ಸರಕಾರದ ಪ್ರತಿ ಇಲಾಖೆಯಲ್ಲೂ ಹುದ್ದೆಗಳ ಮಾರಾಟ: ಭಾಸ್ಕರ್ ರಾವ್ ಆರೋಪ

Update: 2022-10-31 15:59 GMT

ಬೆಂಗಳೂರು, ಅ.31: ಕೆ.ಆರ್.ಪುರ ಪೊಲೀಸ್ ಇನ್ಸ್‍ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣದ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಪೊಲೀಸ್ ಇಲಾಖೆ ಮಾತ್ರವಲ್ಲದೆ ಸರಕಾರದ ಪ್ರತಿ ಇಲಾಖೆಯಲ್ಲೂ ಹುದ್ದೆಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಇನ್ಸ್ ಪೆಕ್ಟರ್ ನಂದೀಶ್ ಸಾವಿನ ಸುದ್ದಿ ಕೇಳಿ ದುಃಖವಾಯಿತು ಎಂದಿರುವ ಅವರು, ಪೊಲೀಸ್ ಇಲಾಖೆ ಮಾತ್ರವಲ್ಲದೆ ಸರಕಾರದ ಪ್ರತಿ ಇಲಾಖೆಯಲ್ಲೂ ಹುದ್ದೆಗಳನ್ನು ಮಾರಾಟಕ್ಕೆ ಇಡಲಾಗಿದೆ, ಇದಕ್ಕೆಲ್ಲ ಸ್ಥಳೀಯ ಶಾಸಕರು, ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿ ಕಾರಣ ಎಂದೂ ಅವರು ಆರೋಪಿಸಿದ್ದಾರೆ.

ಪ್ರತಿ ಹುದ್ದೆಯೂ ಲಕ್ಷದಿಂದ ಕೋಟಿ ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಇದು ಬಿಜೆಪಿ ಅವಧಿಯಲ್ಲಿ ಮಾತ್ರ ಎಂದೇನೂ ಅಲ್ಲ, ಹಿಂದಿನ  ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ನಡೆದಿತ್ತು ಎಂದು ಹೇಳಿದ್ದಾರೆ.

ಪೊಲೀಸರು ಸಾವಿಗೀಡಾದರೆ ಆ ಸ್ಥಾನಕ್ಕೆ ಇನ್ನೊಬ್ಬನನ್ನು ನೇಮಕ ಮಾಡುತ್ತಾರೆ. ಆದರೆ, ನಿಮ್ಮ ಮನೆಯವರಿಗೆ ಪರ್ಯಾಯ ಇರುವುದಿಲ್ಲ. ಒಂದು ವೇಳೆ ನೀವೂ ದುಡ್ಡು ಕೊಟ್ಟು ಬಂದಿದ್ದರೂ ತಲೆ ಕೆಡಿಸಿಕೊಳ್ಳಬೇಡಿ, ದುಡ್ಡು ಹೋದರೆ ಹೋಗಲಿ, ಆರೋಗ್ಯ ಕಾಪಾಡಿಕೊಳ್ಳಿ, ನಿಮ್ಮ ಪ್ರಾಣ ಮುಖ್ಯ ಎಂದು ಭಾಸ್ಕರ್ ರಾವ್ ಸಲಹೆ ನೀಡಿದ್ದಾರೆ.

Similar News