ಪಿಎಮ್-ಕಿಸಾನ್ ಯೋಜನೆಗೆ ಹೊಸ ನಿಬಂಧನೆಗಳ ಸೇರ್ಪಡೆ ಅರ್ಧದಷ್ಟು ಫಲಾನುಭವಿಗಳನ್ನು ತೆಗೆದುಹಾಕುವ ಹುನ್ನಾರ: ರಮೇಶ್ ಬಾಬು

Update: 2022-09-28 14:06 GMT

ಬೆಂಗಳೂರು, ಸೆ.28: ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಕಾಲದಲ್ಲಿ ರೈತರಿಗೆ ಪಿಎಮ್-ಕಿಸಾನ್ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಹೊಸ ನಿಭಂದನೆಗಳ ಹೆಸರಿನಲ್ಲಿ ರಾಜ್ಯದ ಒಟ್ಟಾರೆ ರೈತ ಫಲಾನುಭವಿಗಳಲ್ಲಿ ಅರ್ಧದಷ್ಟು ಫಲಾನುಭವಿಗಳನ್ನು ತೆಗೆದುಹಾಕಲು ಮುಂದಾಗಿದೆ ಎಂದು ಕೆಪಿಸಿಸಿಯ ವಕ್ತಾರ ರಮೇಶ್ ಬಾಬು ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿರುವ ಸಣ್ಣ ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ 2018ರಲ್ಲಿ ಪಿಎಮ್-ಕಿಸಾನ್ ಯೋಜನೆಯನ್ನು ಜಾರಿಗೊಳಿಸಿದರು. ಈ ಯೋಜನೆಯಲ್ಲಿ ದೇಶದ ಸುಮಾರು ಹತ್ತು ಕೋಟಿ ರೈತರಿಗೆ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವಾರ್ಷಿಕ 6 ಸಾವಿರ ರೂಪಾಯಿಗಳ ಸಹಾಯಧನವನ್ನು ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದರು ಎಂದರು.

ರಾಜ್ಯ ಬಿಜೆಪಿ ಸರಕಾರ ಈ ಯೋಜನೆಗೆ ಪೂರಕವಾಗಿ ರಾಜ್ಯದಲ್ಲಿ ಸಣ್ಣ ರೈತರಿಗೆ ವಾರ್ಷಿಕ 4 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿತು. ಇದರ ಅನ್ವಯ ರಾಜ್ಯದ ಸಣ್ಣರೈತರಿಗೆ ವಾರ್ಷಿಕ 10 ಸಾವಿರ ರೂಪಾಯಿ ಸಹಾಯಧನ ದೊರೆಯಬೇಕಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. 

‘ಈ ಯೋಜನೆಯನ್ನು ಭಾರತೀಯ ಜನತಾ ಪಕ್ಷ ಅವಶ್ಯಕತೆಗಿಂತ ಹೆಚ್ಚು ಡಂಗೂರ ಸಾರಿ ಪ್ರಚಾರವನ್ನು ಪಡೆದುಕೊಂಡಿತು. ರೈತರು ನೇರವಾಗಿ ಈ ಯೋಜನೆಗೆ ಸಂಪರ್ಕ ಪಡೆದು ಸಹಾಯಧನ ಪಡೆದುಕೊಳ್ಳಬಹುದೆಂದು ಪ್ರಚಾರ ಮಾಡಿತು. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪಿಎಮ್-ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ಹೊಸದಾಗಿ ನಿಭಂದನೆಗಳನ್ನು ವಿಧಿಸುವುದರ ಮೂಲಕ ಬಹುತೇಕ ರೈತರು ಯೋಜನೆಯಿಂದ ವಂಚಿತರಾಗಲು ಮುನ್ನುಡಿ ಬರೆದಿರುತ್ತದೆ. ಹೊಸ ನಿಭಂದನೆಗಳ ಅನ್ವಯ ಸಣ್ಣ ರೈತರೂ ಯೋಜನೆಯ ಲಾಭ ಪಡೆಯದಂತೆ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ’ ಎಂದು ಕಿಡಿಕಾರಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ. 

‘ಆದಾಯ ತೆರಿಗೆ ಪಾವತಿ ಮಾಡುತ್ತಿರುವ ರೈತರು, ಮಾಸಿಕ 10 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವವರು, ಸಾಂಸ್ಥಿಕ ಜಮೀನು ಹೊಂದಿರುವವರು, ವೃತ್ತಿಪರರಾದ ವಕೀಲರು, ವೈದ್ಯರು, ಇಂಜಿನಿಯರ್‍ಗಳು ಮುಂತಾದವರು, ಸರಕಾರಿ ನೌಕರರು ಹಾಗೂ ಜನಪ್ರತಿನಿಧಿಗಳು ಇದರ ಲಾಭವನ್ನು ಪಡೆಯದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಸಹಾಯಧನ ದೊರೆಯದಂತೆ ಮಾಡಲು ಬ್ಯಾಂಕುಗಳಿಗೆ ನಿರ್ದೇಶನ ನೀಡಿ ನಿಭಂದನೆಗಳನ್ನು ಪರಿಶೀಲಿಸಿದ ನಂತರವೇ ಹಣವನ್ನು ಖಾತೆಗೆ ವರ್ಗಾಯಿಸಲು ಸೂಚಿಸಲಾಗಿದೆ. ಈ ತಿಂಗಳ 30ರೊಳಗೆ ಕೇಂದ್ರ ಸರಕಾರ ಈ ಯೋಜನೆಯಡಿಯಲ್ಲಿ ಮತ್ತೊಂದು ಕಂತು ಹಣವನ್ನು ಬಿಡುಗಡೆ ಮಾಡಬೇಕಾಗಿದೆ’ ಎಂದು ರಮೇಶ್ ಬಾಬು ತಿಳಿಸಿದ್ದಾರೆ. 

‘ಈ ಹಿಂದೆ ಸಣ್ಣ ರೈತರು ನೇರವಾಗಿ ಪಿಎಮ್-ಕಿಸಾನ್ ಯೋಜನೆಗೆ ತಮ್ಮ ವಿವರಗಳನ್ನು ಅಪ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ನೇರವಾಗಿ ವಿವರಗಳನ್ನು ಅಪ್ಲೋಡ್ ಮಾಡಿ ಯೋಜನೆಯ ಪ್ರಯೋಜನ ಪಡೆದಿದ್ದ ಸುಮಾರು 1,06,416 ರೈತರ ವಿವರಗಳನ್ನು ಅಮಾನ್ಯಗೊಳಿಸಿ, ಅವರಿಂದ ಸುಮರು 39.44 ಕೋಟಿ ರೂಪಾಯಿಗಳನ್ನು ಮರುವಸೂಲಿ ಮಾಡಲು ಮುಂದಾಗಿರುತ್ತದೆ’ ಎಂದು ಅವರು ಕಿಡಿಕಾರಿದ್ದಾರೆ.

ರಾಜ್ಯ ಸರಕಾರದ ಈ ನಡೆ ರೈತರನ್ನು ಸೌಲಭ್ಯಗಳಿಂದ ವಂಚಿಸುವ ದುರುದ್ದೇಶದಿಂದ ಕೂಡಿದ್ದು, ಕುಂಟು ನೆಪಗಳನ್ನು ಒಡ್ಡಿ ರಾಜ್ಯದ ರೈತರನ್ನು ಅವಕಾಶ ವಂಚಿತರನ್ನಾಗಿ ಮಾಡುವ ಪ್ರಯತ್ನವಾಗಿದೆ. ರಾಜ್ಯ ಸರಕಾರ ರೈತ ಧಮನಕಾರಿಯ ಇಂತಹ ಪ್ರಯತ್ನಗಳನ್ನು ಕೈಬಿಟ್ಟು, ರೈತ ಹಿತಾಸಕ್ತಿಗೆ ವಿರುದ್ಧವಾದ ನಿಯಮಗಳನ್ನು ಸಡಿಲಗೊಳಿಸಿ ರಾಜ್ಯದ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಎಮ್-ಕಿಸಾನ್ ಯೋಜನೆಯ ಸಹಾಯಧನವನ್ನು ಬಿಡುಗಡೆ ಮಾಡುವಂತೆ ರಮೇಶ್ ಬಾಬು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News