ಉತ್ತರಾಖಂಡ: ಯುವತಿ ಕೊಲೆ ಕೃತ್ಯದಲ್ಲಿ ಬಂಧಿತ ಬಿಜೆಪಿ ನಾಯಕನ ಪುತ್ರನ ರೆಸಾರ್ಟ್ ಧ್ವಂಸ
ಡೆಹ್ರಾಡೂನ್: ಉತ್ತರಾಖಂಡದ ಬಿಜೆಪಿ ನಾಯಕನ ಪುತ್ರನನ್ನು ಯುವತಿಯ ಹತ್ಯೆಗೈದ ಕೃತ್ಯಕ್ಕೆ ಸಂಬಂಧಿಸಿ ಬಂಧಿಸಿದ ಕೆಲವೇ ಗಂಟೆಗಳ ನಂತರ, ರಿಷಿಕೇಶದಲ್ಲಿರುವ ಆತನ ರೆಸಾರ್ಟ್ ಅನ್ನು ಶುಕ್ರವಾರ ತಡರಾತ್ರಿ ಕೆಡವಲಾಯಿತು ಎಂದು ಮುಖ್ಯಮಂತ್ರಿ ಪುಷ್ಕರ್ ಧಾಮಿಯವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಉತ್ತರಾಖಂಡದ ಮಾಜಿ ಸಚಿವ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಮತ್ತು ಇತರ ಇಬ್ಬರು ರೆಸಾರ್ಟ್ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಅಂಕಿತಾ ಭಂಡಾರಿಯನ್ನು ಕೊಂದಿರುವುದಾಗಿ ಶುಕ್ರವಾರ ಸಂಜೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.
ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ್ ಗುಪ್ತಾ ಯುವತಿ ನಾಪತ್ತೆಯಾಗಿದ್ದಾಗಿ ದೂರು ಸಲ್ಲಿಸಿದ್ದರು. ತನಿಖೆಯ ನಂತರ, ಆರ್ಯ ಮತ್ತು ಆತನ ಸಹಚರರು ಯುವತಿಯನ್ನು ಕೊಂದು ಮೃತ ದೇಹವನ್ನು ಕಾಲುವೆಗೆ ಎಸೆದಿರುವುದಾಗಿ ಒಪ್ಪಿಕೊಂಡರು.
ಶನಿವಾರ ಬೆಳಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ರಿಷಿಕೇಶದ ಚಿಲ್ಲಾ ಕಾಲುವೆಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಯುವತಿಯ ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ