ಮಂಗಳೂರು: ಸಿಪಿಎಂ ರಾಜಕೀಯ ಪ್ರಚಾರ ಆಂದೋಲನಾ ಕಾರ್ಯಕ್ರಮ

Update: 2022-09-23 16:32 GMT

ಮಂಗಳೂರು, ಸೆ.23: ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ, ವಿಪರೀತ ಬೆಲೆಏರಿಕೆ, ನಿರುದ್ಯೋಗ, ಹಣದುಬ್ಬರ, ದೇಶದ ಸಂಪತ್ತಿನ ಲೂಟಿ ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಿ ಸಿಪಿಎಂ ರಾಜ್ಯವ್ಯಾಪಿ ಕರೆ ನೀಡಿದ ‘ರಾಜಕೀಯ ಪ್ರಚಾರ ಆಂದೋಲನ’ದ ಭಾಗವಾಗಿ ನಗರದ ಮಿನಿವಿಧಾನ ಸೌಧದ ಮುಂದೆ ಶುಕ್ರವಾರ ನಡೆದ ಸಾರ್ವಜನಿಕ ಸಭೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಕಾಂ. ಮುನೀರ್ ಕಾಟಿಪಳ್ಳ  ದೇಶದ ಜನರನ್ನು ಕಾಡುವ ಗಂಭೀರ ಸಮಸ್ಯೆಗಳನ್ನು ಈಡೇರಿಸುವ ಭರವಸೆಯನ್ನು ಮುಂದಿಟ್ಟು ಅಧಿಕಾರದ ಗದ್ದು ಗೆಯನ್ನೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಯಾವೊಂದು ಭರವಸೆಗಳನ್ನು ಈಡೇರಿಸದೆ ಕನಿಷ್ಟ ನೆಮ್ಮದಿಯಿಂದ ಬದುಕು ನಡೆಸಲಾಗದಂತಹ ಸ್ಥಿತಿಗೆ ಈ ದೇಶದ ಜನರನ್ನು ತಂದು ನಿಲ್ಲಿಸಿದೆ ಈವತ್ತು ಬಡತನ, ಅಸಹಾಯಕತೆಯನ್ನು ಅವಹೇಳನ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೇಳಿದರು.

ವ್ಯಾಪಾರ, ವಹಿವಾಟು, ಉದ್ಯೋಗ ಇಲ್ಲದೆ ಕಂಗಾಲಾದ ಜನರು ಆತ್ಮಹತ್ಯೆ ಮಾಡುವಂತಹ ಸ್ಥಿತಿಗೆ ತಲುಪಿದ್ದಾರೆ. ರಾಜ್ಯದ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ವ್ಯಾಪಕಗೊಂಡಿದೆ. ಗುತ್ತಿಗೆ ಕಾಮಗಾರಿಗಳಲ್ಲಿ ಶೇ.೪೦ರಷ್ಟು ಕಮಿಷನ್ ಪಡೆಯುವ ಹಂತಕ್ಕೆ ಬಂದು ತಲುಪಿದೆ. ಸಚಿವ ಈಶ್ವರಪ್ಪಹೆಸರೇಳಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿದ ಪ್ರಕರಣ ರಾಜ್ಯದ ಗಮನ ಸೆಳೆದಿದೆ. 13800 ರಷ್ಟು ಸರಕಾರಿ ಶಾಲೆ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದೆ. ಅತಿಥಿ ಶಿಕ್ಷಕರಿಗೆ ಸರಿಯಾದ ವೇತನ ನೀಡದೆ, ಕನಿಷ್ಠ ಕೆಲಸವನ್ನು ಖಾಯಂಗೊಳಿಸದೆ ಸತಾಯಿಸಲಾಗುತ್ತಿದೆ. ದೇಶದ ಜನರ ಬದುಕು ಬವಣೆಗಳನ್ನು ಸರಿಪಡಿಸುವ ಬದಲು ಧರ್ಮದ ಆಧಾರದಲ್ಲಿ ವಿಭಜಿಸುವ, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಹಿಂಸೆಗೆ ಪ್ರಚೋದಿಸಿ ಜನರ ಗಮನವನ್ನು ಬೇರೆಡೆಗೆ ಬದಲಾಯಿಸುವ ಮೂಲಕ ಕೋಮು ರಾಜಕಾರಣ ನಡೆಸಲಾಗುತ್ತಿದೆ. ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳನ್ನು ಬಯಲುಗೊಳಿಸಲು, ಅವರ ಕೋಮು ರಾಜಕಾರಣದ ಕುತಂತ್ರವನ್ನು ವಿಫಲಗೊಳಿಸಲು ಸಿಪಿಎಂ ಪಕ್ಷ ನಡೆಸುವ ರಾಜಕೀಯ ಪ್ರಚಾರಾಂದೋಲನಕ್ಕೆ ರಾಜ್ಯದ ಜನತೆ ಬೆಂಬಲಿಸಬೇಕು ಎಂದು ಮುನೀರ್ ಕಾಟಿಪಳ್ಳ ಕರೆ ನೀಡಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ ಬಾಲಕೃಷ್ಣ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು. ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಸಿಪಿಎಂ ನಗರ ಸಮಿತಿ ಸದಸ್ಯರಾದ ಲೋಕೇಶ್ ಎಂ, ಸುರೇಶ್ ಬಜಾಲ್, ಪ್ರದೀಪ್, ಭಾರತೀ ಬೋಳಾರ ,ದಿನೇಶ್ ಶೆಟ್ಟಿ, ಕಾರ್ಮಿಕ ಮುಖಂಡ ಮುಸ್ತಫಾ ಕಲ್ಲಕಟ್ಟೆ, ಡಿವೈಎಫ್‌ಐ ಜಿಲ್ಲಾ ಮುಖಂಡ ಬಿ.ಕೆ ಇಮ್ತಿಯಾಝ್ ಭಾಗವಹಿಸಿದ್ದರು.

ಸಿಪಿಐಎಂ ನಗರ ಸಮಿತಿ ಮುಖಂಡರಾದ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು, ಜಯಂತಿ ಬಿ. ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News