×
Ad

ಫಲಾನುಭವಿಯ ಮನೆಗೆ ಅಧಿಕಾರಿಗಳಿಂದ ಸೌಲಭ್ಯ: ದ.ಕ. ಡಿಸಿ ಡಾ. ರಾಜೇಂದ್ರ

Update: 2022-08-20 22:46 IST

ಮಂಗಳೂರು: ಅಧಿಕಾರಿಗಳು ಕಚೇರಿಯ ಕಡತಗಳ ನಿರ್ವಹಣೆಯೊಂದಿಗೆ ಅರ್ಹ ಫಲಾನುಭವಿಯ ಮನೆ ಬಾಗಿಲಿಗೆ ಸರಕಾರದ ಯೋಜನೆಗಳನ್ನು ತಲುಪಿಸುತ್ತಿದ್ದಾರೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ’ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಸರಕಾರದ ಕನಸಿನ ಯೋಜನೆಯಾಗಿದೆ. ಜಿಲ್ಲೆಯಲ್ಲಿ ಅದು ಯಶಸ್ವಿಯಾಗಿ ಸಾಗುತ್ತಿದೆ, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದೆ. ಅತಿಕಾರಿಬೆಟ್ಟು ಗ್ರಾಮವನ್ನು ಕಂಡು ನನಗೆ ಖುಷಿಯಾಗಿದೆ, ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಜೊತೆಗೆ ಜನರೂ ಕೂಡ ಸರಕಾರ ದಿಂದ ದೊರಕುವ ಯೋಜನೆಗಳನ್ನು ಸದುಪಯೋಗ ಪಡಸಿಕೊಳ್ಳುತ್ತಿದ್ದಾರೆ ಎಂದು ಡಿಸಿ ಹರ್ಷ ವ್ಯಕ್ತಪಡಿಸಿದರು.

ಅತಿಕಾರಿಬೆಟ್ಟು ಗ್ರಾಮದಲ್ಲಿ ಹೆಚ್ಚಿನ ಸಮಸ್ಯೆಗಳಿಲ್ಲ ಇರುವಂತಹ ಕೆಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹಾಗೂ ಭವಿಷ್ಯಕ್ಕೂ ಸಹಕಾರಿಯಾಗುವಂತಹ ಸೌಲಭ್ಯಗಳನ್ನು ಕೊಡಿಸುವಲ್ಲಿ ಈ ಗ್ರಾಮ ವಾಸ್ತವ್ಯದ ಮೂಲಕ ಚರ್ಚಿಸಿ ಬಗೆಹರಿಸಲಾಗುವುದು. ಮರಳು ಅಕ್ರಮ ಸಾಗಾಟದಿಂದ ರಸ್ತೆಗಳು ಹದಗೆಟ್ಟಿದ್ದು, ಶಾಸಕರ 3 ಕೋ.ರೂ. ಅನುದಾನದಿಂದ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದು ಡಿಸಿ ಹೇಳಿದರು.

ವಿದ್ಯುತ್, ಭೂ ಒಡೆತನ, ಪಟ್ಟಾ ಜಾಗ, ರಸ್ತೆ ದುರಸ್ತಿ, ತಡೆಗೋಡೆ ನಿರ್ಮಾಣ, ಸರಕಾರಿ ಕಟ್ಟಡಗಳ ಅಭಿವೃದ್ಧಿ, ಮುಚ್ಚಲ್ಪಟ್ಟ ಬ್ಯಾಂಕ್ ತೆರೆಯುವುದು ಇತ್ಯಾದಿ ಬಗ್ಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.

ಶಾಸಕ ಉಮನಾಥ್ ಕೋಟ್ಯಾನ್,ದ.ಕ.ಜಿಪಂ ಸಿಇಒ ಡಾ. ಕುಮಾರ್, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಪ್ರಭಾರ ತಹಶೀಲ್ದಾರ್ ಗುರುಪ್ರಸಾದ್, ಭೂ ದಾಖಲೆಗಳ ಉಪನಿರ್ದೇಶಕ ನಿರಂಜನ್, ಗ್ರಾಪಂ ಅಧ್ಯಕ್ಷ ಮನೋಹರ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News