ದೇಶ ವಿಭಜಕ ಶಕ್ತಿಗಳ ನಿಷೇಧ ಸ್ವಾಗತಾರ್ಹ: ಸಿ.ಟಿ.ರವಿ

Update: 2022-09-28 03:36 GMT

ಬೆಂಗಳೂರು: ದೇಶ ವಿಭಜಕ ಶಕ್ತಿಗಳನ್ನು ಸರಕಾರ ನಿಷೇಧ ಮಾಡಿದೆ, ಇನ್ನು ಮುಂದಿನದು ಸಮಾಜದ ಸರದಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಪಿಎಫ್‍ಐ ನಿಷೇಧ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಐಸಿಸ್ ಮಾದರಿಯ ಉಗ್ರಗಾಮಿಗಳನ್ನ ಬೆಂಬಲಿಸಿದ, ದೇಶದ ಒಳಗೆ ಅಭದ್ರತೆ, ಅಂತರ್ಯುದ್ಧದ, ದೇಶದ್ರೋಹದ  ಸಂಚನ್ನು ಮಾಡುತ್ತಿದ್ದ ಪಿ ಎಫ್ ಐ ಹಾಗು ಅದರ ಸಹ ಸಂಘಟನೆಗಳನ್ನು ನಿಷೇಧಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು  ಸ್ವಾಗತಿಸುತ್ತೇನೆ ಹಾಗು ಸರಕಾರವನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಸರಕಾರ ಈ ಸಂಘಟನೆಗಳನ್ನು ಬ್ಯಾನ್ ಮಾಡಿದೆ, ಇಷ್ಟು ಸಾಕಾಗುವುದಿಲ್ಲ. ಸಮಾಜವು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ. ವಿದ್ರೋಹಿ ಹಾಗು ವಿಚ್ಛಿದ್ರಕಾರಿ ಮನಸ್ಥಿತಿಯ ಸಂಘಟನೆಗಳು ಸಮಾಜದ ಒಳಗಡೆ ರೂಪುಗೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿದೆ. ನಿಷೇಧದ ಸುತ್ತ ಯಾವ ರಾಜಕೀಯ ಪಕ್ಷವೂ ತುಷ್ಟೀಕರಣದ ಮತ್ತು ತಕ್ಷಣದ ರಾಜಕೀಯ ಲಾಭ ಪಡೆದುಕೊಳ್ಳುವ ದೃಷ್ಟಿಯ ರಾಜಕಾರಣ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯವಾಗಿ ನಿಮಗೆ ಲಾಭ ಕೊಟ್ಟರು, ದೇಶದ ಭವಿಷ್ಯದ ದೃಷ್ಟಿಯಿಂದ, ಸಮಾಜವನ್ನು ಈ ದುಷ್ಟ ಶಕ್ತಿಗಳ ಕೈಯಿಂದ ಬಿಡಿಸುವ ಕಾರ್ಯದಲ್ಲಿ ತೊಡಕಾಗಲಿದೆ. ದೇಶದ ಭದ್ರತೆಯ, ಸಮಾಜದ ಗೌರವ ಕಾಪಾಡುವ ನಿಟ್ಟಿನಲ್ಲಿ, ದೇಶಪ್ರೇಮಿ ಮುಸ್ಲಿಮರು ಯೋಚನೆ ಮಾಡಬೇಕಾದ ಅಗತ್ಯ ಮತ್ತು ರಾಷ್ಟ್ರ ವಿರೋಧಿ ಹಾಗು ಮತಾಂಧತೆಯ ವಿರುದ್ಧ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ನಿಷೇಧದ ನಂತರ ಪಿ ಎಫ್ ಐ ಸಂಘಟನೆಗೆ ಸೇರಿದ ದುಷ್ಟ ಶಕ್ತಿಗಳು ಭೂಗತರಾಗಿ ಕಾರ್ಯನಿರ್ವಹಿಸುವ, ಸಮಾಜವನ್ನು ಪ್ರಚೋದಿಸುವ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಇಂತಹ ಯಾವುದೇ ಘಟನೆಗಳು ಗಮನಕ್ಕೆ ಬಂದರೆ  ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮುಂದಾಗುವ ಸಮಸ್ಯೆಗಳನ್ನು ತಪ್ಪಿಸಲು ಕಾನೂನಿನ ಜೊತೆ ಕೈ ಜೋಡಿಸಲು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News