ಅ. 4ರಂದು "ಪಿಲಿ ನಲಿಕೆ-7" ಹುಲಿವೇಶ ಕುಣಿತ ಸ್ಪರ್ಧೆ: ಮಿಥುನ್ ರೈ

Update: 2022-10-03 09:01 GMT

ಮಂಗಳೂರು, ಅ.3: ಪಿಲಿನಲಿಕೆ ಪ್ರತಿಷ್ಠಾನ ಮಂಗಳೂರು ಇದರ  ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-7" ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಅ.4ರಂದು ಬೆಳಗ್ಗೆ 10 ಗಂಟೆಯಿಂದ ನಡೆಯಲಿರುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ತುಳುನಾಡಿನ ಅದ್ಭುತ ಕಲಾ ಪರಂಪರೆ ಮತ್ತು ಇಂದು ಇಡೀ ವಿಶ್ವದ ಗಮನವನ್ನು ಸೆಳೆದಿರುವ ಹುಲಿವೇಷ ಕುಣಿತದ ಮೂಲ ಸ್ವರೂಪವನ್ನು ಉಳಿಸುತ್ತಾ ಅದನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭಿಸಿದ ಪಿಲಿನಲಿಕೆ ಸ್ಪರ್ಧೆ ಯಶಸ್ವಿಯಾಗಿ 6 ಆವೃತ್ತಿಗಳನ್ನು ಪೂರೈಸಿದ್ದು, ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಅದನ್ನು ಮುಂದುವರೆಸಲು ಅಸಾಧ್ಯವಾಗಿತ್ತು. ಇದೀಗ ಪಿಲಿನಲಿಕೆ-7 ಸ್ಪರ್ಧಾಕಣದಲ್ಲಿ ತುಳುನಾಡಿನ ಪ್ರತಿಷ್ಠಿತ ಮತ್ತು ಆಹ್ವಾನಿತ 12 ತಂಡಗಳು ಭಾಗವಹಿಸಲಿದ್ದು ಬಹುಮಾನ ರೂಪದಲ್ಲಿ ಪ್ರಥಮ ರೂ.3,00,000/- ಮತ್ತು ಫಲಕ, ದ್ವಿತೀಯ ರೂ.2,00,000/- ಮತ್ತು ಫಲಕ, ತೃತೀಯ ರೂ.1,00,000/- ಮತ್ತು ಫಲಕ ಹಾಗೂ ವಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿಹುಲಿ, ಕರಿಹುಲಿ, ಮುಡಿ ಹಾರಿಸುವುದು, ತಾಸೆ, ಬಣ್ಣಗಾರಿಕೆ, ಅತ್ಯುತ್ತಮ ಹುಲಿ ಕುಣಿತಕ್ಕೆ ತಲಾ ರೂ. 50,000/- ನಗದು ಬಹುಮಾನಗಳನ್ನು ನೀಡಲಾಗುವುದು, ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ ರೂ.50,000/- ವನ್ನು ಪ್ರೋತ್ಸಾಹಕ ರೂಪದಲ್ಲಿ ನೀಡಲಾಗುವುದು. ಈ ಬಾರಿಯ ಪಿಲಿನಲಿಕೆ-7ಕ್ಕೆ ಬಾಲಿವುಡ್‌ನ ಖ್ಯಾತ ತಾರೆಯರಾದ ಸುನಿಲ್ ಶೆಟ್ಟಿ, ಪೂಜಾ ಹೆಗ್ಡೆ ಹಾಗೂ ಹೆಸರಾಂತ ನಟ ರಿಷಬ್‌ ಶೆಟ್ಟಿ ಸೇರಿದಂತೆ ಹಲವಾರು ನಟ ನಟಿಯರು, ತುಳು ರಂಗಭೂಮಿಯ ಹೆಸರಾಂತ ಕಲಾವಿದರು ತಾರಾ ಮೆರುಗನ್ನು ನೀಡಲಿದ್ದಾರೆ ಎಂದು ಮಿಥುನ್ ರೈ  ತಿಳಿಸಿದ್ದಾರೆ.

ಪಿಲಿನಲಿಕೆಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಗಣರಾಜ್ಯೋತ್ಸವ ದ ಪೆರೇಡ್ ನಲ್ಲಿ ಭಾಗವಹಿಸಲು ಮನವಿ ಮಾಡುವುದಾ ಗಿ ಮಿಥುನ್ ರೈ ತಿಳಿಸಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿ ಪಿಲಿನಲಿಕೆ ತಂಡದಿಂದ ಕಾರ್ಯಕ್ರಮ ನೀಡಲು ಆಹ್ವಾನವಿದೆ. ಈ ಕಲೆ ಮತ್ತು ಅಶಕ್ತ ಕಲಾವಿದರಿಗೆ ವೇದಿಕೆ ನೀಡುವುದು ತುಳುವರ ಸಾಂಪ್ರದಾಯಿಕ ಕಲೆಯನ್ನು ರಾಜಕೀಯ ರಹಿತ ವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಿಲಿನಲಿಕೆ -7 ಕಾರ್ಯ ಕ್ರಮ ಪಿಲಿನಲಿಕೆ ಪ್ರತಿಷ್ಠಾನದಿಂದ  ಹಮ್ಮಿಕೊಂಡಿರುವುದಾಗಿ ಮಿಥುನ್ ರೈ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಡಾ|ಶಿವಶರಣ್ ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್, ಅವಿನಾಶ್, ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News