×
Ad

ಹಿಂದುಳಿದ, ದಲಿತರ ಮಕ್ಕಳಿಗೆ ಕೇಸರಿ ಶಾಲು, ಧರ್ಮರಕ್ಷಣೆ; ನಿಮ್ಮ ಮಕ್ಕಳಿಗೆ ವಿದೇಶಗಳಲ್ಲಿ ಶಿಕ್ಷಣ, ಇದು ಯಾವ ನ್ಯಾಯ?

Update: 2022-09-06 18:06 IST

ಮಂಗಳೂರು, ಸೆ.6: ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್  ಇಲ್ಲಿ ಬಹಳ ಪವರ್ ಫುಲ್ ಅಂತ ಭಾವಿಸಿದ್ದೆ. ಆದರೆ ಅವರ ಮಾತಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ.  ಬಿಟ್ ಕಾಯಿನ್ ವಿಚಾರ ಬಂದಾಗ ನಳಿನ್ ಕುಮಾರ್ ಮೌನ ವಹಿಸುತ್ತಾರೆ. ಬಿಟ್ ಕಾಯಿನ್ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆದರೆ ಸರಕಾರವೇ ಬೀಳುತ್ತೆ ಎಂದು ಎಂದು ಮಾಜಿ ಸಚಿವ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಪಿ ಎಸ್ ಐ ನೇಮಕಾತಿ ಹಗರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಎಲ್ಲರ ಬಗ್ಗೆ ವೈಯಕ್ತಿಕವಾಗಿ ಟೀಕೆ, ಆರೋಪ ಮಾಡುವ ನಳಿನ್ ಕುಮಾರ್ ಬಿಟ್ ಕಾಯಿನ್ ವಿಷಯವೆತ್ತಿದರೆ ಮೌನವಾಗುತ್ತಾರೆ. ಈ ಬಗ್ಗೆ ಪಾರದರ್ಶಕ ತನಿಖೆಯಾಗಲಿ ಎಂದವರು ಹೇಳಿದರು.  

ದ.ಕ. ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಗ್ಗೆ ಇಲ್ಲಿಯ ಯುವಕರು ಸೇರಿದಂತೆ ಜನರಿಗೆ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಅದೆಲ್ಲವೂ ಹುಸಿಯಾಗಿದ್ದು, ಡಬಲ್ ಇಂಜಿನ್ ಸರಕಾರದಿಂದ ಡಬಲ್ ಧೋಖಾ ಎಂಬುದು ಅವರಿಗೆ ಅರಿವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರಧಾನಿ ಮೋದಿಯವರು ಹೋದಲ್ಲೆಲ್ಲಾ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಇಲ್ಲಿ ಕನ್ನಡನೂ ಮಾತನಾಡಿಲ್ಲ, ತುಳುವಿನಲ್ಲೂ ಮಾತನಾಡಿಲ್ಲ ಇದರಿಂದ ಬಹಳಷ್ಟು ಜನರಿಗೆ ನಿರಾಸೆಯಾಗಿದೆ ಎಂದರು.

ಕಾಂಗ್ರೆಸ್‌ನವರು 75 ವರ್ಷ ಏನೂ ಮಾಡಿಲ್ಲ ಎಂದು ಹೇಳುವ ಬಿಜೆಪಿಗರು ಕಾಂಗ್ರೆಸ್ ಅವಧಿಯಲ್ಲಿ  ಮಾಡಿದ ಸರಕಾರಿ ಆಸ್ತಿಗಳನ್ನೆಲ್ಲಾ ಮಾರಾಟ ಮಾಡುತ್ತಿದ್ದೀರಲ್ಲಾ? ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ ಹೆಸರಿಡ ಬೇಕೆಂಬ ಇಲ್ಲಿನ  ಜನರ ಬೇಡಿಕೆಗೆ ಓಗೊಡದೆ, ಅದಕ್ಕೆ ಅದಾನಿ ಹೆಸರಿಡಲಾಗಿದೆಯಲ್ಲಾ? ಪ್ರಧಾನಿ ಮೋದಿ ಯವರು ಮನಸ್ಸು ಮಾಡಿದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡುತ್ತಾರೆ ಎನ್ನುವವರಿಗೆ ಈ ಬಗ್ಗೆ ಕೇಳಲು ಧೈರ್ಯವೇ ಇಲ್ಲ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಭೇಟಿ ನೀಡಿದಾಗ ಅವರ ಎದರುಲ್ಲೇ ಮುಖ್ಯಮಂತ್ರಿಯವರು ನಾರಾಯಣಗುರು ಪೀಠ ಹಾಗೂ  ನಾರಾಯಣ ಗುರು ನಿಗಮ ಸ್ಥಾಪನೆಯ ಘೋಷಣೆ ಮಾಡುವ ಬಗ್ಗೆ ಹಲವರು ನಿರೀಕ್ಷೆ ಇರಿಸಿದ್ದರು. ಆದರೆ ಅದೂ ಆಗಿಲ್ಲ.  ಈ ಬಗ್ಗೆ ನನಗೆ ಅಚ್ಚರಿಯಾಗಿಲ್ಲ. ಯಾಕೆಂದರೆ ಈ ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋದಿಂದ ಹಿಡಿದು ಪದೇ ಪದೇ ಅವಮಾನ ಮಾಡಿದೆ. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ ನಾರಾಯಣಗುರುಗಳ ವಿಷಯವನ್ನೇ ಕೈ ಬಿಟ್ಟಿದ್ದರು. ಆವಾಗಲೂ ಯಾವುದೇ ಬಿಜೆಪಿ ನಾಯಕ ಧ್ವನಿ ಎತ್ತಿಲ್ಲ. ಸಮುದಾಯದ ಜನರು ತಿರುಗಿ ಬಿದ್ದಾಗ ಒಂದೂವರೆ ತಿಂಗಳ ಬಳಿಕ ಸಚಿವ ಸನಿಲ್ ಕುಮಾರ್ ಪತ್ರ ಬರೆಯುತ್ತಾರೆ. ನಾರಾಯಣ ಗುರುಗಳ ಹೆಸರಿನಲ್ಲಿ ಮತ ಪಡೆಯುವವರು, ಅನ್ಯಾಯ ಆದಾಗ ಬಿಜೆಪಿ ಎಂಎಲ್‌ಎ ಬಾಯಿಗೆ ಯಾಕೆ ಬೀಗ ಬೀಳುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಬಿಜೆಪಿಯವರದ್ದು ಕೇವಲ ಧರ್ಮ ರಾಜಕೀಯ. ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅಂದ್ರೆ ಹಲಾಲ್, ಜಟ್ಕಾ ಬಗ್ಗೆ ಮಾತನಾಡುತ್ತಾರೆ.  ಅಭಿವೃದ್ಧಿಗೆ ಹಣ ನೀಡಿ ಎಂದರೆ ಕಾಶ್ಮೀರ್ ಫೈಲ್ ನೋಡಿದ್ರಾ ಅಂತಾ ಕೇಳುತ್ತಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡಿ ಎಂದರೆ, ಟಿಪ್ಪುಸುಲ್ತಾನ್ ವಿಚಾರ ಪ್ರಸ್ತಾಪಿಸುತ್ತಾರೆ. ನಿರುದ್ಯೋಗ ಬಗ್ಗೆ ಮಾತನಾಡಿ ಅಂದರೆ ಯುವಕರಿಗೆ ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆ, ಗೋರಕ್ಷಣೆಗೆ ಕಳುಹಿಸುತ್ತಾರೆ. ಅಕ್ಕಿ, ಮೊಸರು, ಗೋಧಿ ಮೊದಲಾದ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ಯಾಕೆ ಹಾಕಿದ್ದೀರಿ ಎಂದು ಪ್ರಶ್ನಿಸಿದರೆ, ಅಝಾನ್ ನಿಷೇಧಿಸಬೇಕು ನಿಮ್ಮ ಅಭಿಪ್ರಾಯ ಏನು ಎಂದು ಕೇಳುತ್ತಾರೆ.  ಬಿಜೆಪಿ ಶಾಸಕರು, ಬಿಜೆಪಿ ಸಚಿವರೇ ಭೃಷ್ಟಾಚಾರದ ಬ್ರೋಕರ್‌ಗಳಾಗಿದ್ದಾರೆ. ಬಿಜೆಪಿಯವರ ಮಕ್ಕಳು ವಿದೇಶದಲ್ಲಿ ಉದ್ಯೋಗ, ವಿದ್ಯಾರ್ಜನೆ ಮಾಡುತ್ತಾರೆ, ಸಂಸ್ಥೆಗಳನ್ನು ಕಟ್ಟುತ್ತಾರೆ.  ಆದರೆ ಹಿಂದುಳಿದ, ದಲಿತರ ಮಕ್ಕಳಿಗೆ ಕೇಸರಿ ಶಾಲು, ಗೋರಕ್ಷಣೆ, ಧರ್ಮ ರಕ್ಷಣೆಯ ಕೆಲಸ. ಬಿಜೆಪಿಯವರ ಎಷ್ಟು ನಾಯಕರ ಮಕ್ಕಳು ಗೋಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗೋಶಾಲೆಗಳಲ್ಲಿ ಪೋಷಣೆ ಯೋಜನೆಯಡಿ ಎಷ್ಟು ಮಂದಿ ದತ್ತು ಕಾರ್ಯ ನಡೆಸುತ್ತಿದ್ದಾರೆ ಎಂಬುದನ್ನು ಬಿಜೆಪಿಯವರು ತೋರಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಪಿಎಸ್‌ಐ, ಕೆಪಿಟಿಸಿಎಲ್ ಸೇರಿದಂತೆ ಹಗರಣ ಬಗ್ಗೆ ನಾವು ನ್ಯಾಯಾಂಗ ತನಿಖೆಗೆ ಆಗ್ರಹಿಸಿದರೆ, ಕಾಂಗ್ರೆಸ್‌ನವರ ಹೆಸರು ಬರುತ್ತೆ ಅನ್ನುತ್ತಾರೆ. ಬರಲಿ, ಬಿಡಿ ಕಾಂಗ್ರೆಸ್‌ನರವದ್ದು ತಾನೇ ನಿಮಗೆ ಯಾಕೆ ಭಯ, ತಾಕತ್ತಿದ್ದರೆ ಒದ್ದು ಒಳಗೆ ಹಾಕಿ, ತನಿಖೆ ಮಾಡಲು ತಾಕತ್ತು ಇದೆಯೇ? ಕಾಂಗ್ರೆಸ್‌ನವರು ತಾನೇ ಸಿಕ್ಕಿ ಹಾಕಿಕೊಳ್ಳುವುದು. ನಿಮಗೆ ಯಾಕೆ ಭಯ? ನಾವು ಯಾವುದೇ ತನಿಖೆಗೆ ಸಿದ್ಧ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಬಿಜೆಪಿಯವರು ರಾಜ್ಯದಲ್ಲಿ ಯುಪಿ ಮಾದರಿ ತರುತ್ತಾರಂತೆ. ರಾಜ್ಯದ ಎಷ್ಟು ಮಂದಿ ಯುಪಿಯಲ್ಲಿ ದುಡಿಯುತ್ತಾರೆ. ಜನ ಉದ್ಯೋಗ ಹುಡುಕಿಕೊಂಡು ಕರ್ನಾಟಕಕ್ಕೆ ಬರುತ್ತಾರೆ. ಇಲ್ಲಿಂದ ಜನರು ಯುಪಿ ಅಥವಾ ಬಿಹಾರದಲ್ಲಿ ಉದ್ಯೋಗ ಹುಡುಕಿ ಹೋಗುತ್ತಿಲ್ಲ. ಯುಪಿಯ ವಾರಾಣಾಸಿ ಹಾಗೂ ಇತರ ಘಾಟಿಗಳಲ್ಲಿ ಲೇಸರ್ ಶೋ ನಡೆಸುತ್ತಿರುವುದು ಕನ್ನಡಿಗರು ಕಟ್ಟುತ್ತಿರುವ ದುಡ್ಡಿನಿಂದ.  ಕುವೆಂಪುವರ ಶಾಂತಿಯ ತೋಟ ನಮ್ಮ ರಾಜ್ಯ. ನಾರಾಯಣಗುರು, ಬಸವಣ್ಣರವರ ನಾಡಿದು. ಯುವಕರು ಬಿಜೆಪಿಯವರ ಈ ಕೋಮು ಸಂಘರ್ಷದ ಬಲೆಗೆ ಬೀಳಬಾರದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮುಖಂಡರಾದ ಬಿ. ರಮಾನಾಥ ರೈ, ಹರೀಶ್ ಕುಮಾರ್, ಮಧು ಬಂಗಾರಪ್ಪ, ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಎ.ಸಿ. ವಿನಯ ರಾಜ್, ಕೆ.ಕೆ. ಶಾಹುಲ್ ಹಮೀದ್, ಬಿ.ಎ. ಮೊಯ್ದಿನ್‌ ಬಾವ, ಜೆ.ಆರ್. ಲೋಬೊ, ಶಾಲೆಟ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.

ಮುರುಗಾ ಶ್ರೀ ಪ್ರಕರಣದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಆರೋಪ ಗಂಭೀರವಾಗಿದ್ದು, ಈ ಬಗ್ಗೆ ನ್ಯಾಯಯುತ ತನಿಖೆಯಾಗಿ ಸಂವಿಧಾನವಾಕವಾಗಿ ನ್ಯಾಯ ಕೊಡಿಸಬೇಕೆಂದು ನಾನು, ಸಿದ್ಧರಾಮಯ್ಯ ಖುದ್ದು ಆಗ್ರಹಿಸಿದ್ದೇವೆ. ಇದಕ್ಕಿಂತ ಸ್ಪಷ್ಟ ನಿಲುವು ಏನು? ಕಾನೂನು ಪ್ರಕಾರ ಏನಾಗಬೇಕು, ಕಾನೂನಿನಡಿ ತಪ್ಪಿತಸ್ಥರು ಯಾರೇ ಆಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂಬುದನ್ನು ಕಾಂಗ್ರೆಸ್‌ನವರು ಮೊದಲ ದಿನದಿಂದಲೂ ಹೇಳುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತಿವೃಷ್ಠಿಯಿಂದ ಎಲ್ಲವೂ ನಾಶವಾಗಿದೆ. ಗೃಹ ಸಚಿವ ಅಮಿತ್ ಶಾ ಎನ್‌ಡಿಆರ್‌ಎಫ್‌ನ ಮುಖ್ಯಸ್ಥರು, ಅವರು ಬೆಂಗಳೂರಿಗೆ ಬಂದಾಗ ಅವರಿಗೆ ವಿಶೇಷ ಕ್ರಿಯಾ ಪಡೆ ರಚಿಸಿ ಮನವಿ ಮಾಡುವ ತಾಕತ್ತು ಬಿಜೆಪಿ ಶಾಸಕರು, ಸಂಸದರಿಗೆ ಇಲ್ಲವಾಗಿತ್ತು. ಜಿಎಸ್‌ಟಿಯಲ್ಲಿ ರಾಜ್ಯದ ಪಾಲು ಕೇಳಲು ಬಿಜೆಪಿ ಸರಕಾರದಿಂದ ಆಗುತ್ತಿಲ್ಲ. ದೇಶದಲ್ಲಿಯೇ ಅತ್ಯಧಿಕ ಆದಾಯ ತೆರಿಗೆ ಪಾವತಿಸುವ ದೇಶದ ಎರಡನೆ ರಾಜ್ಯವಾಗಿರುವ, ಆರ್ಥಿಕವಾಗಿ ಪ್ರಗತಿಪರವಾಗಿರುವ ಕರ್ನಾಟಕವನ್ನು ಸಾಲದಲ್ಲಿ ಮುಳುಗಿಸಲಾಗಿದೆ. ಸರ್ಕಾರಕ್ಕೆ ಕಮಿಷನ್‌ನಲ್ಲಿ ಮಾತ್ರ ಆಸಕ್ತಿ. ಇದನ್ನು ಕಾಂಗ್ರೆಸ್‌ನವರು ಹೇಳುತ್ತಿಲ್ಲ. ಬಿಜೆಪಿಯವರೇ ಹೇಳುತ್ತಿರುವುದು. ಬಿಜೆಪಿಯವರೇ ಆದ ಯೋಗೇಶ್ವರ್, ವಿಶ್ವನಾಥ್, ಯತ್ನಾಳ್, ರೇಣುಕಾಚಾರ್ಯ, ಮಾಧುಸ್ವಾಮಿ ಸೇರಿದಂತೆ ಬಿಜೆಪಿ ವಿರುದ್ಧವೇ ಟೀಕೆ ಮಾಡುತ್ತಾರೆ. ಕೆ.ಎಸ್ ಈಶ್ವರಪ್ಪವರು  ಸರಕಾರದ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ. ರಾಜ್ಯದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಜಗಳವಾಗುತ್ತಿದೆ. ಪ್ರಧಾನಿ ಮೋದಿಯವರು ಬರುವ ಸಂದರ್ಭದಲ್ಲಿ ಸಂಸದರನ್ನೇ ಬದಲಾಯಿಸಬೇಕೆಂಬ ಅಭಿಯಾನ ನಡೆಸುತ್ತಿರುವುದು ಬಿಜೆಪಿಯ ಪರಿಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಆದರೆ ಬಿಜೆಪಿಯವರು ನಮ್ಮ ಪಕ್ಷದ ಶಿಸ್ತಿನ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News