ರಾಹಕರು, ನೌಕರರ ಒಳಿತೇ ನಮ್ಮ ಧ್ಯೇಯವಾಗಿದ್ದು, ಎಲ್ಲರ ಸುಖ, ಶಾಂತಿ, ನೆಮ್ಮದಿಯ ಬದುಕಿಗಾಗಿ ನಾವೆಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡೋಣ' ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಜರುಗಿದ 76ನೆ ಸ್ವಾತಂತ್ರ್ಯ ವರ್ಷದ ಆಝಾದಿ ಕಾ ಅಮೃತ್ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ರಾಷ್ಟ್ರದ ಉನ್ನತಿ ಮತ್ತು ಪ್ರಗತಿಗಾಗಿ ಪ್ರಧಾನಿ ಮೋದಿ ಅವರ ಕೊಡುಗೆ ಅನನ್ಯವಾಗಿದ್ದು, ಮೋದಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ಇಡಿ ಪ್ರಪಂಚವೇ ನಮ್ಮತ್ತ ತಿರುಗಿ ನೋಡುತ್ತಿದೆ. ಪ್ರಧಾನಿ ಸಮರ್ಥ ನಾಯಕತ್ವದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

‘ಕೆಎಂಎಫ್‍ನ 14 ಒಕ್ಕೂಟಗಳು ಸೇರಿ ರಾಜ್ಯದ 14,500 ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅತಿ ಸಡಗರ-ಸಂಭ್ರಮದಿಂದ ಆಚರಿಸಲಾಗಿದೆ. ಜೊತೆಗೆ ಎಲ್ಲ ಸಂಘಗಳಲ್ಲಿ ಅಮೃತ್ ಮಹೋತ್ಸವದ ನಿಮಿತ್ತ ಸಾಕಷ್ಟು ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೆಎಂಎಫ್ ದೊಡ್ಡ ಸಂಸ್ಥೆಯಾಗಿ ಬೆಳೆಯಲು ಆಸರೆಯಾಗಿ ನಿಂತಿರುವ ರೈತ ಸಮೂಹದ ಬೆಳವಣಿಗೆಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ' ಎಂದರು

‘ಇಡೀ ಭಾರತದಲ್ಲಿಯೇ ಕೆಎಂಎಫ್ ನಂ.1 ಸಂಸ್ಥೆಯನ್ನಾಗಿ ರೂಪಿಸಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದಲ್ಲಿರುವ ಸುಮಾರು 50 ಸಾವಿರ ಸರಕಾರಿ ಹಾಗೂ ಅರೆ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ 10 ಸಾವಿರ ಲೀ.ಸುವಾಸಿತ ಹಾಲು, ಮಿಲ್ಕ್ ಶೇಕ್ (ಪೆಟ್ ಬಾಟಲ್) 750ಕಿಲೋ ಚಾಕೊಲೇಟ್‍ಗಳನ್ನು ವಿತರಿಸಲಾಗಿದೆ' ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಬಿ.ಸಿ.ಸತೀಶ, ಆಡಳಿತ ನಿರ್ದೇಶಕ ರಮೇಶ ಕೊಣ್ಣೂರ, ಉತ್ಪಾದನೆ ಮತ್ತು ಗುಣ ಭರವಸೆ ನಿರ್ದೇಶಕ ಮುನಿರಡ್ಡಿ, ಸಲಹೆಗಾರ ಬಿ.ಎಂ.ಸುರೇಶ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News