ಟೋಲ್ಗೇಟ್ ತೆರವಾಗದೆ ಹಿಂದಿರುಗುವುದಿಲ್ಲ: ಮಂಜುಳಾ ನಾಯಕ್
ಮಂಗಳೂರು, ಅ.30: ಸುಳ್ಳು ಭರವಸೆಗಳು ಬಿಜೆಪಿ ಜನಪ್ರತಿನಿಧಿಗಳ ಜಾಯಮಾನ ಎಂಬುದು ಜನರಿಗೆ ಅರ್ಥವಾಗಿದೆ. ಸುರತ್ಕಲ್ ಟೋಲ್ಗೇಟ್ ತೆರವಿಗೆ ಸಂಬಂಧಪಟ್ಟು ಜನರ ಸಹನೆ ಮುಗಿದಿದೆ. ಟೋಲ್ಗೇಟ್ ತೆರವು ಆದೇಶ ಹೊರಡಿಸುವವರೆಗೂ ಹಗಲು ರಾತ್ರಿ ಧರಣಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಮಹಿಳೆಯರನ್ನು ದೊಡ್ಡ ಸಂಖ್ಯೆಯಲ್ಲಿ ಈ ಹೋರಾಟಕ್ಕಾಗಿ ಸಂಘಟಿಸಿ ಮುಂಚೂಣಿಯಲ್ಲಿ ಇರುತ್ತೇವೆ. ಹೋರಾಟ ಯಶಸ್ಸು ಕಂಡ ನಂತರವೇ ವಿಶ್ರಾಂತಿ ಎಂದು ಹೋರಾಟಗಾರ್ತಿ ಮಂಜುಳಾ ನಾಯಕ್ ಹೇಳಿದರು.
ಸುರತ್ಕಲ್ ಟೋಲ್ಗೇಟ್ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯ ಮೂರನೇ ದಿನವಾದ ರವಿವಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ ಜನರನ್ನು ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾತ್ಮಕ ಹೋರಾಟಗಳಿಗೆ ಇಳಿಸುತ್ತಾ ಅಧಿಕಾರಕ್ಕೇರಿದ ಬಿಜೆಪಿ ಈಗ ಶಾಂತಿಯುತ ಹೋರಾಟಕ್ಕೂ ಅವಕಾಶ ನಿರಾಕರಿಸುತ್ತಿರುವುದು, ಬೆದರಿಸುವುದು ಖಂಡನೀಯ. ಟೋಲ್ಗೇಟ್ ತೆರವಾಗದಿದ್ದಲ್ಲಿ ಈ ಬಾರಿ ಬಿಜೆಪಿ ಬೆಲೆ ತೆರಬೇಕಾಗುತ್ತದೆ ಎಂದರು.
ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಉಪಮೇಯರ್ಗಳಾದ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್, ಉದಯಚಂದ್ರ ರೈ, ವೈ ರಾಘವೇಂದ್ರ ರಾವ್, ಹರೀಶ್ ಪೇಜಾವರ, ಮನ್ಸೂರ್ ಸಾಗ್, ಸಂತೋಷ್ ಬಜಾಲ್, ಬಾವಾ ಪದರಂಗಿ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಚರಣ್ ಶೆಟ್ಟಿ, ಮಾಧುರಿ ಬೋಳಾರ, ಮೌಶೀರ್ ಸಾಮಣಿಗೆ, ಕೃಷ್ಣ ತಣ್ಣೀರುಬಾವಿ, ರಾಜೇಶ್ ಕುಳಾಯಿ, ರಿಯಾಝ್ ಮಂಗಳೂರ, ಶ್ರೀಕಾಂತ್ ಸಾಲ್ಯಾನ್, ದಿನೇಶ್ ಬಸ್ರೂರು, ಸಮರ್ಥ ಭಟ್, ಶ್ರೀನಾಥ್ ಕುಲಾಲ್, ಸುಪ್ರೀತ್ ಶೆಟ್ಟಿ ಕೆದಿಂಜೆ, ಯೋಗೀಶ್ ಆಚಾರ್ಯ ಇನ್ನಾ, ಪ್ರದೀಪ್ ಬೇಳಾಡಿ ಕಾರ್ಕಳ ಮತ್ತಿತರರು ಪಾಲ್ಗೊಂಡಿದ್ದರು.