×
Ad

'BJP ಸರಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್ ದಂಧೆಗೆ MTB ನಾಗರಾಜ್ ಹೇಳಿಕೆಯೇ ಸಾಕ್ಷಿ': ವಿಡಿಯೋ ಹಂಚಿಕೊಂಡ ಕುಮಾರಸ್ವಾಮಿ

ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣ; ಉನ್ನತ ಮಟ್ಟದ ತನಿಖೆಗೆ ಎಚ್‌ಡಿಕೆ ಆಗ್ರಹ

Update: 2022-10-28 19:36 IST

ಬೆಂಗಳೂರು, ಅ.28: ಬಿಜೆಪಿ ಸರಕಾರದಲ್ಲಿ ಕಾಸಿಗಾಗಿ ಹುದ್ದೆ ಪೋಸ್ಟಿಂಗ್ ದಂಧೆ ತಾಂಡವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆ.ಆರ್.ಪುರ ಠಾಣೆ ಇನ್ಸ್ ಪೆಕ್ಟರ್ ನಂದೀಶ್ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, 'ಬಿಜೆಪಿ ಸರಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್ ಕೊಡಲಾಗುತ್ತಿದೆ ಹಾಗೂ ನಂದೀಶ್ ಅವರಿಗೆ ಪೋಸ್ಟಿಂಗ್ ನೀಡಲು ಹಣ ಪಡೆದಿರುವ ಅಂಶವನ್ನು ಸಚಿವ ಎಂ.ಟಿ.ಬಿ.ನಾಗರಾಜ್ ಬಹಿರಂಗಪಡಿಸಿದ್ದಾರೆ' ಎಂದು ಹೇಳಿದ್ದಾರೆ.

''ಅಮಾನತು ಶಿಕ್ಷೆಗೆ ಗುರಿಯಾಗಿ ಧಾರುಣ ಸಾವಿಗೆ ತುತ್ತಾದ ಕೆ.ಆರ್.ಪುರ ಠಾಣೆ ಇನ್ಸ್ಸ್‍ಪೆಕ್ಟರ್ ನಂದೀಶ್ ಹೃದಯಾಘಾತಕ್ಕೆ ಕಾರಣವೇನು? ಇದು ಇಡೀ ರಾಜ್ಯದ ಪ್ರಶ್ನೆ. ಈಗ ಸರಕಾರವೇ ಸತ್ಯ ಹೇಳಿದೆ. ಸದ್ಯ, ಸರಕಾರವು ಸಾವಿನಲ್ಲೂ ಸತ್ಯ ಹೇಳುವ ಧೈರ್ಯ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸಚಿವರೇ ವಿಷಯ ಬಹಿರಂಗ ಮಾಡಿದ್ದಾರೆ'' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

'ರಾಜ್ಯದಲ್ಲಿ ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ ಎನುವುದನ್ನು ಸ್ವತಃ ಸರಕಾರವೇ ಒಪ್ಪಿಕೊಂಡಂತೆ ಆಗಿದೆ. ಪೋಸ್ಟಿಂಗ್ ಗೆ 70-80 ಲಕ್ಷ ರೂ. ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತದೆ ಎಂದು ಹೇಳಿರುವ ಸಚಿವ ಎಂಟಿಬಿ ನಾಗರಾಜ್ ಹೇಳಿಕೆಯು ಈ ಸರಕಾರದ ಕಾಸಿಗಾಗಿ ಪೋಸ್ಟಿಂಗ್ ದಂಧೆಗೆ ಹಿಡಿದ ಕನ್ನಡಿ'' ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಒಂದೇ ಕಾರ್ಡಿನಲ್ಲಿ ಎಚ್ ಡಿಕೆ, ಸಿದ್ದರಾಮಯ್ಯ ಭಾವಚಿತ್ರ: KPCC ಶಿಸ್ತು ಪಾಲನಾ ಸಮಿತಿಗೆ ದೂರು

''ಸಚಿವರೇ ಹೇಳಿದಂತೆ 70-80 ಲಕ್ಷ ರೂ.ಗಳನ್ನು ನಂದೀಶ್ ಯಾರಿಗೆ ಕೊಟ್ಟರು? ಇದರಲ್ಲಿ ಅವರ ಮೇಲಿನ ಉನ್ನತ ಅಧಿಕಾರಿಗಳು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಪರ್ಸಂಟೇಜ್ ಹೋಗಿದೆಯಾ? ಅಥವಾ ಕಾಣದ ರಿಮೋಟ್ ಯಾವುದಾದರೂ ಇದೆಯಾ? ಸಚಿವರಂತೆ ನೀವೂ ಸತ್ಯ ಹೇಳಿ ಸಿಎಂ ಸಾಹೇಬರೇ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

''ಎಂಟಿಬಿ ನಾಗರಾಜ್ ಹೇಳಿದ್ದು ನಿಜ ಎನ್ನುವುದಕ್ಕೆ ನಾನು ಟ್ಯಾಗ್ ಮಾಡಿರುವ ವಿಡಿಯೋ ತುಣುಕೇ ಸಾಕ್ಷಿ. ನನ್ನ ಪ್ರಶ್ನೆ ಇಷ್ಟೇ, ಈ ಬಗ್ಗೆ ಸಿಎಂ ಏನು ಹೇಳುತ್ತಾರೆ? ಸಂಘ ಸಂಸ್ಕಾರದ ಗೃಹ ಸಚಿವರು ಉತ್ತರ ನೀಡಲೇಬೇಕು. ಧಮ್ಮಿದ್ರೆ, ತಾಕತ್ತಿದ್ರೆ ಎನ್ನುವ ಮುಖ್ಯಮಂತ್ರಿಗಳು ಈ ಬಗ್ಗೆ ಮೌನ ಮುರಿಯುವ ತಾಕತ್ತು ತೋರಬೇಕು'' ಎಂದು ಅವರು ವ್ಯಂಗ್ಯವಾಡಿದ್ದಾರೆ.

'ಎಂಟಿಬಿ ನಾಗರಾಜ್ ಹೇಳಿದ್ದು ಸತ್ಯವಾ ಅಥವಾ ಸುಳ್ಳಾ ಎನ್ನುವುದನ್ನು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಬೇಕು. ಸತ್ಯವೇ ಆಗಿದ್ದರೆ, ಇಡೀ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಲೇ ಬೇಕು. ಸುಳ್ಳು ಎನ್ನುವುದಾದರೆ ಹೇಳಿಕೆ ಕೊಟ್ಟ ಸಚಿವರ ಕಥೆ ಏನು? ದಯವಿಟ್ಟು ಮಾತನಾಡಿ ಮುಖ್ಯಮಂತ್ರಿಗಳೇ' ಎಂದು ಅವರು ಪ್ರಶ್ನಿಸಿದ್ದಾರೆ.

''ಬಿಜೆಪಿ ಸರಕಾರವು ಕರ್ನಾಟಕ ಪೊಲೀಸ್ ವ್ಯವಸ್ಥೆಯ ನೈತಿಕಸ್ಥೈರ್ಯ ಕುಗ್ಗಿಸಿದೆ. ಬಿಜೆಪಿ ಹೈಕಮಾಂಡ್ ಏಜೆಂಟ್ ರಂತೆ ವರ್ತಿಸುತ್ತಿರುವ ಉತ್ತರ ಭಾರತದ ಕೆಲ ಹಿರಿಯ ಹಿಂದಿ ಪೊಲೀಸ್ ಅಧಿಕಾರಿಗಳು, ಕನ್ನಡ ಅಧಿಕಾರಿಗಳನ್ನು ಗುಲಾಮರಂತೆ ನೋಡುತ್ತಿದ್ದಾರೆ. ನಮ್ಮ ಕಿರಿಯ ಮಟ್ಟದ ಅಧಿಕಾರಿಗಳು ಅವರಿಗೆ ಊಳಿಗ ಮಾಡುವಂಥ ಸ್ಥಿತಿ ಇದೆ'' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಸಾವಿನ ಮನೆಗೆ ಸಾಂತ್ವನ ಹೇಳಲು ಹೋದ ಸಚಿವರೇ ಸತ್ತ ಜೀವದ ಬಗ್ಗೆ ಎಗ್ಗಿಲ್ಲದೇ ನಿರ್ಲಜ್ಜವಾಗಿ ಮಾತನಾಡಿದ್ದು ಸರಿಯೋ ತಪ್ಪೋ , ಆ ತರ್ಕ ಬೇಡ. ಆದರೆ, ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕಿದೆ. ಸಂಘ ಸಂಸ್ಕಾರದ ಸರಕಾರಕ್ಕೆ ಸತ್ಯ ಹೇಳದೇ ದಾರಿ ಇಲ್ಲ ಎಂದಿದ್ದಾರೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Similar News