ಚುನಾವಣಾ ಗಿಮಿಕ್ಗಾಗಿ 'ನಮ್ಮ ಕ್ಲಿನಿಕ್' ನಿರ್ಮಾಣ: ಬಿಜೆಪಿ ವಿರುದ್ಧ ಆಪ್ ಆರೋಪ
ಬೆಂಗಳುರು, ಆ.23: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರಕಾರವು ‘ನಮ್ಮ ಕ್ಲಿನಿಕ್’ ನಿರ್ಮಿಸುತ್ತಿದೆ. ಯೋಜನೆಯನ್ನು ಸರಕಾರ ಜಾರಿಗೆ ತರುತ್ತಿರುವ ವಿಧಾನವನ್ನು ಗಮನಿಸಿದರೆ ಬ್ರಹ್ಮಾಂಡ ಭ್ರಷ್ಟಾಚಾರವಾಗುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಜಗದೀಶ್ ವಿ ಸದಂ ಕಳವಳ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೆಹಲಿಯಲ್ಲಿ ಕೇವಲ 20 ಲಕ್ಷ ರೂ.ಗಳಲ್ಲಿ ವ್ಯವಸ್ಥಿತವಾಗಿ ನಿರ್ಮಾಣವಾದ ಮೊಹಲ್ಲಾ ಕ್ಲಿನಿಕ್ಗಳನ್ನು ರಾಜ್ಯದಲ್ಲಿ ಬೇರೆ ಹೆಸರಿನಲ್ಲಿ ನಿರ್ಮಿಸಲು ಬಿಜೆಪಿ ಸರಕಾರವು ತಲಾ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಭ್ರಷ್ಟ ಬಿಜೆಪಿ ಸರಕಾರವು ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಒದಗಿಸುವ ಯಾವುದೇ ಸದುದ್ದೇಶವಿಲ್ಲದೇ, ಕೇವಲ ಅಕ್ರಮಕ್ಕಾಗಿ ಹಾಗೂ ಎಲೆಕ್ಷನ್ ಗಿಮಿಕ್ಗಾಗಿ ನಮ್ಮ ಕ್ಲಿನಿಕ್ಗಳನ್ನು ನಿರ್ಮಿಸುತ್ತಿದೆ. ಇಂದಿರಾ ಕ್ಯಾಂಟೀನ್ನಂತೆ ಇದು ಕೂಡ ಪಾರದರ್ಶಕತೆಗೆ ವಿರುದ್ಧವಾಗಿ ಸಾಗುತ್ತಿದೆ’ ಎಂದು ಆರೋಪಿಸಿದರು.
‘ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರಕಾರವು 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್ಗಳನ್ನು ತೆರೆದಿದೆ. ಕೆಲವು ತಿಂಗಳ ಹಿಂದೆಯಷ್ಟೇ ಅಧಿಕಾರಕ್ಕೆ ಬಂದ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರಕಾರವು 100 ಮೊಹಲ್ಲಾ ಕ್ಲಿನಿಕ್ಗಳನ್ನು ಲೋಕಾರ್ಪಣೆ ಮಾಡಿದೆ. ಇವುಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆಗಳು ಸೇರಿದಂತೆ 200ಕ್ಕೂ ಹೆಚ್ಚು ಸೇವೆಗಳು ಉಚಿತವಾಗಿ ದೊರೆಯುತ್ತಿದೆ. ಸಿಎಂ ಬೊಮ್ಮಾಯಿಯವರ ಸರಕಾರ ಬಯಸಿದರೆ, ಕರ್ನಾಟಕದಲ್ಲೂ ಅಂತಹ ಕ್ಲಿನಿಕ್ಗಳನ್ನು ಉತ್ತಮ ಗುಣಮಟ್ಟದಲ್ಲಿ, ಸಂಪೂರ್ಣ ಪಾರದರ್ಶಕವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ತೆರೆಯಲು ಆಮ್ ಆದ್ಮಿ ಪಾರ್ಟಿಯು ರೂಪುರೇಷೆ ತಯಾರಿಸಿಕೊಡಲಿದೆ’ ಎಂದು ಅವರು ಹೇಳಿದರು.