ಬಿಜೆಪಿ ಶಾಸಕನ ಹೆಸರಿನಲ್ಲಿ ಕೆಎಸ್ಸಾರ್ಟಿಸಿ ಸಿಬ್ಬಂದಿಯ ವರ್ಗಾವಣೆಗೆ ಯತ್ನ: ಆರೋಪಿ ಸೆರೆ

Update: 2022-11-05 10:38 GMT

ಬೆಂಗಳೂರು, ನ.5: ಬಿಜೆಪಿ ಶಾಸಕ ಎಲ್.ನಾಗೇಂದ್ರ ಅವರ ಹೆಸರಿನಲ್ಲಿ ಕೆಎಸ್ಸಾರ್ಟಿಸಿ ಸಿಬ್ಬಂದಿಯೊರ್ವನನ್ನು ವರ್ಗಾವಣೆ ಮಾಡಲು ಯತ್ನಿಸಿದ ಆರೋಪಿಯನ್ನು ವಿಲ್ಸನ್‍ಗಾರ್ಡನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಳವಳ್ಳಿ ತಾಲೂಕಿನ ಅಗಸನಪುರದ ಪುನೀತ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಅ.28ರಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿದೇಶಕರಿಗೆ ಕರೆ ಮಾಡಿದ್ದ ಆರೋಪಿ, ತಾನೂ ಬಿಜೆಪಿ ಶಾಸಕ ಎಲ್.ನಾಗೇಂದ್ರ ಎಂದು ಪರಿಚಯ ಮಾಡಿಕೊಂಡಿದ್ದ. ಆನಂತರ, ಚಾಲಕ ಕಮ್ ನಿರ್ವಾಹಕ ಬಾಲರಾಜ್ ಅವರನ್ನು ಕೌಟಂಬಿಕ ಕಾರಣ ಮಂಡ್ಯ ಘಟಕದಿಂದ ಮಳವಳ್ಳಿ ಘಟಕಕ್ಕೆ ವರ್ಗಾವಣೆ ಮಾಡಿಕೊಡಿ ಎಂದು ಮನವಿ ಮಾಡಿದ್ದ.

ಮನವಿಯ ಬಗ್ಗೆ ಪರಿಶೀಲಿಸಲು ನಿರ್ದೇಶಕರು ಮಂಡ್ಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜುಗೆ ಸೂಚಿಸಿದ್ದು, ಈ ಬಗ್ಗೆ ಶಾಸಕ ನಾಗೇಂದ್ರ ಬಳಿ ಮಾತನಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆನಂತರ, ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿ ಪುನೀತ್‍ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

Similar News