×
Ad

ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ: ಕಾಂಗ್ರೆಸ್ ಟ್ವೀಟ್

Update: 2022-08-17 13:54 IST

ಬೆಂಗಳೂರು, ಆ. 17: ಸಿಎಂ ಬದಲಾಗುತ್ತಾರೆ‌  ಎನ್ನುತ್ತಾರೆ ಸುರೇಶ್ ಗೌಡ, ಸ್ಟ್ರಾಂಗ್ ಗೃಹಸಚಿವರು ಬೇಕು ಎನ್ನುತ್ತಾರೆ ಯತ್ನಾಳ್, ಮಾಧುಸ್ವಾಮಿ ರಾಜೀನಾಮೆ ಕೊಡಬೇಕು ಎನ್ನುತ್ತಾರೆ ಮುನಿರತ್ನ, ಸಿಎಂ ಹೇಳಿದ್ರೆ ಕೊಡ್ತೀನಿ ಅಂತಾರೆ ಮಾಧುಸ್ವಾಮಿ. ಇಂತಹ ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಕಾಂಗ್ರೆಸ್ ಟ್ವೀಟ್‌ ಮಾಡಿ ಆಗ್ರಹಿಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸೊಗಡು ಶಿವಣ್ಣ vs ಜಿ.ಎಸ್ ಬಸವರಾಜ್, ರೇಣುಕಾಚಾರ್ಯ vs ಕೆ. ಸುಧಾಕರ್, ಸೋಮಶೇಖರ್ vs ಮಾಧುಸ್ವಾಮಿ, ಮುನಿರತ್ನ vs ಮಾಧುಸ್ವಾಮಿ, ಅಶೋಕ್ vs ಅಶ್ವಥ್ ನಾರಾಯಣ್, ಭಗವಂತ್ ಖೂಬಾ vs ಶರಣು ಸಲಗರ, ಕಾರ್ಯಕರ್ತರು vs ಬಿಜೆಪಿ, ಅರಗ ಜ್ಞಾನೇಂದ್ರ vs ಯತ್ನಾಳ್, BSY vs ಸಂತೋಷ್. ಒಂದೇ ಹಡಗಿನಲ್ಲಿ ಇಷ್ಟೊಂದು ರಂಧ್ರಗಳಿದ್ದರೆ ಮುಳುಗದೆ ಇರುವುದೇ?! ಎಂದು ವಾಗ್ದಾಳಿ ನಡೆಸಿದೆ.

ಶೇ. 40 ಕಮಿಷನ್ ಸರ್ಕಾರದಲ್ಲಿ ವೈಫಲ್ಯಗಳ ಮೂಟೆ ಹೊತ್ತಿರುವ ಸಚಿವರುಗಳು ಪರಸ್ಪರ ರಾಜೀನಾಮೆ ಕೇಳುತ್ತಿದ್ದಾರೆ. ಎಸ್.ಟಿ. ಸೋಮಶೇಖರ್ ಅವರೇ, ಮೊದಲು ರಾಜೀನಾಮೆ ಕೊಡಬೇಕಾದವರು ನೀವೇ ಅಲ್ಲವೇ? ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸುಲಿಗೆ ತಡೆಯುವ ಕನಿಷ್ಠ ಕಾಳಜಿ ಇಲ್ಲದಿರುವುದೇಕೆ? ಮಾಹಿತಿ ಸಿಕ್ಕ ನಂತರವೂ ಸುಮ್ಮನಿದ್ದಿದೇಕೆ ಅದರಲ್ಲೂ ಶೇ. 40% ಕಮಿಷನ್ ಇತ್ತೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಬೇಕೆನ್ನುವುದು ಜನರ ಬಯಕೆಯಷ್ಟೇ ಅಲ್ಲ, ಬಿಜೆಪಿಯವರ ಬಯಕೆಯೂ ಕೂಡ. ಈ ಬಯಕೆ @sriramulubjp ಅವರ ಬಾಯಲ್ಲೇ ವ್ಯಕ್ತವಾಗಿದೆ!. ಸಿಎಂ @BSBommai ಅವರ "ತಳ್ಳುವ ಸರ್ಕಾರದ" ಮೇಲೆ ಮಾಧುಸ್ವಾಮಿಯವರಂತೆ ಸಚಿವ ಶ್ರೀರಾಮುಲು ಅವರಿಗೂ ನಂಬಿಕೆ ಇಲ್ಲವಾಗಿದೆಯೇ ಎಂದು ಟ್ವೀಟ್‌ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News