ಎಸ್ಸಿ-ಎಸ್ಟಿಗೆ ಮೀಸಲಾಗಿರುವ ಸಾವಿರಾರು ಕೋಟಿ ರೂ. ಅನುದಾನ ಇತರ ಇಲಾಖೆಗೆ ವರ್ಗಾವಣೆ: ಡಾ.ಎಚ್.ಸಿ.ಮಹದೇವಪ್ಪ ಆರೋಪ

Update: 2022-10-14 04:42 GMT

ಬೆಂಗಳೂರು, ಅ.14: ಬಿಜೆಪಿ ಸರಕಾರ ಇಲ್ಲಿಯವರೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಅನುದಾನವನ್ನು ದುರುದ್ದೇಶಪೂರಕವಾಗಿ ಕಡಿಮೆ ಮಾಡಿದೆ ಮತ್ತು ಸಾವಿರಾರು ಕೋಟಿ ರೂ. ಅನುದಾನವನ್ನು ಇತರ ಇಲಾಖೆಗೆ ವರ್ಗಾಯಿಸಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಎಂದು ಆರೋಪಿಸಿದ್ದಾರೆ.

- ಪರಿಶಿಷ್ಟ ಜಾತಿಯವರಿಗೆ ಅತಿ ಕಡಿಮೆ ಮಟ್ಟದಲ್ಲಿ ಸಚಿವ ಸಂಪುಟದಲ್ಲಿ ಅವಕಾಶ ನೀಡಿ, ಅವರಿಗೆ ಸರಿಯಾಗಿ ಸಲ್ಲಬೇಕಾದ ಅವಕಾಶ ನೀಡಲಿಲ್ಲ. - ಹಿಂದೆ ವಿ ಪಿ ಸಿಂಗ್ ಅವರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಪ್ರಸ್ತಾಪ ಬಂದಾಗ ಮಂಡಲ್ ವರದಿಯ ವಿರುದ್ಧ ಕಮಂಡಲ ಹಿಡಿದು ರಥಯಾತ್ರೆ ಮಾಡಿರುವುದು ಇದೇ ಬಿಜೆಪಿಗರು. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ನೇಮಕಗೊಂಡ ಎಲ್ ಜಿ ಹಾವನೂರು ಅವರ ಆಯೋಗದ ವಿರುದ್ಧ ಬಿಜೆಪಿಗರು ಏನೇನೆಲ್ಲಾ ಮಾತನಾಡಿದ್ದರು ಎಂಬುದಕ್ಕೆ ಇಡೀ ಕರ್ನಾಟಕವೇ ಸಾಕ್ಷಿಯಾಗಿದೆ ಎಂದುವರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- ಇಲ್ಲಿಯವರೆಗೂ RSSನವರು ಮೀಸಲಾತಿಯನ್ನು ಎಷ್ಟರ ಮಟ್ಟಿಗೆ ವಿರೋಧಿಸುತ್ತಾರೆ ಎಂಬುದು ನಮಗೆಲ್ಲಾ ಗೊತ್ತೇ ಇದೆ. ದಲಿತರಿಗೆ ಮೀಸಲಾತಿ ನೀಡಿದರು ಎನ್ನುವ ಕಾರಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು 'ಚೋಟಾ ಭೀಮ್' ಎಂದು ಅಣಕಿಸುವಂತಹ ಕೀಳು ಮಟ್ಟದ ಮನಸ್ಥಿತಿಯನ್ನು RSS ಬೆಳೆಸಿದೆ ಎಂದು ಟೀಕಿಸಿದರು.

NCRB ವರದಿಯ ಪ್ರಕಾರ, ಈ ದಿನ ಭಾರತದಲ್ಲಿ ದಲಿತರ ಮೇಲೆ ನಡೆಯದಿರುವ ಹಲ್ಲೆಗಳೇ ಇಲ್ಲ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಶಾಸಕನೇ ದಲಿತ ಯುವತಿಯನ್ನು ಅತ್ಯಾಚಾರ ಎಸಗಿ ರಾತ್ರೋರಾತ್ರಿ ಅವಳನ್ನು ಸುಟ್ಟು ಹಾಕಲಾಯಿತು. ಹೀಗಿರುವಾಗ ಬಿಜೆಪಿಗರು ನಾವು ದಲಿತರ ಪರ ಎಂದು ಹೇಳುವುದು ತಮಾಷೆಯಲ್ಲವೇ? ಎಂದವರು ಹೇಳಿದ್ದಾರೆ.

- ಇಷ್ಟು ದಿನ ಇಲ್ಲದ ಒಳ ಮೀಸಲಾತಿ ಪ್ರಸ್ತಾವ ಚುನಾವಣೆಗೆ 6 ತಿಂಗಳು ಇರುವಾಗ ಏಕೆ? ಈ ಪ್ರಸ್ತಾವ ತರಲು ಇಷ್ಟು ದಿನ ಬೇಕಿತ್ತೇ? - ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಳ ಮೀಸಲಾತಿ ಕೂಗು ಎಬ್ಬಿಸುತ್ತಿದ್ದ ಕಾರಜೋಳ ಅಂಥವರು, ಸಚಿವರಾದ ಮೇಲೆ ಯಾವ ಜನಪರ ಕಾಯ್ದೆಯನ್ನೂ ಜಾರಿ ಮಾಡದೇ, 40% ಲಂಚದಲ್ಲಿ ಮುಳುಗಿ, SCP/ STP ಅನುದಾನವು ಬೇರೆ ಕಡೆ ಹೋಗುವಾಗ, ಅದರ ಬಗ್ಗೆ ಬಾಯಿ ಬಿಡದೇ ಈಗ ಚುನಾವಣೆ ಸಂದರ್ಭದಲ್ಲಿ ಒಳ ಮೀಸಲಾತಿ ಚರ್ಚೆಯನ್ನು ಮುಂದು ಬಿಡುತ್ತಿದ್ದರೆ ಇದು ಇತರರಿಗೆ ಅರ್ಥವಾಗುವುದಿಲ್ಲವೇ? - ಈಗಾಗಲೇ ಸಲ್ಲಿಕೆಯಾಗಿದ್ದ ನಾಗಮೋಹನ್ ದಾಸ್ ಅವರ ವರದಿಯನ್ನು ಒಪ್ಪಿಕೊಳ್ಳಲು ಮೂರು ವರ್ಷ ಬೇಕಾಗಿತ್ತೇ? ಎಂದು ಮಾಜಿ ಸಚಿವರು ಪ್ರಶ್ನಿಸಿದ್ದಾರೆ.

ಇಷ್ಟೇ ಅಲ್ಲದೇ ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೂಡಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ಸಮುದಾಯಕ್ಕೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬುದನ್ನೇ ಇವರು ಚುನಾವಣೆ ಹೊತ್ತಿನಲ್ಲಿ ಮುನ್ನಲೆಗೆ ತಂದಿರುವುದು ದಲಿತರನ್ನು ಭಾವನಾತ್ಮಕವಾಗಿ ವಂಚಿಸುವ ತಂತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ.

- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ SCP / TSP ಕಾಯ್ದೆ, ಬಡ್ತಿ ಮೀಸಲಾತಿ ಕಾಯ್ದೆ, ಗುತ್ತಿಗೆ ಮೀಸಲಾತಿ ಕಾಯ್ದೆ, ಮೂಲ ಸೌಕರ್ಯಗಳ ಹೆಚ್ಚಳ, ನಿಗಮಗಳಿಗೆ ಅತಿ ಹೆಚ್ಚಿನ ಅನುದಾನವನ್ನು ನೀಡಿದ್ದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನಂತರದಲ್ಲಿ ಬಿಜೆಪಿಯು ಸಂಪೂರ್ಣ RSS ಕೈಗೆ ಹೋಗಿದೆ, ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಮೀಸಲಾತಿಯ ವಿರೋಧಿಗಳಾದ RSS ನವರ ಮೀಸಲಾತಿ ಹೆಚ್ಚಳ ಎಂಬ ನಾಟಕವನ್ನು ನಂಬಿ ಅವರಿಗೆ ದಲಿತರು ಮತ ಹಾಕಿದರೆ ತಮಗೆ ಸಿಕ್ಕಿದ ಅಧಿಕಾರದ ಬಲದಿಂದ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಸುಳ್ಳಲ್ಲ ಎಂದು ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

- ಶ್ರಮಿಕರು ಮತ್ತು ಭಾವನಾತ್ಮಕ ಹಾಗೂ ಸೌಹಾರ್ದಯುತ ಜೀವಿಗಳಾದ ದಲಿತರು ಚುನಾವಣೆ ಬರುವ ತನಕ ಮಾತ್ರವೇ ಮಾಡುತ್ತಿರುವ ಈ RSS ಪ್ರೇರಿತವಾದ ಮೀಸಲಾತಿ ನಾಟಕವನ್ನು ಅರ್ಥ ಮಾಡಿಕೊಂಡು ದಲಿತರೆಂದರೆ ಮೋಸ ಹೋಗಲು ಇರುವ ಜನರಲ್ಲ ಎಂಬುದನ್ನು ಸಾಬೀತುಪಡಿಸಿ, ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಿದವರನ್ನು ತಾಳ್ಮೆಯಿಂದ ಗುರುತಿಸಿ ಅವರಿಗೆ ಮನ್ನಣೆ ನೀಡಬೇಕು. ಇಲ್ಲದೇ ಇದ್ದರೆ ಮೀಸಲಾತಿ ಹೆಚ್ಚಳ ಎಂದು ಆರಂಭವಾಗಿರುವ ಇವರ ನಾಟಕವು, ಮೀಸಲಾತಿಯ ನಿಷೇಧ ಎಂಬುದರಲ್ಲಿ ಮುಕ್ತಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News