ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ತೆರಳುತ್ತಿದ್ದ ವ್ಯಕ್ತಿ ರಸ್ತೆಗುಂಡಿಗೆ ಬಲಿ
Update: 2022-10-23 15:24 GMT
ಬೆಂಗಳೂರು: ನಗರದ ಹೊರವಲಯದ ಮಾದಾವರ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆಗುಂಡಿಗೆ ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ. ಪಾವಗಡ ಮೂಲದ ತಿಪ್ಪೇಸ್ವಾಮಿ (45) ಎಂಬವರು ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ನಗರದ ನೆಲಮಂಗಲ ಸಮೀಪದ ಮಾದಾವರದಲ್ಲಿ ವಾಸವಿದ್ದ ತಿಪ್ಪೇಸ್ವಾಮಿ, ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಊರಿಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಸ್ತೆಯಲ್ಲಿನ ಹೊಂಡ ತಪ್ಪಿಸಲು ಹೋಗಿ ಬಿದ್ದ ತಿಪ್ಪೇಸ್ವಾಮಿ ಅವರ ಮೇಲೆಯೇ ಲಾರಿಯೊಂದು ಸಾಗಿ ಹೋಗಿದೆ. ಅಪಘಾತದ ತೀವ್ರತೆಗೆ ತಿಪ್ಪೇಸ್ವಾಮಿ ಧರಿಸಿದ್ದ ಹೆಲ್ಮೆಟ್ ಪುಡಿಪುಡಿಯಾಗಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಲಾರಿ ಚಾಲಕ ಸಂಚಾರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.