ಉಪ್ಪಿನಂಗಡಿ: ಸರಕಾರಿ ಕಾಲೇಜಿಗೆ ನುಗ್ಗಿ ಕಳವು; ಪ್ರಕರಣ ದಾಖಲು
ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೀಗ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಕಳ್ಳತನ ನಡೆಸಿದ ಬಗ್ಗೆ ವರದಿಯಾಗಿದೆ.
ಕಾಲೇಜಿನಲ್ಲಿ ಪ್ರಸಕ್ತ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಾಲೇಜಿನ ಕೆಮಿಸ್ಟ್ರೀ ಲ್ಯಾಬ್ ಕೊಠಡಿಯ ಬೀಗ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಕೊಠಡಿಯಲ್ಲಿದ್ದ ಅಲ್ಮೇರಾದ ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಬೀಗದ ಕೀ ಯನ್ನು ಬಯಸಿ ನಾಲ್ಕೈದು ಡ್ರಾಯರ್ ಗಳ ಬೀಗ ಮುರಿದಿದ್ದಾರೆ. ಕಚೇರಿಯೊಳಗೆ ಜಾಲಾಡಿದ ಸ್ವರೂಪವನ್ನು ಕಂಡಾಗ ಪರೀಕ್ಷಾ ಪ್ರಶ್ನೆಪತ್ರಿಕೆಯನ್ನು ಬಯಸಿ ಈ ಕಳವು ಯತ್ನ ನಡೆದಿರಬಹುದೇ ಎಂಬ ಶಂಕೆ ಮೂಡಿದೆ. ಪ್ರಶ್ನಾಪತ್ರಿಕೆಗಳನ್ನು ರಕ್ಷಿಸಿ ಇಡಲಾದ ಕವಾಟಿನ ಬೀಗವು ಪ್ರಾಂಶುಪಾಲರ ಬಳಿಯಲ್ಲಿಯೇ ಇದ್ದ ಹಿನ್ನೆಲೆಯಲ್ಲಿ ಹಾಗೂ ಕವಾಟು ಒಂದಷ್ಟು ಭದ್ರತಾ ವ್ಯವಸ್ಥೆಯ ಹಿನ್ನೆಲೆಯಲ್ಲಿ ಪ್ರಶ್ನಾಪತ್ರಿಕೆಯ ಕಳವು ಸಾಧ್ಯವಾಗಿಲ್ಲ. ಇದೇ ವೇಳೆ ಕಾಲೇಜಿನಲ್ಲಿದ್ದ ಕೆಲವು ದೀಪಕಂಬಗಳ ಸಹಿತ ವಸ್ತುಗಳನ್ನು ಕದೊಯ್ದಿರುವುದು ಕಂಡು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆಯ ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿದ್ದು, ಕಾಲೇಜಿನ ಪ್ರಾಂಶುಪಾಲ ಶೇಖರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಪೊಲೀಸರಿಂದ ತನಿಖಾ ಪ್ರಕ್ರಿಯೆ ನಡೆಯುತ್ತಿದೆ.