ಶೈಕ್ಷಣಿಕ ಖಾಸಗೀಕರಣ ಕರ್ನಾಟಕದಿಂದಲೇ ಆರಂಭ: ಸಚಿವ ಡಾ.ಅಶ್ವತ್ಥ ನಾರಾಯಣ

Update: 2022-10-16 16:58 GMT

ಬೆಂಗಳೂರು, ಅ. 16 : ದೇಶದಲ್ಲಿ ಶಿಕ್ಷಣ ಕ್ಷೇತ್ರದ ಖಾಸಗೀಕರಣ ಕರ್ನಾಟಕದಿಂದಲೇ ಆರಂಭವಾಗಿದೆ. ಹಿಂದೆ ಹಲವರು ಇದನ್ನು ಪ್ರತಿಭಟಿಸಿದರು. ಆದರೆ ಖಾಸಗೀಕರಣವು ಅಂದಿನ ಕಾಲಕ್ಕೆ ಅಗತ್ಯವಿದ್ದು, ಇಂದು ರಾಜ್ಯವು ಶಿಕ್ಷಣ ರಂಗದಲ್ಲಿ ಮೂಂಚೂಣಿಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ರವಿವಾರ ನಡೆದ ಎಂಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಯ್ಯ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ಜಾಗತಿಕ ಮತ್ತು ಸ್ಪರ್ಧಾತ್ಮಕ ಶಿಕ್ಷಣ ಒದಗಿಸುತ್ತಿವೆ. ಇಂತಹ ಸಂಸ್ಥೆಗಳ ಬೆಳವಣಿಗೆಗೆ ಸರಕಾರವು ಅಗತ್ಯ ನೆರವು ನೀಡಲಿದೆ ಎಂದು ಅವರು ಆಶ್ವಾಸನೆ ನೀಡಿದರು.

ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ಸಮಾಜದ ಸಬಲೀಕರಣ ಮತ್ತು ಬೆಳವಣಿಗೆಗೆ ಮೌಲಿಕ ಕೊಡುಗೆ ನೀಡಿದ ಎಂ.ಎಸ್. ರಾಮಯ್ಯ ನಿಜವಾದ ಕರ್ಮಯೋಗಿ ಆಗಿದ್ದರು. ಶಿಕ್ಷಣದ ಬೆಳವಣಿಗೆಯೇ ಸಮಾಜದ ಉನ್ನತಿಗೆ ಆಧಾರ ಸ್ತಂಭವಾಗಿದೆ. ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯೇ ಸಮಾಜದ ಬೆಳವಣಿಗೆಯಾಗಿದೆ. ಆದುದರಿಂದ ಸಮಾಜವು ಶಿಕ್ಷಣಾಧಾರಿತವಾಗಿ ಬೆಳೆಯಬೇಕು ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಂ.ಆರ್.ಜಯರಾಂ, ಎಂ.ಆರ್.ಸೀತಾರಾಂ, ಎಂ.ಆರ್. ರಾಮಯ್ಯ, ಹಿರಿಯ ವಿಜ್ಞಾನಿ ವಾಸುದೇವ ಅತ್ರೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News