ಸಿಎಂ ಬೊಮ್ಮಾಯಿ ಭಾಷಣದ ವೀಡಿಯೊ ತಿರುಚಿ ಹರಿಬಿಟ್ಟ ಆರೋಪ: ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು

Update: 2022-10-08 15:01 GMT
[ಪೊಲೀಸ್ ಠಾಣೆಗೆ ದೂರು ನೀಡುತ್ತಿರುವ ಬಿಜೆಪಿ ಮುಖಂಡ]

ಬೆಂಗಳೂರು, ಅ.8: ಇತ್ತೀಚಿಗೆ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತುಗಳನ್ನು ಬೇರೆ ಅರ್ಥದಲ್ಲಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವ ಆರೋಪದ ಮೇಲೆ ಕಾಂಗ್ರೆಸ್ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಬಿಜೆಪಿ ದೂರು ನೀಡಿದೆ.

ಬಿಜೆಪಿ ಕಾನೂನು ಪ್ರಕೋಷ್ಠದ ಬೆಂಗಳೂರು ಕೇಂದ್ರ ಜಿಲ್ಲಾ ಸಂಚಾಲಕ ಎಂ.ಯಶವಂತ್ ಶನಿವಾರ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಉದ್ದೇಶಪೂರಕವಾಗಿ ವಿಡಿಯೊ ತಿರುಚಿ ಅಪಪ್ರಚಾರ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಎಂ.ಯಶವಂತ್, ಮುಖ್ಯಮಂತ್ರಿಗಳ ಭಾಷಣದ ವಿಡಿಯೊವನ್ನು ಭಾಷಣಕ್ಕೆ ಬೇರೆ ಅರ್ಥ ಬರುವ ರೀತಿಯಲ್ಲಿ ಮಾಡಿ, ಬಿಜೆಪಿಯ ವಿರುದ್ಧ ಅಪಪ್ರಚಾರ ಮಾಡುವ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷವೂ ತನ್ನ ಸಾಮಾಜಿಕ ಜಾಲತಾಣಗಳ ಪೇಜ್‍ಗಳಲ್ಲಿ ವೈರಲ್ ಮಾಡುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ ಭಾಷಣವನ್ನು ತಿರುಚಿರುವ ದುಷ್ಕರ್ಮಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು. ಪ್ರಮುಖವಾಗಿ ಕಾಂಗ್ರೆಸ್ಸಿನ ಸೋಷಿಯಲ್ ಮೀಡಿಯಾ ಮುಖ್ಯಸ್ಥರು ಮತ್ತು ಪೇಜ್‍ಗಳ ಮುಖ್ಯ ಸಂಚಾಲಕರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News