ದಿಗಿಲು ಧನ್ಯತೆಗಳ ನಡುವೆ

Update: 2022-10-30 06:54 GMT

‘ಉರಿವ ಜಾತ್ರೆ’ಯ ಕವಿತೆಗಳಲ್ಲಿ ಎಷ್ಟೊಂದು ಕಥೆಗಳು! ಆ ಕಥೆಗಳೊಳಗೆ ದಿಗಿಲು ತಲ್ಲಣ-ತಳಮಳಗಳು, ಮಗಳ ಸಾನಿಧ್ಯ, ಅಂಕೋಲೆಯ ನೆನಪು; ಜೊತೆಗೆ ಪ್ರೇಯಸಿಯರು ಮತ್ತು ಇತರರು; ಹಾಗೆಯೇ ಮಧ್ಯಾಹ್ನವೂ! ಕಲ್ಪನೆಗಳನ್ನು ಒಟ್ಟುಗೂಡಿಸಿ ಓದುಗನ ಮನಸೆಳೆಯುವ ತಂತ್ರಗಾರಿಕೆ ಇಲ್ಲಿಲ್ಲ; ಭಾವನಾಲೋಕದ ಅತಿರೇಕದ ನಾಟಕಗಳೂ ಇಲ್ಲ. ಇಲ್ಲೇನಿದ್ದರೂ ಕವಿಯಿದ್ದಾರೆ; ಕವಿಯ ಪ್ರಪಂಚ, ಕನಸು, ನಂಬಿಕೆ, ನೆನಪು ಹಾಗೂ ಅನುಭವಗಳು! ಈ ಕವಿತೆಗಳಲ್ಲೊಂದು ವಿಶಿಷ್ಟವಾದ ಪ್ರಾಮಾಣಿಕತೆಯಿದೆ ಹಾಗೂ ಆ ನೇರವಂತಿಕೆಯಿಂದ ನಮಗೆ ಬೇಕಾಗಿದ್ದನ್ನು ಮಾತ್ರ ಆರಿಸಿಕೊಳ್ಳಬಹುದಾದಷ್ಟು ವೈವಿಧ್ಯವೂ!

ಈ ಘಳಿಗೆಯೊಂದಿಗೆ ಆರಂಭವಾಗುವ ‘ಉರಿವ ಜಾತ್ರೆ’ ಆಚೀಚೆ ಚಾಚಿರುವ ತಲ್ಲಣದ ಕ್ಷಣಗಳನ್ನೆಲ್ಲ ಥಟ್ಟನೆ ನಮ್ಮೆದುರು ತಂದು ನಿಲ್ಲಿಸುತ್ತದೆ. ಹೆಬ್ಬಾಗಿಲಿಗೆ ಬಂದು ಕಾದಿರುವ ದಾರಿಗಳು, ಮಾತಿಗಾಗಿ ತವಕಿಸುತ್ತಿರುವ ಅರಳಿಕಟ್ಟೆಗಳು, ತೇಲಿಹೋದ ಮೋಡಗಳು, ನಿಂತುಹೋದ ಮಳೆಯ ಹಾಡು ಎಲ್ಲ ದೃಶ್ಯಗಳೂ ಮಳೆಗೊಡ್ಡಿ ನಿಂತ ಮುಖವ ಸ್ಪರ್ಶಿಸಿ ಒಂದೊಂದಾಗಿ ಎದೆಗಿಳಿವ ತಣ್ಣನೆಯ ಹನಿಗಳಂತೆ ನಮ್ಮನ್ನಾವರಿಸಿಕೊಳ್ಳುತ್ತವೆ. ಈ ಕವಿತೆಗಳ ಸಾಲುಗಳು, ಇವು ಕೇಳುತ್ತಿರುವ ಪ್ರಶ್ನೆಗಳು, ಧ್ವನಿಸುತ್ತಿರುವ ದಿಗಿಲುಗಳೆಲ್ಲವೂ ದುಃಖ, ಹತಾಶ ಅಥವಾ ಸಂತಸ ಎಂಬಿತ್ಯಾದಿ ಎಲ್ಲ ಸಂವೇದನೆಗಳ ಮಧ್ಯದಲ್ಲೆಲ್ಲೋ ಅಸ್ತಿತ್ವ ಕಂಡುಕೊಂಡಿರುವ ಕ್ಷಣಗಳೊಂದಿಗೆ ನಮ್ಮನ್ನು ಮುಖಾಮುಖಿಯಾಗಿಸುತ್ತವೆ.

ಸಂಕಟಗಳೊಂದಿಗೆ ಶುರುವಾಗುವ ಈ ಕವಿತೆಯೊಳಗಿನ ಕಥೆಗಳ ಹೊಯ್ದಾಟಗಳು ಒಮ್ಮೆ ದೈನಂದಿನವಾಗಿ, ಮತ್ತೊಮ್ಮೆ ಸಾಮಾಜಿಕವಾಗಿ, ರಾಜಕೀಯ ವ್ಯವಸ್ಥೆಯ ಭಾಗವೂ ಆಗಿ ನಮ್ಮ ಅರಿವಿಗೆ ಸಿಕ್ಕಿದ ಮಾರ್ಗದಲ್ಲಿ ಬೆಳೆಯುತ್ತ ಹೋಗುತ್ತವೆ. ಇಲ್ಲಿ ಎದುರಾಗುವ ಬ್ರಹ್ಮರಾಕ್ಷಸನೊಂದಿಗೆ ಹಾಗೂ ಆತನ ಆತ್ಮದೊಂದಿಗೆ ಸೆಣಸಾಡುವುದು ಅಥವಾ ಎಲ್ಲ ಕಲ್ಲೋಲಗಳಾಚೆ ನಿಂತು ಕವಿತೆಗಳನ್ನು ಆಸ್ವಾದಿಸುವುದು ನಮ್ಮದೇ ಆಯ್ಕೆ, ಕಥೆಯೊಳಗೆ ಕವಿತೆಯೋ, ಕವಿತೆಯೊಳಗೆ ಕಥೆಯೋ ಎಲ್ಲವೂ ಬರೆದವನ ಹೃದಯದಲ್ಲಿ ಹುಟ್ಟಿ ಓದುವವನ ಅನುಭವಕ್ಕೆ ದಕ್ಕಿ, ಇಬ್ಬರಿಂದಲೂ ಹೊರತಾದ ಏಕಾಂತತೆಗೆ ಒದಗಿಬಂದ ಸಮಯದಲ್ಲಿ ಸಂಕಟಗಳೆಲ್ಲವೂ ಹೋರಾಟಗಳಿಲ್ಲದೇ ಕೊನೆಗೊಳ್ಳುತ್ತವೆ.

ಕಾಮನಬಿಲ್ಲೊಂದು ಥಟ್ಟನೆ ಪ್ರತ್ಯಕ್ಷವಾಗಿ ಮನದ ಮಾತು ಕವಿತೆಯಾಗುತ್ತದೆ. ಬಣ್ಣಗಳ ನಡುವಿನಿಂದ ವಿಷಾದವೊಂದು ಕನಸಿನ ಎಳೆಯಾಗಿ ಬಿಚ್ಚಿಕೊಂಡು ದುಃಸ್ವಪ್ನವಾಗಿ ಕಂಗೆಡಿಸುತ್ತದೆ. ಕಾಮನಬಿಲ್ಲಿನಂತಹ ಕನಸ ಅರಸುವವರಿಗೆ ಹತಾಶೆಯ ಭಾವವೊಂದು ಆವರಿಸಿಕೊಂಡ ಅನುಭವವಾದರೂ ಕವಿತೆಯ ಸಾಲುಗಳು ಪರಿಣಾಮಕಾರಿಯಾಗಿ ಹೇಳಬೇಕೆಂದುಕೊಂಡಿದ್ದನ್ನು ಹೇಳುವಲ್ಲಿ ಸಫಲವಾಗುತ್ತವೆ. ಅಷ್ಟಕ್ಕೂ ಕನಸು-ಮನಸುಗಳನ್ನು ಮೀರಿದ ವಾಸ್ತವಿಕತೆ ಪ್ರಬುದ್ಧ ಬರವಣಿಗೆಯ ಹಾಗೂ ಬದುಕಿನ ಅಗತ್ಯಗಳಲ್ಲಿ ಒಂದು ಎನ್ನುವುದಂತೂ ಸತ್ಯ.

ಕನ್ನಡಿಯನರಸುತ್ತ ಬಿಂಬಗಳಲ್ಲಿ ಸಿಲುಕುವ ಕವಿ ಬಿಂಬಗಳು ಉಳಿಯುವುದಿಲ್ಲ ಎನ್ನುವ ವಾಸ್ತವವನ್ನೂ ಬಿಂಬಗಳಿಗೆ ಕರುಣೆಯಿಲ್ಲ ಎನ್ನುವ ವಿಷಾದವನ್ನೂ ನಮ್ಮೊಳಗೆ ತುಂಬುವ ಹೊತ್ತಲ್ಲೇ, ಎದೆಯ ಬಾಗಿಲನೆಂದೂ ತೆರೆದಿಡೋಣ ಎನ್ನುವ ಹೊಳಹನ್ನೂ ಕಾಣಿಸುತ್ತಾರೆ. ಈ ಬಿಂಬಗಳಲ್ಲಿ ನಾವು ಏನನ್ನು ಕಂಡೆವು ಎನ್ನುವುದಕ್ಕಿಂತ ಅವು ಎಷ್ಟು ಸ್ಪಷ್ಟವಾಗಿ ಕಾಣಿಸಿಕೊಂಡೆವು ಎನ್ನುವುದು ಮುಖ್ಯವಾಗುತ್ತ, ಕವಿತೆಗಳ ಆಶಯವೊಂದು ಪರಿಪೂರ್ಣವಾಗಿರುವುದು ಇಲ್ಲಿನ ವಿಶೇಷತೆ. ವಿಷಾದಭರಿತ ಹೃದಯ, ಸತ್ಯಾಸತ್ಯತೆಯ ಹುಡುಕಾಟ, ಅಂತ್ಯವಿಲ್ಲದ ತಲ್ಲಣಗಳು ಇವೆಲ್ಲ ಓದಿಗೂ, ಬದುಕಿಗೂ ಅಗತ್ಯವಿದೆಯೇ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡರೆ ಉತ್ತರ ತೋರುವ ಕನ್ನಡಿಗೂ ತಳಮಳವಾದೀತು. ಅನುಭವಾಧಾರಿತ ಬರಹಗಳೇ ಆದರೂ ಓದುಗರನ್ನು ತಲುಪಿದಾಗ ಅವರವರ ಗ್ರಹಿಕೆಯ ಪರಿಮಿತಿಯಲ್ಲಿ ಹೊಸತೇನನ್ನೋ ಧ್ವನಿಸುತ್ತಿರುತ್ತವೆ; ಧ್ವನಿಸಬೇಕು ಕೂಡಾ, ಎಲ್ಲ ಪೂರ್ವಾಗ್ರಹಗಳನ್ನು ಬದಿಗಿಟ್ಟು ಕೃತಿಯೊಂದನ್ನು ಕೈಗೆತ್ತಿಕೊಳ್ಳುವುದು ಓದುಗನ ಜವಾಬ್ದಾರಿಯೂ ಹೌದು.

(ಮುನ್ನುಡಿಯಿಂದ)

Similar News