ಬೆಂಗಳೂರು: ಸಾಲ ವಾಪಸ್ಸು ಕೇಳಿದ್ದಕ್ಕೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ವೃದ್ಧನ ಹತ್ಯೆ

Update: 2022-08-23 12:02 GMT

ಬೆಂಗಳೂರು, ಆ.23: ಕೊಡಿಸಿದ್ದ ಸಾಲ ವಾಪಸ್ಸು ಕೇಳಿದ್ದಕ್ಕೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ವೃದ್ಧನನ್ನು ಹತ್ಯೆ ಮಾಡಿರುವ ಘಟನೆ ಮಾರತ್‍ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮುನೇಕೊಳಲು ಬಳಿಯ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ವೆಂಕಟೇಶಪ್ಪ ಮೃತವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನೂ, ಶಿವಪ್ಪ ಹತ್ಯೆಗೈದ ಆರೋಪಿ ಎಂದು ಹೇಳಲಾಗುತ್ತಿದೆ.

ವೆಂಕಟೇಶಪ್ಪ, ನಂಜುಂಡ ರೆಡ್ಡಿ ಹಾಗೂ ಪ್ರಕಾಶ ಎಂಬುವವರಿಂದ ಶಿವಪ್ಪ ಅವರಿಗೆ ಸಾಲ ಕೊಡಿಸಿದ್ದರು. ಆದರೆ ಶಿವಪ್ಪ ಸಾಲವನ್ನು ವಾಪಸ್ ನೀಡಿರಲಿಲ್ಲ. ಅನೇಕ ಬಾರಿ ಕರೆ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ತನ್ನ ಮಧ್ಯಸ್ಥಿಕೆಯಲ್ಲಿ ಸಾಲ ಕೊಡಿಸಿದ್ದ ಕಾರಣ ವೆಂಕಟೇಶಪ್ಪ, ಶಿವಪ್ಪನನ್ನು ವಿಚಾರಿಸಲು ಮುನೇಕೊಳಲು ಬಳಿ ಇರುವ ಪರ್ಲ್ ಅಪಾರ್ಟ್ ಮೆಂಟ್ ಗೆ ಬಂದಿದ್ದರು. ಈ ಸಂದರ್ಭದಲ್ಲಿ ಮಾತುಕತೆ ನಡೆಸುತ್ತಿದ್ದಾಗ ಏಕಾಏಕಿ ಶಿವಪ್ಪ ಕೈಯಲ್ಲಿದ್ದ ಬ್ಯಾಟ್‍ನಿಂದ ವೆಂಕಟೇಶಪ್ಪನ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ.

ಈ ವೇಳೆ ವೆಂಕಟೇಶಪ್ಪ ಏಕಾಏಕಿ ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತಲೆಯಿಂದ ತೀವ್ರ ರಕ್ತಸ್ರಾವವಾದ ಕಾರಣ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಾರತ್ ಹಳ್ಳಿ ಠಾಣಾ ಪೊಲೀಸರು ಶಿವಪ್ಪನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News