ಬೆಂಗಳೂರು: ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತ್ಯು

Update: 2022-10-23 15:36 GMT
ಶಿಲ್ಪಾ ಶ್ರೀ

ಬೆಂಗಳೂರು(Bengaluru): ಬಿಎಂಟಿಸಿ (BMTC) ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಬೆಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿ ಶಿಲ್ಪಾ ಶ್ರೀ(23) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿ ಡಿ.ಹೊಸಹಳ್ಳಿ ಗ್ರಾಮದ ಶಿಲ್ಪಾ ಶ್ರೀ ಇಲ್ಲಿನ ಜ್ಞಾನಭಾರತಿ ಆವರಣದಲ್ಲಿ ಅ.10ರಂದು ಬಿಎಂಟಿಸಿ ಬಸ್ ಹತ್ತುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು. ಈ ವೇಳೆ ಆಕೆಯ ಮೇಲೆ ಬಸ್ ಹರಿದು ತೀವ್ರವಾಗಿ ಗಾಯಗೊಂಡಿದ್ದರು.

ಆನಂತರ, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರವಿವಾರ ಬೆಳಗಿನ ಜಾವ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಶಿಲ್ಪಾಶ್ರೀ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕೋಲಾರದ ಬಂಗಾರಪೇಟೆಗೆ ರವಾನೆ ಮಾಡಲಾಯಿತು. ಸ್ವಗ್ರಾಮದಲ್ಲಿಯೇ ವಿದ್ಯಾರ್ಥಿನಿಯ ಅಂತ್ಯಸಂಸ್ಕಾರ ನಡೆಯಿತು.

ಜೀವನ್ಮರಣ ಹೋರಾಟ: ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿಲ್ಪಾ ಶ್ರೀ ಅವರನ್ನು ಬನ್ನೇರುಘಟ್ಟದ ಫೋರ್ಟೀಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ 14 ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು ಎಂದು ಅವರ ಸಹಪಾಠಿಯೊಬ್ಬರು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿ ಗಣಿತ ವಿಭಾಗದ ಎಂಎಸ್‍ಸಿ ವಿದ್ಯಾರ್ಥಿನಿ ಆಗಿದ್ದ ಶಿಲ್ಪಾ ಶ್ರೀ ಅವರ ಆಕಸ್ಮಿಕ ಸಾವಿನಿಂದ ಸಹಪಾಠಿ, ಗೆಳತಿಯರು, ಗ್ರಾಮಸ್ಥರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ತೆರಳುತ್ತಿದ್ದ ವ್ಯಕ್ತಿ ರಸ್ತೆಗುಂಡಿಗೆ ಬಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News