ರಾಷ್ಟ್ರಪತಿಗಳಿಗೆ ರಾಜ್ಯಪಾಲರು, ಮುಖ್ಯಮಂತ್ರಿಗಳಿಂದ ಆತ್ಮೀಯ ಬೀಳ್ಕೊಡುಗೆ

Update: 2022-09-28 04:37 GMT

ಬೆಂಗಳೂರು, ಸೆ. 28:ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಕಳೆದ ಮೂರು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಇಂದು ಬೆಳ್ಳಿಗ್ಗೆ ಗೌರವಾನ್ವಿತ  ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹಾಗೂ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೆಚ್‌ಎ.ಎಲ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬೀಳ್ಕೊಟ್ಟರು.

ಮೈಸೂರು ದಸರಾ, ಧಾರಾವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಅಂಡ್ ಟೆಕ್ನಾಲಜಿಯನ್ನು ಉದ್ಘಾಟಿಸಿದರು ಹಾಗೂ ಧಾರವಾಡ ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ ಸ್ವೀಕರಿಸಿದರು.

ಬೆಂಗಳೂರಿನ ಹೆಚ್.ಎ.ಎಲ್ ನಲ್ಲಿ ಕ್ರಯೋಜನಿಕ್ ಪ್ರತ್ಯೇಕ ಘಟಕ ಹಾಗೂ ವರ್ಚುವಲ್ ಕಾರ್ಯಕ್ರಮದ ಮೂಲಕ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ವೈರಾಲಜಿ ಕೇಂದ್ರದ ದಕ್ಷಿಣವಲಯ ಸಂಶೋಧನಾ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ನಗರದ ನೂತನ  ಸೆಂಟ್ ಜೋಸೆಫ್ ವಿಶ್ವವಿದ್ಯಾಲಯವನ್ನು ಸಹ ಉದ್ಘಾಟಿಸಿದರು. 

ಸೆಪ್ಟೆಂಬರ್ ೨೭ ರಂದು ರಾಜ್ಯ ಸರ್ಕಾರದಿಂದ  ನಾಗರಿಕ ಸನ್ಮಾನವನ್ನು ಸ್ವೀಕರಿಸಿದ ರಾಷ್ಟ್ರಪತಿಗಳಿಗೆ ಅಂದು ರಾತ್ರಿ ರಾಜಭವನದಲ್ಲಿ ವಿಶೇಷ ಔತಣಕೂಟವನ್ನು ಸಹ ಏರ್ಪಡಿಸಲಾಗಿತ್ತು.

ಕಳೆದ ಮೂರು ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ  ಭಾಗವಹಿಸಿದ ರಾಷ್ಟ್ರಪತಿಗಳು ರಾಜ್ಯ ಪ್ರವಾಸ ಮುಗಿಸಿ ಇಂದು ನವದೆಹಲಿಗೆ ಪ್ರಯಾಣಿಸಿದರು.

ಈ ಸಮಯದಲ್ಲಿ ಬೃಹತ್ ಕೈಗಾರಿಕಾ ಸಚಿವರಾದ ಮುರಗೇಶ್ ನಿರಾಣಿ , ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ, ಭೂ ಸೇನಾ ಅಧಿಕಾರಿ ಬಸಂತ್ ರೆಪ್ಸ್  ಪಾಲ್, ನೌಕಾ ಸೇನಾಧಿಕಾರಗಳಾದ ರೂಪನ್ ಬೆಂಬೇ, ರಾಜ್ಯ ಪೊಲೀಸ್ ಮಹಾ  ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ ಸೇರಿದಂತೆ  ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News