ಸಂವಿಧಾನ ಮತ್ತು ವಚನಗಳು

Update: 2022-09-23 05:06 GMT

ಕರ್ನಾಟಕದಲ್ಲಿ ‘ಸಂವಿಧಾನ ಓದು’ ಎಂಬ ಆಂದೋಲನವನ್ನೇ ಆರಂಭಿಸಿ, ವಿವಿಧ ನಗರಗಳಲ್ಲಿ ಸಂಚರಿಸಿ ಭಾರತದ ಸಂವಿಧಾನದ ಆಶಯಗಳನ್ನು ಮನೆ-ಮನಗಳಿಗೆ, ಶಾಲಾ-ಕಾಲೇಜುಗಳಿಗೆ ತಲುಪಿಸುವ ಮಹತ್ವದ ಕೆಲಸವನ್ನು ನ್ಯಾಯಮೂರ್ತಿ ಶ್ರೀ ಎಚ್. ಎನ್. ನಾಗಮೋಹನದಾಸ್ ಅವರು ಮಾಡುತ್ತಿದ್ದಾರೆ. ಪ್ರಸಕ್ತ ‘ಸಂವಿಧಾನ ಮತ್ತು ವಚನಗಳು’ ಕೃತಿಯಲ್ಲಿ ಸಂವಿಧಾನದ ಮೂಲ ಆಶಯಗಳು ಜನಪರವಾದ ತತ್ವಶಾಸ್ತ್ರೀಯ ಚಿಂತನೆಗಳಲ್ಲೂ ಹೇಗೆ ಪ್ರತಿಪಾದನೆಗೊಂಡಿವೆ ಎಂಬ ಅಂಶವನ್ನು ತಮ್ಮ ಆಳವಾದ ಅಧ್ಯಯನ, ವಿಶ್ಲೇಷಣೆಯ ಮೂಲಕ ಸಾದರಪಡಿಸಿದ್ದಾರೆ. ವಿಶ್ವದ ಮತ್ತು ಭಾರತೀಯ ಪರಂಪರೆಯಲ್ಲಿ ಜೀವಪರ ಚಿಂತನೆಗಳು ಜೀವ ವಿರೋಧಿ ಚಿಂತನೆಗಳ ವಿರುದ್ಧ ಸದಾ ಸೆಣಸುತ್ತಲೇ ಬಂದಿವೆ. ಅಂಥ ಕೆಲವು ತಾತ್ವಿಕ ಧಾರೆಗಳನ್ನು ಪ್ರಸ್ತಾಪಿಸುತ್ತ 12ನೇ ಶತಮಾನದ ಬಸವಣ್ಣ ಮತ್ತು ಎಲ್ಲ ಶರಣರ ವಚನಗಳಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನದ ಆಶಯಗಳು ಹೇಗೆ ವ್ಯಕ್ತವಾಗಿವೆ ಎಂಬುದನ್ನು ವಚನಗಳನ್ನಾಧರಿಸಿ, ತುಲನಾತ್ಮಕವಾಗಿ ಈ ಕೃತಿಯಲ್ಲಿ ಮಂಡಿಸಿದ್ದಾರೆ. ಬುದ್ಧ, ಬಸವ, ಇತರ ವಚನಕಾರರು ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರು ಸಮಕಾಲೀನರಲ್ಲವಾದರೂ ಅವರೆಲ್ಲರಲ್ಲಿ ‘ಜೀವ ಕೇಂದ್ರಿತ’, ‘ಮನುಷ್ಯ ಕೇಂದ್ರಿತ’ ತುಡಿತಗಳು, ಚಿಂತನೆಗಳು ಹೇಗೆ ಸಮಾನ ಆಶಯಗಳನ್ನು ಹೊಂದಿವೆ ಎಂಬುದನ್ನು ಈ ಕೃತಿಯಲ್ಲಿ ನೋಡಬಹುದು. ವಚನ ಚಳವಳಿ ಮತ್ತು ಭಾರತದ ಸಂವಿಧಾನ ಪ್ರತಿಪಾದಿಸಿದ ಮಾನವೀಯ ಸಮಾಜದ ನಿಯಮಗಳು, ಆದರ್ಶಗಳು, ಹಕ್ಕು ಮತ್ತು ಕರ್ತವ್ಯಗಳು ಇಂದಿನ ಸಂಘರ್ಷಮಯ ಸಮಾಜಕ್ಕೆ ದಿಕ್ಸೂಚಿಗಳಾಗಿವೆ. ಅಂಥ ದಿಕ್ಸೂಚಿಯನ್ನು ಈ ಕೃತಿ ಒಳಗೊಂಡಿದೆ.

ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ನ್ಯಾಯವಾದಿಗಳಾಗಿ, ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದವರು, ಈಗ ವಿಶ್ರಾಂತ ಬದುಕನ್ನು ನಡೆಸಬೇಕಾದ ಸಂದರ್ಭದಲ್ಲಿ ಅವಿಶ್ರಾಂತ ವಾಗಿ ಸಾಮಾಜಿಕ ಜಾಗೃತಿ ಕೆಲಸದಲ್ಲಿ ನಿರತರಾಗಿದ್ದಾರೆ. ನಮ್ಮ ಸಂವಿಧಾನವೇ ಸ್ವಾತಂತ್ರೋತ್ತರ ಭಾರತದ ವಿಕಾಸಕ್ಕೆ ಕಾರಣ ಎಂದು ಸದಾ ಪ್ರತಿಪಾದಿಸುವ ನಾಗಮೋಹನದಾಸ್ ಅವರು ಆಡಳಿತ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಂವಿಧಾನದ ಆಶಯಗಳ ಜಾರಿ ಮತ್ತು ಸಂವಿಧಾನದ ರಕ್ಷಣೆಗಾಗಿ ಇಳಿ ವಯಸ್ಸಿನಲ್ಲಿಯೂ ನಿರಂತರ ಶ್ರಮಿಸುತ್ತಿರುವ ಅಪರೂಪದ ನ್ಯಾಯಮೂರ್ತಿ. ಅವರ ಈ ಕೃತಿ ‘ಸಂವಿಧಾನ ಮತ್ತು ವಚನಗಳು’ ನಾಡಿನ ಮನೆ - ಮನ ತಲುಪಲಿ.

ಕೃತಿ: ಸಂವಿಧಾನ ಮತ್ತು ವಚನಗಳು

ಲೇಖಕರು:

ನ್ಯಾ. ಎಚ್.ಎನ್. ನಾಗಮೋಹನದಾಸ್

ಬೆಲೆ: 120 ರೂ. ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈ.ಲಿ., ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001

Writer - ಡಾ. ಸಿದ್ದನಗೌಡ ಪಾಟೀಲ

contributor

Editor - ಡಾ. ಸಿದ್ದನಗೌಡ ಪಾಟೀಲ

contributor

Similar News