ಅರಣ್ಯ ಹುತಾತ್ಮರ ಪರಿಹಾರ 30 ಲಕ್ಷದಿಂದ 50 ಲಕ್ಷ ರೂ.ಗೆ ಏರಿಕೆ: ಸಿಎಂ ಬೊಮ್ಮಾಯಿ ಘೋಷಣೆ

Update: 2022-09-11 08:32 GMT

ಬೆಂಗಳೂರು, ಸೆ.11: ಅರಣ್ಯ ಹುತಾತ್ಮರ ಕುಟುಂಬಕ್ಕೆ ಸ್ಥಿರತೆ ಮತ್ತು ಭದ್ರತೆ ಒದಗಿಸುವ ದೃಷ್ಟಿಯಿಂದ 30 ಲಕ್ಷ  ರೂ.ಗಳಿದ್ದ ಪರಿಹಾರದ ಮೊತ್ತವನ್ನು 50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai, Chief minister of Karnataka)  ಘೋಷಿಸಿದ್ದಾರೆ.

 ಅವರು ಇಂದು  ಅರಣ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 2022 ರಲ್ಲಿ ಭಾಗವಹಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿ ಮಾತನಾಡುತ್ತಿದ್ದರು.

 ಹುತಾತ್ಮರಿಗೆ 20 ಲಕ್ಷ ರೂ.ಗಳಿದ್ದ ಪರಿಹಾರವನ್ನು 30 ಲಕ್ಷ ರೂ.ಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಹೆಚ್ಚಿಸಿದ್ದರು.  ಹುತಾತ್ಮರ ನೇಮಕಾತಿ, ಕಲ್ಯಾಣ ಎಲ್ಲವನ್ನೂ ಸರ್ಕಾರ ಅತ್ಯಂತ ಸಹಾನುಭೂತಿಯಿಂದ ಮಾಡಲಿದೆ. ನೀವು ಅರಣ್ಯ ರಕ್ಷಣೆ ಮಾಡಿ, ಸರ್ಕಾರ ನಿಮ್ಮ ರಕ್ಷಣೆ ಮಾಡುತ್ತದೆ ಎಂದರು. 

ಶೇ.21 ರಷ್ಟಿರುವ ಅರಣ್ಯ ಪ್ರದೇಶ ಶೇ 30 ರಷ್ಟು ನಮ್ಮ ಗುರಿ.   ರಾಜ್ಯದಲ್ಲಿ ನಾಲ್ಕು ಲಕ್ಷ ಹೆಕ್ಟೇರ್ ಗಿಂತ  ಹೆಚ್ಚು ಬಂಜರು ಭೂಮಿ ಇದ್ದು  ಇದನ್ನು ನಾವು  ಅರಣ್ಯೀಕರಣ ಮಾಡುವ ಮೂಲಕ ಅರಣ್ಯ ಪ್ರದೇಶ ಹೆಚ್ಚಿಸಬಹುದು. ಬಹಳಷ್ಟು ಗುಡ್ಡಗಾಡುಗಳಿವೆ. ಅಲ್ಲಿ ಮೂಲ ಗಿಡಗಳನ್ನು ಬೆಳೆಸುವ ಮೂಲಕ ಉತ್ತಮಗೊಳಿಸಬಹುದು. ಟಾಟಾ ಸಂಸ್ಥೆಯ ಕಬ್ಬಿಣದ ಅದಿರಿನ ಗಣಿಗಳು ಜಮ್ ಶೇಡ್ ಪುರದಲ್ಲಿದ್ದು, ಅಲ್ಲಿ ಎಲ್ಲೆಲ್ಲಿಯೂ ಹಸಿರಿನಿಂದ ತುಂಬಿದೆ. ಗಣಿಗಳಲ್ಲಿ ಮಾಡಬಹುದಾದರೆ ಗುಡ್ಡಗಾಡಿನಲ್ಲಿ ಸಾಧ್ಯವಿಲ್ಲವೇ. ಇಚ್ಚಾಶಕ್ತಿ ಇದ್ದರೆ ಅರಣ್ಯ ಪ್ರದೇಶ ಹೆಚ್ಚಿಸೋಣ. ಜನಾಂಗಕ್ಕೆ ಇದಕ್ಕಿಂತ ಹೆಚ್ಚಿನ ಕೊಡುಗೆ ಮತ್ತೊಂದಿಲ್ಲ ಎಂದರು.

ಪರಿಸರ ಬಜೆಟ್

 ಒಂದು ವರ್ಷದಲ್ಲಿ  ಆಗುವ ಪರಿಸರ ನಷ್ಟವನ್ನು  ಅದೇ ವರ್ಷ ತುಂಬುವ ಕೆಲಸ ಮಾಡಬೇಕು. ಭಾರತದ ದೇಶದಲ್ಲಿ ಪರಿಸರ ಆಯವ್ಯಯ ರೂಪಿಸಿದ ಪ್ರಥಮ ರಾಜ್ಯ ನಮ್ಮದು. ನೂರು ಕೋಟಿ ರೂ.ಗಳನ್ನು ಇದಕ್ಕೆ ಮೀಸಲಿಡಲಾಗಿದೆ. ಈಗಾಗಲೇ ಪರಿಸರ ಆಯವ್ಯಯ ಮಾಡುವ ಬಗೆಯನ್ನು ಇಲಾಖೆ ರೂಪಿಸಿದೆ. ಸರ್ಕಾರ ಕ್ರಿಯಾಯೋಜನೆಗೆ ಅನುಮೋದನೆ ಕೂಡ ನೀಡಿದೆ. ಈ ವರ್ಷ 100 ಕೋಟಿ ರೂ.ಗಳಲ್ಲಿ  ಅರಣ್ಯೀಕರಣ ಹೆಚ್ಚಿಗೆ ಮಾಡ ಲಾಗುವುದು. ಅರಣ್ಯ ಸೂಕ್ಷ್ಮ ಪ್ರದೇಶಗಳನ್ನು ಉಳಿಸಿಕೊಳ್ಳಲು ವಿಶೇಷ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಮಾಡಿದೆ. ಅರಣ್ಯ ಮತ್ತು ಪರಿಸರ ಇಲಾಖೆ ನೈಸರ್ಗಿಕ ಸಂಪತ್ತು ರಕ್ಷಿಸಿ, ಪರಿಸರ ನಷ್ಟವನ್ನು ತುಂಬುವ ಪ್ರಯತ್ನವನ್ನು ಆಸಕ್ತಿ ವಹಿಸಿ ಮಾಡುತ್ತಿದ್ದು, ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.ಈ ವರ್ಷ ಕ್ರಿಯಾಯೋಜನೆಯನ್ನು ಅನುಷ್ಠಾನ ಮಾಡುವ ಮೂಲಕ ಹೊಸ ಮಾದರಿಯನ್ನು ಸಿದ್ಧಪಡಿಸಿ ಬರುವ ದಿನಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಬಹುದು ಎಂದರು.

ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಕಡಿಮೆ ಮಾಡುವತ್ತ ಶ್ರಮಿಸಬೇಕು

ಅರಣ್ಯ ಇಲಾಖೆ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಕಡಿಮೆ ಮಾಡುವತ್ತ ಶ್ರಮಿಸಬೇಕು. ಆನೆಗಳ ಕಾಟ ದೊಡ್ಡ ಪ್ರಮಾಣದಲ್ಲಿ ಇದೆ. ಅವುಗಳನ್ನು ರಕ್ಷಣೆ ಮಾಡಲು ಹೊಸ ವಿಧಾನ ಬಳಸಲು 100 ಕೋಟಿ ರೂ.ಗಳನ್ನು ಇದಕ್ಕಾಗಿಯೇ ಒದಗಿಸಲಾಗಿದೆ. ದಿವಂಗತ ಉಮೇಶ್ ಕತ್ತಿಯವರು ಬಹಳ ಆಸಕ್ತಿ ವಹಿಸಿದ್ದರು. ಬೇಲಿ ಹಾಕುವ ಹೊಸ ವಿಧಾನಗಳ ಬಗ್ಗೆ ಚರ್ಚೆ ಮಾಡಿ ಬಂಡೀಪುರದಲ್ಲಿ ಅದರ ಪ್ರಯೋಗವೂ ನಡೆಯುತ್ತಿದೆ ಎಂದರು.

ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್‌ ಕಿಶೋರ್‌ ಸಿಂಗ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಎಲ್ಗರ್ ಪರಿಷದ್ ಪ್ರಕರಣ: ಬಂಧಿತ ಹೋರಾಟಗಾರರಿಗೆ ‘ವ್ಯವಸ್ಥಿತವಾಗಿ’ ವೈದ್ಯಕೀಯ ಚಿಕಿತ್ಸೆ ನಿರಾಕರಣೆ; ಕುಟುಂಬಸ್ಥರ ಆರೋಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News