ಬಿಲ್ಕಿಸ್ ಬಾನು ಜತೆ ಎಲ್ಲ ಸಮುದಾಯ ನಿಲ್ಲಬೇಕು: ಇರೋಮ್ ಶರ್ಮಿಳಾ ಚಾನು

Update: 2022-08-29 16:19 GMT

ಬೆಂಗಳೂರು, ಆ.29: ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ 11 ಮಂದಿ ಅಪರಾಧಿಗಳನ್ನು ಗುಜರಾತ್ ಸರಕಾರ ಬಿಡುಗಡೆಗೊಳಿಸಿರುವುದು ಖಂಡನೀಯವಾಗಿದ್ದು, ಇದರ ವಿರುದ್ಧ ಎಲ್ಲ ಸಮುದಾಯ ಧ್ವನಿಗೂಡಿಸುವುದು ಮಾತ್ರವಲ್ಲದೆ, ಆಕೆಯೊಂದಿಗೆ ನಿಲ್ಲಬೇಕು ಎಂದು ಮಣಿಪುರದ ಉಕ್ಕಿನ ಮಹಿಳೆ ಖ್ಯಾತಿಯ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ಕರೆ ನೀಡಿದರು.

ಸೋಮವಾರ ನಗರದ ಕೆಆರ್ ವೃತ್ತದ ಯುವಿಸಿ ಸಭಾಂಗಣದಲ್ಲಿ ಆಲ್ ಇಂಡಿಯಾ ಮಹಿಳಾ ಸಾಂಸ್ಕøತಿಕ ಸಂಘಟನೆ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡಿದ್ದ ‘ಬಿಲ್ಕಿಸ್ ಬಾನು ನಿಮ್ಮೊಂದಿಗೆ ನಾವಿದ್ದೇವೆ' ರಾಜ್ಯಮಟ್ಟದ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಮಾನವ-ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗಾಗಿ ಧ್ವನಿ ಎತ್ತಿದ ಪ್ರಗತಿಪರರನ್ನು ಹೋರಾಟಗಾರರನ್ನು ಜೈಲಿಗೆ ಹಾಕಿ, ಅತ್ಯಾಚಾರಿ ಕೊಲೆಗಡುಕರನ್ನು ರಕ್ಷಿಸುತ್ತಿರುವ ಸರಕಾರದ ನಡೆಯನ್ನು ಎಲ್ಲರೂ ಖಂಡಿಸಬೇಕಾಗಿದೆ. ಅದರಲ್ಲೂ ಬಿಲ್ಕಿಸ್ ಬಾನು ಜೊತೆಗೆ ಇಡೀ ಜನಸಮುದಾಯ ನಿಲ್ಲುವ ಅವಶ್ಯಕತೆ ಇದೆ ಎಂದರು.

ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ಮಾತನಾಡಿ, 75ರ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಒಂದೆಡೆ ದೇಶದ ಪ್ರಧಾನಿ ಹೆಣ್ಣುಮಕ್ಕಳ ರಕ್ಷಣೆ ಹಕ್ಕುಗಳ ಬಗ್ಗೆ ದೊಡ್ಡ-ದೊಡ್ಡ ಪದಗಳನ್ನು ಬಳಸಿ ಭಾಷಣ ಮಾಡಿದ್ದಾರೆ. ಇನ್ನೊಂದೆಡೆ ಅವರ ಮೂಗಿನಡಿಯಲ್ಲಿ ಗುಜರಾತ್ ಸರಕಾರ ಸನ್ನಡತೆ ಹೆಸರಿನಲ್ಲಿ 11 ಜನ ಅತ್ಯಾಚಾರಿಗಳಿಗೆ ಅದ್ದೂರಿ ಬಿಡುಗಡೆಯ ಅಮೃತವನ್ನು ಉಣಿಸಿತು ಎಂದು ಬೇಸರ ವ್ಯಕ್ತಪಡಿಸಿದರು.

ಗುಜರಾತ್ ಘೋರ ಕೋಮುಗಲಭೆಯಲ್ಲಿ ಪೂರ್ವನಿಯೋಜಿತ ಘಟನೆಯ ಭಾಗಿಯಾದ ಅತ್ಯಾಚಾರಿಗಳಿಗೆ ಅಂದಿನ ಗುಜರಾತ್ ಸರಕಾರ, ಪೆÇಲೀಸ್ ವ್ಯವಸ್ಥೆ ರಕ್ಷಣೆ ನೀಡಲು ಮುಂದದಾಗ, ಬಿಲ್ಕಿಸ್ ಬಾನುವಿನ ಎಡೆಬಿಡದ ಹೋರಾಟ, ಎನ್‍ಎಚ್‍ಆರ್‍ಸಿಯ ವರದಿಯಿಂದ ಪ್ರಕರಣವನ್ನು ಗುಜರಾತ್‍ನಿಂದ ಮುಂಬೈ ಹೈಕೋರ್ಟ್‍ಗೆ ವರ್ಗಾಯಿಸಿ ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆ ದೊರಕುವಂತಾಯಿತು ಎಂದ ಅವರು, ಈಗ ಇದನ್ನು ಗಾಳಿಗೆ ತೂರಿ ಗುಜರಾತ್ ಸರಕಾರ ಘೋರ ಅನ್ಯಾಯವೆಸಗಿದೆ ಎಂದು ಟೀಕಿಸಿದರು.

ಇದು ಕೇವಲ ಒಬ್ಬ ಮಹಿಳೆಗೆ, ಮುಸ್ಲಿಮ್ ಹೆಣ್ಣುಮಗಳಿಗೆ ಆಗಿರುವ ಅನ್ಯಾಯವಲ್ಲ, ಇಡೀ ಮಾನವತೆಗೆ ಆಗಿರುವ ಮೋಸ. ಇದರ ವಿರುದ್ಧ ಬಲಿಷ್ಠ ಹೋರಾಟಕ್ಕೆ ಜನಸಮುದಾಯ ಸಜ್ಜಾಗಬೇಕಿದೆ ಎಂದು ಅವರು ಹೇಳಿದರು.

ಹಿರಿಯ ನ್ಯಾಯವಾದಿ ಹೇಮಲತಾ ಮಹಿಷಿ ಮಾತನಾಡಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವಸಂದರ್ಭ ಬಂದಿದ್ದು, ಅದು ನಮ್ಮ ಕರ್ತವ್ಯ. ಈಗ ನಾವು ಮೌನವಾಗಿದ್ದರೆ ಅನ್ಯಾಯಕ್ಕೆ ಅಪರಾಧಕ್ಕೆ ಸಮ್ಮತಿ ನೀಡಿದಂತೆ. ಯಾವುದೇ ಸರಕಾರ ಅಧಿಕಾರದಲ್ಲಿದ್ದಾಗ ಇಂತಹ ಘಟನೆ ನಡೆದರೆ ನಾವು ಒಕ್ಕೊರಲಿನಿಂದ ಖಂಡಿಸಬೇಕು ಎಂದರು.

ಎಐಎಂಎಸ್‍ಎಸ್ ರಾಜ್ಯಾಧ್ಯಕ್ಷೆ ಅಪರ್ಣಾ ಬಿ.ಆರ್. ಮಾತನಾಡಿ, ಗೋಧ್ರಾ ನರಮೇಧ, ಹತ್ಯಾಕಾಂಡದಲ್ಲಿ ಇಂತಹ ಅನೇಕ ಘೋರ ಕೃತ್ಯಗಳು ನಡೆದಿವೆ. ಈ ಕ್ಷಮಾಪಣೆ ನ್ಯಾಯದ ಅಪಹಾಸ್ಯ, ಮಾನವತೆಗೆ ಆದ ಅವಮಾನ. ಜನಗಳ ಮುಂದೆ ಸರಕಾರದ ಮೋಸವನ್ನು ಬಯಲು ಮಾಡಬೇಕಿದೆ. ಈ ವ್ಯವಸ್ಥೆ ತುಂಬಾ ಅಧೋಗತಿಗೆ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಸಮಾವೇಶದ ಅಧ್ಯಕ್ಷತೆಯನ್ನು ಎಐಎಂಎಸ್‍ಎಸ್ ರಾಜ್ಯ ಉಪಾಧ್ಯಕ್ಷೆ ಎಂ.ಎನ್.ಮಂಜುಳಾ ವಹಿಸಿದ್ದರು. ಎಐಎಂಎಸ್‍ಎಸ್ ಶೋಭಾ ಎಸ್., ಶಾಂತಾ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News