ಮಂಗಳೂರು: ವಿವಿಧ ಕಡೆ ಬ್ಯಾರಿ ಭಾಷಾ ದಿನಾಚರಣೆ

Update: 2022-10-03 16:51 GMT

ಮಂಗಳೂರು, ಅ.3: ರಾಜ್ಯ ಸರಕಾರವು ಬ್ಯಾರಿ ಸಾಹಿತ್ಯ ಅಕಾಡಮಿಯನ್ನು ಸ್ಥಾಪಿಸಿ ಆದೇಶ ಹೊರಡಿಸಿದ ಅಕ್ಟೋಬರ್ 3ನೇ ತಾರೀಕನ್ನು ನಾಡಿನ ವಿವಿಧ ಬ್ಯಾರಿ ಸಂಘಟನೆಗಳು ಮತ್ತು ಸಾಹಿತ್ಯ ಅಕಾಡಮಿಯು ಕಳೆದ 10 ವರ್ಷಗಳಿಂದ ಬ್ಯಾರಿ ಭಾಷೆಯ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದು, ಅದರಂತೆ ಸೋಮವಾರ ಮಂಗಳೂರು ಹಾಗೂ ದೇರಳಕಟ್ಟೆಯಲ್ಲಿ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಹಯೋಗದಲ್ಲಿ ನಗರದ ವಿವಿ ಕಾಲೇಜಿನ ಡಾ.ಶಿವರಾಮ ಕಾರಂತ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಎಲ್ಲಾ ಭಾಷೆಯೊಂದಿಗೆ ಸಾಮರಸ್ಯವಿರುವ ಪ್ರದೇಶ ನಮ್ಮದಾಗಿದೆ. ತುಳು, ಬ್ಯಾರಿ, ಕೊಂಕಣಿ ಭಾಷೆಯ ಹಲವಾರು ವೈಶಿಷ್ಟ್ಯಗಳನ್ನು ಕರಾವಳಿಯು ಹೊಂದಿದೆ. ಹೀಗಾಗಿ ಸಹಬಾಳ್ವೆ, ಸಹೋದರತೆಯನ್ನು ಭಾಷಾ ಸಾಮರಸ್ಯದ ಮೂಲಕ ಸಾಧಿಸಬಹುದಾಗಿದೆ ಎಂದು ಹೇಳಿದರು.

ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಬ್ಯಾರಿ ಭಾಷಾ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು. ಲೇಖಕ, ಶಿಕ್ಷಕ ಅಶೀರುದ್ದೀನ್ ಆಲಿಯಾ ಬರೆದ ‘ಬ್ಯಾರಿ ವಚನಮಾಲೆ’ ಕೃತಿಯನ್ನು ಪತ್ರಕರ್ತ ಹಂಝ ಮಲಾರ್ ಬಿಡುಗಡೆಗೊಳಿಸಿ ಮಾತನಾಡಿದರು.

ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಸ್ವಾಗತಿಸಿದರು. ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾದ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು. ಸುರೇಖಾ ವಂದಿಸಿದರು.

ಅಖಿಲ ಭಾರತ ಬ್ಯಾರಿ ಪರಿಷತ್ 

ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವು ನಗರದ ಖಾಸಗಿ ಹೊಟೇಲ್ ಸಭಾಂಗಣದ ಸಂಶೋಧಕ ಮರ್ಹೂಂ ಪ್ರೊ.ಬಿ.ಎಂ. ಇಚ್ಲಂಗೋಡು ವೇದಿಕೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ‘ಕರಾವಳಿಗರು ಹೊರ ಜಿಲ್ಲೆ, ರಾಜ್ಯ, ದೇಶ, ವಿದೇಶಕ್ಕೆ ಹೋದರೂ ನಮ್ಮತನ ಉಳಿಸಿಕೊಳ್ಳುತ್ತಿರುವುದು ಕರಾವಳಿಯ ವೈಶಿಷ್ಟ್ಯವಾಗಿದೆ. ಅನೇಕತೆಯೇ ದೇಶದ, ಭಾಷೆಯ ಜೀವಾಳವಾಗಿದೆ. ಸಾಮಾಜಿಕ ಜಾಲತಾಣಗಳ ಸುಳಿಯ ಮಧ್ಯೆ ಭಾಷೆಗಳು ಸಿಲುಕಿ ಚಲಾವಣೆಯಲ್ಲಿಲ್ಲದ ನಾಣ್ಯದಂತಿವೆ. ಈ ನಿಟ್ಟಿನಲ್ಲಿ ಭಾಷೆಯ ಅಸ್ಮಿತೆಗೆ ಭಾಷಾ ದಿನಾಚರಣೆ ಮುಖ್ಯವಾಗಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಬ್ಯಾರಿ ಭಾಷೆಯ ಉಚ್ಛಾರಣೆಯಲ್ಲಿ ಸೂಕ್ಷ್ಮತೆ ಮುಖ್ಯವಾಗಿದೆ. ಆ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಭಾಷೆಯನ್ನು ಬಳಸಬೇಕಿದೆ. ಅಳಿಯುವ ಭಾಷೆಗಳ ಪಟ್ಟಿಯಲ್ಲಿದ್ದ ಬ್ಯಾರಿ ಭಾಷೆಯನ್ನು ಉಳಿಸಲು ಬ್ಯಾರಿ ಅಕಾಡಮಿಯಲ್ಲದೆ ಬೇರೆ ಬೇರೆ ಬ್ಯಾರಿ ಸಂಘಟನೆಗಳು ಶಕ್ತಿಮೀರಿ  ಪ್ರಯತ್ನಿಸುತ್ತಿರುವುದು ಶ್ಲಾಘನಾರ್ಹ. ಇಂದು ಹಲವು ಕಡೆಗಳಲ್ಲಿ ಬ್ಯಾರಿ ಭಾಷಾ ದಿನ ಆಚರಿಸಿರುವುದು ಸಂತಸದ ವಿಚಾರವಾಗಿದೆ ಎಂದರು.

ಪತ್ರಕರ್ತ ಹಂಝ ಮಲಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಜಿ.ಎಂ. ಶಾಹುಲ್ ಹಮೀದ್ ಮೆಟ್ರೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತೆರಿಗೆ ಸಲಹೆಗಾರ ಪುಂಡಲೀಕಾಕ್ಷ, ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಕಂಪಾಡಿ, ಉಪನ್ಯಾಸಕಿ ಸಿಹಾನಾ ಬಿ.ಎಂ., ಸಮಾಜದ ಮುಖಂಡರಾದ ನಝೀರ್ ಉಳ್ಳಾಲ್, ಅಝೀಝ್ ಕುದ್ರೋಳಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭ ಭಾಷಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಸನಬ್ಬ ಮೂಡುಬಿದಿರೆ ಬ್ಯಾರಿ ಹಾಡುಗಳನ್ನಾಡಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಗೌರವಾಧ್ಯಕ್ಷ ಯೂಸುಫ್ ವಕ್ತಾರ್ ಸ್ವಾಗತಿಸಿದರು. ಅಬ್ದುಲ್ ಖಾದರ್ ಇಡ್ಮ ವಂದಿಸಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಮಾಜಿ ಅಧ್ಯಕ್ಷ ಜೆ. ಹುಸೈನ್ ಮತ್ತು ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.

ಬ್ಯಾರಿ ಲೇಖಕರು-ಕಲಾವಿದರ ಕೂಟ (ಮೇಲ್ತೆನೆ)

ಬ್ಯಾರಿ ಲೇಖಕರು ಮತ್ತು ಕಲಾವಿದರ ಸಂಘಟನೆಯಾದ ‘ಮೇಲ್ತೆನೆ’ಯ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವು ನಾಟೆಕಲ್‌ನ ಅಯಾನ್ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಪತ್ರಕರ್ತ ಹಂಝ ಮಲಾರ್ ಬ್ಯಾರಿ ಭಾಷಾ ದಿನಾಚರಣೆಯ ಹಿನ್ನಲೆಯ ಬಗ್ಗೆ ವಿವರಿಸಿದರು. ಅಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್ ಅಧ್ಯಕ್ಷತೆ ವಹಿಸಿದ್ದರು.

ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಮಾತನಾಡಿ ಇಂಗ್ಲಿಷ್ ಹಾವಳಿಯ ಮಧ್ಯೆಯೂ ಬ್ಯಾರಿ ಭಾಷೆ ಜೀವಂತವಾಗಿ ರಲು ಮಾತೃಭಾಷೆಯ ಬಗ್ಗೆ ಬ್ಯಾರಿ ಭಾಷಿಗರಿಗೆ ಇರುವ ಅಭಿಮಾನವೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಇಸ್ಮಾಯಿಲ್ ಮಾಸ್ಟರ್, ಉಪಾಧ್ಯಕ್ಷ ಮಂಗಳೂರ ರಿಯಾಝ್, ಜೊತೆ ಕಾರ್ಯದರ್ಶಿ ಆಸಿಫ್ ಬಬ್ಬುಕಟ್ಟೆ, ಮಾಜಿ ಅಧ್ಯಕ್ಷ ಮನ್ಸೂರ್ ಅಹ್ಮದ್ ಸಾಮಣಿಗೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಶೀರ್ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು.

ಬ್ಯಾರಿ ಕಲಾರಂಗ

ಬ್ಯಾರಿ ಕಲಾರಂಗ ಮಂಗಳೂರು ಇದರ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ‘ಬ್ಯಾರಿ ಭಾಸೆರೊ ಕೊಂಡಾಡ್ರೊ ನಾಲ್ ಪೋಸ್ಟರ್ ಅಭಿಯಾನ ಕಾರ್ಯಕ್ರಮವು ನಗರದ ನ್ಯಾಷನಲ್ ಟ್ಯುಟೋರಿಯಲ್ ಕಾಲೇಜು ಸಭಾಂಗಣದಲ್ಲಿ ನಡೆಯಿತು. 

ಬ್ಯಾರಿ ಛೇಂಬರ್ ಆಫ್ ಕಾಮರ್ಸ್‌ನ ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಆಝಾದ್ ಪೋಸ್ಟರ್ ಬಿಡುಗಡೆ ಗೊಳಿಸಿದರು. ಬ್ಯಾರಿ ಕಲಾ ರಂಗದ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಹೈದರ್ ಪರ್ತಿಪಾಡಿ, ಚಲನ ಚಿತ್ರ ಸಂಗೀತ ನಿರ್ದೇಶಕ ಎ.ಕೆ. ವಿಜಯ್ (ಕೋಕಿಲ), ಸಾರಂಗ್ ರೇಡಿಯೋ ವರದಿಗಾರ ಎಡ್ವರ್ಡ್ ಲೋಬೋ ಭಾಗವಹಿಸಿದ್ದರು. ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಮಜೀದ್ ಸೂರಲ್ಪಾಡಿ, ಸಿ.ಎಂ. ಮುಸ್ತಫ, ಹನೀಫ್, ಅಬ್ದುಲ್ ಜಲೀಲ್, ಹುಸೈನ್ ಕೂಳೂರು, ಸಮದ್ ಕಾಟಿಪಳ್ಳ ಉಪಸ್ಥಿತರಿದ್ದರು. ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ಯು.ಹೆಚ್.ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News