ಭೂದಾನ ಆಂದೋಲನ ವಿನೋಬಾ ಭಾವೆಯ ಅನನ್ಯ ಕೊಡುಗೆ: ವಿಷಂಬರನಾಥ್ ಅಗರ್ವಾಲ
ಮಣಿಪಾಲ, ಅ.8: ಆಚಾರ್ಯ ವಿನೋಬಾ ಭಾವೆಯವರು ಪ್ರಾರಂಭಿಸಿದ ಭೂದಾನ ಆಂದೋಲನ ದೇಶಕ್ಕೆ ಅವರ ಒಂದು ಅನನ್ಯ ಕೊಡುಗೆ. ಇದರ ತತ್ವ ಮತ್ತು ಕಾರ್ಯ ನಿಜವಾದ ಅರ್ಥದಲ್ಲಿ ಗಾಂಧಿವಾದದ ಮೇಲೆ ನಿಂತಿದೆ ಎಂದು ಖ್ಯಾತ ವಿದ್ವಾಂಸ ವಿಷಂಬರನಾಥ್ ಅಗರ್ವಾಲ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್) ಆಶ್ರಯದಲ್ಲಿ ಆಚಾರ್ಯ ವಿನೋಬಾ ಭಾವೆ ಕುರಿತು ಇಂದು ಮಣಿಪಾಲದ ಹಳೆಯ ಟ್ಯಾಪ್ಮಿ ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ ವಿನೋಬಾ ಭಾವೆ ಜೀವನ ಮತ್ತು ತತ್ವ’ ಎಂಬ ವಿಷಯದ ಕುರಿತು ಮಾತನಾಡುತಿದ್ದರು.
ಸ್ವಯಂಪ್ರೇರಿತವಾಗಿ ಭೂಮಿ ಅಥವಾ ಹಣವನ್ನು ದಾನ ಮಾಡುವುದು ಹೆಚ್ಚು ಮಾನವೀಯ ಸಮಾಜವನ್ನು ರೂಪಿಸುವತ್ತ ನಿಜವಾದ ಗಾಂಧಿತತ್ವದ ಹೆಜ್ಜೆಯಾಗಿದೆ. ಮತ್ತು ವಿನೋಬಾ ಅವರ ಭೂದಾನ ಚಳುವಳಿ ಅಂತಹ ಪ್ರಯತ್ನಕ್ಕೊಂದು ಶ್ರೇಷ್ಠ ಉದಾಹರಣೆಯಾಗಿದೆ ಎಂದು ಐಐಟಿ ಮುಂಬಯಿಂದ ಇಂಜಿನಿಯರಿಂಗ್ ಪದವಿ ಪಡೆದಿ ರುವ ವಿಷಂಭರನಾಥ್ ಅಗರ್ವಾಲ್ ನುಡಿದರು.
ತಾತ್ವಿಕವಾಗಿ ವಿನೋಬಾ ಅವರು ‘ಶಂಕರ, ಗಾಂಧಿ ಮತ್ತು ಕ್ರಿಸ್ತನ’ ಯೋಜನೆಗಳ ಸಂಯೋಜನೆಯನ್ನು ಪ್ರತಿನಿಧಿಸಿದ್ದರು. ಕುರಾನ್ ಧರ್ಮಗ್ರಂಥವನ್ನು ಮೂಲದಲ್ಲೇ ಓದುವ ಸಲುವಾಗಿ ಅವರು ಅರೇಬಿಕ್ ಭಾಷೆಯನ್ನು ಕಲಿತಿದ್ದರು. ಅವರು ಎಲ್ಲಾ ಧರ್ಮಗಳ ಸಾರವನ್ನು ಅರಿಯಲು ಪ್ರಯತ್ನಿಸಿದ್ದರು ಎಂದರು.
ಧರ್ಮ ಮತ್ತು ದೇಶದ ಸೀಮೆಯನ್ನು ದಾಟಿ ಜಗತ್ತಿನ ಕಲ್ಯಾಣ ಎಂಬರ್ಥದ ‘ಜೈ ಜಗತ್’ ಘೋಷಣೆಗೆ ಅವರು ಒತ್ತು ನೀಡಿದ್ದರು ಎಂದು ವಿಷಂಭರನಾಥ್ ಅಗರ್ವಾಲ್ ವಿವರಿಸಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆಯ ಫಿಲಾಸಪಿ ಕ್ಲಬ್ನ ಸಂಯೋಜಕರಾದ ಮಲ್ಲೆಂ ಡೆಸ್ಮಂಡ್ ಡಾಸ್ ಹಾಗೂ ಯಶಸ್ವಿನಿ ಜಿ. ಕಾರ್ಯಕ್ರಮ ಸಂಯೋಜಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಕೆ.ಪಿ.ರಾವ್, ಡಾ.ಪ್ರಭಾಕರ ಶಾಸ್ತ್ರಿ, ಸುಬ್ರಹ್ಮಣ್ಯ ಬಾಸ್ರಿ ಮತ್ತಿತರರು ಉಪಸ್ಥಿತರಿದ್ದರು.