ಸ್ವತಃ ನಾನೇ ಜೂಜು ಅಡ್ಡೆ ಬಂದ್ ಮಾಡಿಸಿದರೂ, ಪುನಃ ಆರಂಭಿಸಲಾಗುತ್ತಿದೆ: ಸಚಿವ ಆರಗ ಜ್ಞಾನೇಂದ್ರ ಬೇಸರ

Update: 2022-10-29 16:10 GMT

ಬೆಂಗಳೂರು, ಅ.29: ಸ್ವತಃ ನಾನೇ ಬೆಂಗಳೂರಿನಲ್ಲಿ ಜೂಜು ಅಡ್ಡೆಗಳನ್ನು ಬಂದ್ ಮಾಡಿದರೂ, ಕೆಲ ಠಾಣಾ ವ್ಯಾಪ್ತಿಗಳಲ್ಲಿ ಪುನಃ ಆರಂಭಿಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಆರಂಭದಿಂದಲೂ ಬೆಂಗಳೂರಿನಲ್ಲಿ ಕ್ಯಾಬರೆ ಇಸ್ಪೀಟ್ ಕ್ಲಬ್, ಕ್ಯಾಸಿನೊ ಇವೆಲ್ಲವೂ ಬಂದಾಗಬೇಕು ಎಂದು ಕೆಲಸ ಮಾಡಿದ್ದೇನೆ. ಆದರೆ ಇತ್ತೀಚಿಗೆ ಮತ್ತೆ ಆರಂಭ ಮಾಡುವ ಕೆಲಸ ಕೆಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಎಲ್ಲರಿಗೂ ಸುತ್ತೋಲೆ ಕಳಿಸಸಿ ಬಂದ್ ಮಾಡಬೇಕು ಎಂದು ಸೂಚಿಸಿದ್ದರು' ಎಂದು ತಿಳಿಸಿದರು.

ತನಿಖೆ: ಕೆಆರ್ ಪುರಂ ಇನ್ಸ್‍ಪೆಕ್ಟರ್ ನಂದೀಶ್ ಹಣ ಕೊಟ್ಟು ಬಂದಿದ್ದರು ಎಂಬ ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾಗರಾಜ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಅವರ ಬಳಿ ನಾನು ಮಾಹಿತಿ ಪಡೆಯುತ್ತೇನೆ ಎಂದರು.

Similar News