ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 9,81,784 ಕೋಟಿ ರೂ.ಹೂಡಿಕೆ ಒಪ್ಪಂದ: ಸಚಿವ ಮುರುಗೇಶ್ ನಿರಾಣಿ

Update: 2022-11-05 14:38 GMT

ಬೆಂಗಳೂರು, ನ. 5: ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಒಟ್ಟು 9,81,784 ಕೋಟಿ ರೂ.ಬಂಡವಾಳ ಹೂಡಿಕೆ ಒಪ್ಪಂದವಾಗಿದೆ. ಈ ಪೈಕಿ ಶೇ.90ಕ್ಕೂ ಹೆಚ್ಚು ಯೋಜನೆಗಳು ಬೆಂಗಳೂರಿನ ಆಚೆ ಅನುಷ್ಠಾನಗೊಳ್ಳುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಶನಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಪೈಕಿ ಲಕ್ಷ ಕೋಟಿ ರೂ.ಮೊತ್ತದ 68 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 5,41,369 ಕೋಟಿ ರೂ.ಮೊತ್ತದ 57 ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 1.57ಲಕ್ಷ ಕೋಟಿ ರೂ.ಮೊತ್ತದ 2 ಯೋಜನೆಗಳನ್ನು ಸಮಾವೇಶದಲ್ಲಿ ಘೋಷಿಸಲಾಗಿದೆ ಎಂದು ವಿವರಿಸಿದರು.

ವಿವಿಧ ಉದ್ಯಮಿಗಳು 2 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಕುರಿತು ಒಪ್ಪಂದ ಪ್ರಸ್ತಾವನೆಗಳೊಂದಿಗೆ ಬಂದಿದ್ದರು. ಆದರೆ, ಈ ಯೋಜನೆಗಳಿಗೆ ಭೂಮಿ, ವಿದ್ಯುತ್, ಕಚ್ಚಾ ವಸ್ತುಗಳು, ಸಬ್ಸಿಡಿ ಸೇರಿದಂತೆ ವಿವಿಧ ವಿಷಯಗಳು ಇತ್ಯರ್ಥವಾಗಬೇಕಾಗಿರುವುದರಿಂದ ಒಪ್ಪಂದ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಉದ್ಯಮಿಗಳೊಂದಿಗೆ ನಮ್ಮ ಅಧಿಕಾರಿಗಳು ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮುರುಗೇಶ್ ನಿರಾಣಿ ಹೇಳಿದರು.

90 ದಿನಗಳೊಳಗೆ ಅನುಮೋದನೆ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ  ಮಾಡಿಕೊಂಡಿರುವ ಒಡಂಬಡಿಕೆಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಹೂಡಿಕೆದಾರರ ಸಮಾವೇಶದಲ್ಲಿ ಆಗಿರುವ ಒಪ್ಪಂದಗಳನ್ನು 90 ದಿನದೊಳಗೆ ಅನುಮೋದನೆ ನೀಡಲಾಗುವುದು ಎಂದು ಅವರು ತಿಳಿಸಿದರು.  

ಒಡಂಬಡಿಕೆಗಳ ಅನುಷ್ಠಾನಕ್ಕಾಗಿ ಜಿಲ್ಲಾವಾರು ಸಮನ್ವಯ ಸಮಿತಿ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಮುಖ್ಯವಾಗಿ  ಈ  ಸಮಾವೇಶದಲ್ಲಿ ಆಗಿರುವ ಒಪ್ಪಂದಗಳ ಪೈಕಿ ಅಂದಾಜು ಶೇ.70ರಷ್ಟು ಯೋಜನೆಗಳು ಅನುμÁ್ಠನಗೊಳ್ಳುವ ವಿಶ್ವಾಸ ಇದೆ ಎಂದು ಮುರುಗೇಶ್ ನಿರಾಣಿ ವಿವರಿಸಿದರು. 

ಬಿಯಾಂಡ್ ಬೆಂಗಳೂರು: ಬೆಂಗಳೂರಿನ ಆಚೆಗೆ ಕೈಗಾರಿಕೆಗಳನ್ನು ವಿಸ್ತರಿಸುವುದು ಈ ಜಾಗತಿಕ ಹೂಡಿಕೆದಾರರ ಸಮಾವೇಶದ ಪ್ರಮುಖ ಉದ್ದೇಶವಾಗಿತ್ತು. ಅದರಂತೆ  ಸಮಾವೇಶದಲ್ಲಿ ಆಗಿರುವ ಒಟ್ಟು ಒಪ್ಪಂದಗಳ ಪೈಕಿ ಶೇ.90ರಷ್ಟು ಬೆಂಗಳೂರಿನ ಆಚೆ ಆಗುತ್ತಿದೆ ಎಂದು ಅವರು ಹೇಳಿದರು. 

ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ 2 ಮತ್ತು 3ನೇ ಹಂತದ ನಗರಗಳಲ್ಲೂ ಹೂಡಿಕೆ ಮಾಡಲು ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಮುರುಗೇಶ್ ನಿರಾಣಿ ಹೇಳಿದರು.

ಗ್ರೀನ್ ಹೈಡ್ರೋಜನ್ ಉತ್ಪನ್ನಗಳಿಗೆ ಸಂಬಂಧಿಸಿದಂತೆ 1,57,014 ಕೋಟಿ ರೂ.ಗಳ ಐದು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 1,29,020 ಕೋಟಿ ರೂ.ಗಳ 4 ಯೋಜನೆಗಳ ಒಡಂಬಡಿಕೆಗೆ ಸಹಿ ಹಾಕಲಾಗಿದೆ(ಒಟ್ಟು 2,86,034 ಕೋಟಿ ರೂ.). ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ 29,397 ಕೋಟಿ ರೂ.ಗಳ 72 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 2,99,052 ಕೋಟಿ ರೂ.ಗಳ 24 ಯೋಜನೆಗಳ ಒಡಂಬಡಿಕೆಗೆ ಸಹಿ ಹಾಕಲಾಗಿದೆ(ಒಟ್ಟು 3,28,449 ಕೋಟಿ ರೂ.) ಎಂದು ಅವರು ತಿಳಿಸಿದರು.

ಉತ್ಪಾದನಾ-ಸನ್‍ರೈಸ್ ವಲಯದಲ್ಲಿ 27,384 ಕೋಟಿ ರೂ.ಗಳ 44 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 46,900 ಕೋಟಿ ರೂ.ಗಳ 9 ಯೋಜನೆಗಳ ಒಡಂಬಡಿಕೆಗೆ ಸಹಿ ಹಾಕಲಾಗಿದೆ(ಒಟ್ಟು 74,284 ಕೋಟಿ ರೂ.). ಮೂಲಸೌಕರ್ಯ ಹಾಗೂ ಇಂಡಸ್ಟ್ರೀಯಲ್ ಲಾಜಿಸ್ಟಿಕ್ ಪಾಕ್ಸ್‍ಗಳಿಗೆ ಸಂಬಂಧಿಸಿದಂತೆ 18,834 ಕೋಟಿ ರೂ.ಗಳ 57 ಯೋಜನೆಗಳಿಗೆ ಅನುಮೋದನೆ ನಿಡಲಾಗಿದೆ. 53,350 ಕೋಟಿ ರೂ.ಗಳ 12 ಯೋಜನೆಗಳ ಒಡಂಬಡಿಕೆಗೆ ಸಹಿ ಹಾಕಲಾಗಿದೆ(ಒಟ್ಟು 72,184 ಕೋಟಿ ರೂ.) ಎಂದು ಮುರುಗೇಶ್ ನಿರಾಣಿ ಹೇಳಿದರು.

ಕಬ್ಬಿಣ, ಅದಿರು, ಗಣಿ ಹಾಗೂ ಸಿಮೇಂಟ್‍ಗೆ ಸಂಬಂಧಿಸಿದಂತೆ 25,817 ಕೋಟಿ ರೂ.ಗಳ 20 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 10,458 ಕೋಟಿ ರೂ.ಗಳ ಆರು ಯೋಜನೆಗಳ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ(ಒಟ್ಟು 36,275 ಕೋಟಿ ರೂ.). ಸಕ್ಕರೆ, ಎಫ್‍ಎಂಸಿಜಿ, ಜವಳಿ ಹಾಗೂ ಇತರೆ ವಲಯಗಳಿಗೆ ಸಂಬಂಧಿಸಿದಂತೆ 24,969 ಕೋಟಿ ರೂ.ಗಳ 410 ಯೋಜನೆಗಳಿಗೆ ಅನುಮೋದನೆ ನಿಡಲಾಗಿದೆ. 2,589 ಕೋಟಿ ರೂ.ಗಳ ಎರಡು ಯೋಜನೆಗಳ ಒಡಂಬಡಿಕೆಗೆ ಸಹಿ ಹಾಕಲಾಗಿದೆ(ಒಟ್ಟು 27,558 ಕೋಟಿ ರೂ.) ಎಂದು ಅವರು ತಿಳಿಸಿದರು.

ಒಟ್ಟಾರೆ ರಾಜ್ಯ ಸರಕಾರವು ಪ್ರಸಕ್ತ ಸಾಲಿನ ಜನವರಿಯಿಂದ ಜಾಗತಿಕ ಹೂಡಿಕೆದಾರರ ಸಮಾವೇಶದವರೆಗೆ 2,83,415 ಕೋಟಿ ರೂ.ಗಳ 608 ಯೋಜನೆಗಳಿಗೆ ಅನುಮೋದನೆ ನೀಡಿದೆ. 5,41,369 ಕೋಟಿ ರೂ.ಗಳ 57 ಯೋಜನೆಗಳ ಒಡಂಬಡಿಕೆಗೆ ಸಹಿ ಹಾಕಿದೆ. ಹೂಡಿಕೆದಾರರ ಸಮಾವೇಶದಲ್ಲಿ 1.57 ಲಕ್ಷ ಕೋಟಿ ರೂ.ಗಳ ಎರಡು ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಮುರುಗೇಶ್ ನಿರಾಣಿ ವಿವರಿಸಿದರು.

ಉಕ್ರೇನ್-ರಷ್ಯಾ ಯುದ್ಧ ಪರಿಣಾಮ: ಹೈಡ್ರೋಜನ್ ಹಾಗೂ ಉಪ ಉತ್ಪನ್ನಗಳ ಕ್ಷೇತ್ರದಲ್ಲಿ 1.57 ಲಕ್ಷ ಕೋಟಿ ಮೊತ್ತದ 5 ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಉಕ್ರೇನ್ ಹಾಗೂ ರಷ್ಯಾ ಯುದ್ಧದ ಪರಿಣಾಮ ಉದ್ಯಮಿಗಳು ಹಸಿರು ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಹೆಚ್ಚು ಆಸಕ್ತಿ ತೋರಿದ್ದಾರೆ ಎಂದು ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ತಿಳಿಸಿದರು. ವಾಣಿಜ್ಯ ಮತ್ತು ಕೈಗರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಉಪಸ್ಥಿತರಿದ್ದರು.

Similar News