ಜಾಗತಿಕ ತಾಪಮಾನ: ನಮ್ಮ ಅಂಗಳದಲ್ಲೇ ಎರಗುತ್ತಿದೆ ಅಪಾಯ!

Update: 2022-11-09 04:35 GMT

ಕೈಗಾರಿಕೀಕೃತ ಉತ್ತರದ ದೇಶಗಳು ತಾಪಮಾನದ ತೀವ್ರ ಏರಿಕೆಯ ಹೊಣೆ ಹೊರಬೇಕು ಮತ್ತು ಜಾಗತಿಕ ದಕ್ಷಿಣದಲ್ಲಿ ಆಗುತ್ತಿರುವ ಹಾನಿಯ ಪರಿಹಾರ ಭರಿಸಬೇಕು ಎಂಬ ಒತ್ತಾಯಗಳೂ ಕೇಳಿಬರತೊಡಗಿವೆ. ಬಾಂಗ್ಲಾದೇಶ, ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರವಾಹದಂತಹ ಹವಾಮಾನ ವೈಪರೀತ್ಯಗಳು ಹೆಚ್ಚುತ್ತಿರುವುದು ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮವೇ ಆಗಿದ್ದು, ದಕ್ಷಿಣ ಏಶ್ಯವು ಖಂಡಿತವಾಗಿಯೂ ದುರ್ಬಲವಾಗಿದೆ ಎಂಬುದನ್ನೂ ತಜ್ಞರು ಒತ್ತಿಹೇಳುತ್ತಿದ್ದಾರೆ. 

ಏರುತ್ತಲೇ ಇರುವ ಜಾಗತಿಕ ತಾಪಮಾನ ಇತ್ತೀಚಿನ ದಿನಗಳ ಅತ್ಯಂತ ಕಳವಳಕಾರಿ ಸಂಗತಿಗಳಲ್ಲೊಂದಾಗಿದೆ. 2015ರಿಂದ ಈವರೆಗಿನ 8 ವರ್ಷಗಳು ಅತ್ಯಂತ ತಾಪಮಾನದ ವರ್ಷಗಳಾಗಿ ದಾಖಲಾಗಿವೆ. 2022ರಲ್ಲಿ ಜಾಗತಿಕ ಕನಿಷ್ಠ ತಾಪಮಾನ ಕೈಗಾರಿಕಾ ಪೂರ್ವ ಕಾಲದ (1850-1900) ಸರಾಸರಿ ತಾಪಮಾನಕ್ಕಿಂತ 1.15 ಡಿಗ್ರಿ ಸೆಲ್ಸಿಯಸ್ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಜಾಗತಿಕ ತಾಪಮಾನ ಸಂಸ್ಥೆ (ಡಬ್ಲ್ಯುಎಂಒ) ಬಿಡುಗಡೆ ಮಾಡಿರುವ ವರದಿಯು, 2022 ಕೂಡ ತೀವ್ರ ತಾಪಮಾನದ ವರ್ಷವಾಗಿ ದಾಖಲಾಗಲಿರುವುದನ್ನು ಸೂಚಿಸಿದೆ.


‘ಡಬ್ಲ್ಯುಎಂಒ ಜಾಗತಿಕ ಹವಾಮಾನದ ತಾತ್ಕಾಲಿಕ ಸ್ಥಿತಿ 2022 ಎಂಬ ಹೆಸರಿನ ಈ ವರದಿಯನ್ನು ಈಜಿಪ್ಟ್ನಲ್ಲಿ ಆರಂಭವಾಗಿರುವ 27ನೇ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ (COP 27) ಭಾನುವಾರ ಬಿಡುಗಡೆಗೊಳಿಸಲಾಗಿದೆ. 1993ರಿಂದ ಸಮುದ್ರ ಮಟ್ಟದಲ್ಲಿನ ಏರಿಕೆ ದ್ವಿಗುಣಗೊಂಡಿದೆ ಎಂಬುದು ವರದಿಯಲ್ಲಿನ ಮತ್ತೊಂದು ಮುಖ್ಯ ಅಂಶ. 2020ರ ಜನವರಿಯಿಂದ 10 ಮಿ.ಮೀ. ಏರಿಕೆಯಾಗಿದ್ದುದು ಈ ವರ್ಷ ದಾಖಲೆ ಏರಿಕೆ ಕಾಣುತ್ತದೆ ಎಂದು ಹೇಳುತ್ತಿದೆ ವರದಿ. ಸುಮಾರು 30 ವರ್ಷಗಳ ಹಿಂದೆ ಉಪಗ್ರಹ ಮಾಪನಗಳು ಪ್ರಾರಂಭವಾದಾಗಿನಿಂದ ಕಳೆದ ಎರಡೂವರೆ ವರ್ಷಗಳಲ್ಲಿ ಸಮುದ್ರ ಮಟ್ಟದಲ್ಲಿನ ಏರಿಕೆಯು ಒಟ್ಟಾರೆ ಏರಿಕೆಯ ಶೇಕಡಾ 10ರಷ್ಟಿದೆ ಎಂಬುದನ್ನೂ ವರದಿ ದಾಖಲಿಸಿದೆ. ತಾತ್ಕಾಲಿಕ ಸ್ಥಿತಿ ಕುರಿತ ವರದಿಯಲ್ಲಿ ಬಳಸಲಾಗಿರುವ ಅಂಕಿಅಂಶಗಳು ಈ ವರ್ಷದ ಸೆಪ್ಟಂಬರ್ ಕೊನೆಯವರೆಗಿನದ್ದಾಗಿದ್ದು, ಮುಂದಿನ ಎಪ್ರಿಲ್‌ನಲ್ಲಿ ವರದಿಯ ಅಂತಿಮ ಆವೃತ್ತಿ ಹೊರಬರಲಿದೆ.


ಭಾರತ ಮತ್ತು ಪಾಕಿಸ್ತಾನದಲ್ಲಿ ಈ ಬಾರಿ ಮಾನ್ಸೂನ್ ಪೂರ್ವ ಅವಧಿಯು ತುಂಬಾ ತಾಪಮಾನದಿಂದ ಕೂಡಿತ್ತು. ಪಾಕಿಸ್ತಾನದಲ್ಲಂತೂ ಈ ವರ್ಷದ ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ದಾಖಲೆ ತಾಪಮಾನವಿತ್ತು. ಇದು ಬೆಳೆ ಇಳುವರಿ ಕಡಿಮೆಯಾಗುವುದಕ್ಕೂ ಕಾರಣವಾಯಿತು. ಇದರ ಮುಂದುವರಿಕೆಯಾಗಿ ಗೋಧಿ ರಫ್ತು ನಿರ್ಬಂಧ ಮತ್ತು ಭಾರತದಲ್ಲಿ ಅಕ್ಕಿ ರಫ್ತಿನ ಮೇಲೆ ನಿಯಂತ್ರಣ ಹೇರಲಾಗಿರುವುದು ಅಂತರ್‌ರಾಷ್ಟ್ರೀಯ ಆಹಾರ ಮಾರುಕಟ್ಟೆಯಲ್ಲಿನ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ ಮಾತ್ರವಲ್ಲ, ಈಗಾಗಲೇ ಪ್ರಮುಖ ಆಹಾರಗಳ ಕೊರತೆಯಿಂದ ಕಂಗೆಟ್ಟಿರುವ ದೇಶಗಳಲ್ಲಿಯೂ ಭೀತಿ ಮೂಡಿಸಿದೆ. 


ಮಾರ್ಚ್, ಎಪ್ರಿಲ್‌ನಲ್ಲಿ ಎಷ್ಟು ತಾಪಮಾನವಿತ್ತೋ ಅಷ್ಟೇ ಭಯಂಕರ ಪ್ರಮಾಣದ ಮಳೆ ಪಾಕಿಸ್ತಾನದಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿಯಿತು. ಪ್ರವಾಹ ಪರಿಸ್ಥಿತಿ ತಲೆದೋರಿ ಕನಿಷ್ಠ 1,700 ಮಂದಿ ಬಲಿಯಾದರು. 33 ದಶಲಕ್ಷ ಮಂದಿ ತೊಂದರೆಗೊಳಗಾದರು ಮತ್ತು 79 ಲಕ್ಷ ಮಂದಿ ಸ್ಥಳಾಂತರಗೊಳ್ಳುವಂತಾಯಿತು. 
ಭಾರತದಲ್ಲಿಯೂ ಮಾನ್ಸೂನ್ ಹೊತ್ತಿನ ಬೇರೆ ಬೇರೆ ಹಂತಗಳಲ್ಲಿ ಪ್ರವಾಹ ಉಂಟಾಯಿತು. ಅದರಲ್ಲೂ ಹೆಚ್ಚಾಗಿ ಜೂನ್‌ನಲ್ಲಿ ಈಶಾನ್ಯ ಭಾಗದಲ್ಲಿ ಪರಿಸ್ಥಿತಿ ವಿಕೋಪ ಮುಟ್ಟಿತು. ಪ್ರವಾಹ ಮತ್ತು ಭೂಕುಸಿತದಿಂದಾಗಿ ಕನಿಷ್ಠ 700 ಮಂದಿ ಸಾವಿಗೀಡಾದರು. ಇನ್ನೂ 900 ಮಂದಿ ಸಿಡಿಲಿಗೆ ಬಲಿಯಾದರು. ಪ್ರವಾಹದಿಂದಾಗಿ ಅಸ್ಸಾಮ್‌ನಲ್ಲಿ ಸ್ಥಳಾಂತರಗೊಂಡವರು 6,63,000 ಮಂದಿ. 


ಇವೆಲ್ಲ ಅಂಶಗಳನ್ನು ಗಮನಿಸಿರುವ ಡಬ್ಲ್ಯುಎಂಒ, ತಾಪಮಾನದ ತೀವ್ರ ಏರಿಕೆಯ ಕೆಟ್ಟ ಪರಿಣಾಮಗಳನ್ನು ಎದುರಿಸುತ್ತಿದ್ದೇವೆ ಎಂಬುದನ್ನೂ, ವಾತಾವರಣದಲ್ಲಿ ಅತಿ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಸೇರಿರುವುದನ್ನೂ ವರದಿಯಲ್ಲಿ ವಿವರಿಸಿದೆ. ಹಿಮನದಿಗಳ ಕರಗುವಿಕೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿರುವ ಅದು, ಈ ಕರಗುವಿಕೆ ನೂರಾರು ಅಥವಾ ಸಾವಿರಾರು ವರ್ಷಗಳವರೆಗೆ ಮುಂದುವರಿಯಲಿದೆ ಎಂದಿದೆ. ಕಳೆದ ಎರಡು ದಶಕಗಳಲ್ಲಿ ತಾಪಮಾನದ ಪ್ರಮಾಣವು ವಿಶೇಷವಾಗಿ ಹೆಚ್ಚಾಗಿದೆ.

ಇದು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ ಎಂಬುದು ಆತಂಕದ ಸಂಗತಿ. ಯುರೋಪಿಯನ್ ಆಲ್ಪ್ಸ್ನಲ್ಲಿಯೂ 2022ರಲ್ಲಿ ಹಿಮನದಿಗಳು ಹಳೆಯ ದಾಖಲೆಗಳನ್ನೆಲ್ಲ ಮೀರಿ ಕರಗಿವೆ. ಇದು ಹಿಂದಿನ ದಾಖಲೆಯ ವರ್ಷ 2003ಕ್ಕಿಂತ ಗಣನೀಯವಾಗಿ ಹೆಚ್ಚು. ಸ್ವಿಟ್ಸರ್ಲೆಂಡ್‌ನಲ್ಲಿ, ಆರಂಭಿಕ ಮಾಪನದ ಪ್ರಕಾರ, 2021 ಮತ್ತು 2022ರ ನಡುವೆ ಹಿಮನದಿಯ ಮಂಜುಗಡ್ಡೆಯು ಬಹುದೊಡ್ಡ ಪ್ರಮಾಣದಲ್ಲಿ ಅಂದರೆ ಮೂರನೇ ಒಂದಕ್ಕಿಂತ ಹೆಚ್ಚು ನಷ್ಟವಾಗಿದೆ.


ತಾಪಮಾನ ಏರಿಕೆ ಪರಿಣಾಮಗಳು ಮುಂದುವರಿಯುತ್ತಿರುವುದನ್ನು ಮತ್ತು ಹಿಂದಿಗಿಂತಲೂ ಹೆಚ್ಚುತ್ತಿರುವುದನ್ನು ಈ ವರದಿ ಸ್ಪಷ್ಟವಾಗಿ ನಿರೂಪಿಸುತ್ತಿದೆ ಎಂದು ಪರಿಣತರು ಅಭಿಪ್ರಾಯಪಡುತ್ತಿದ್ದಾರೆ. ಮೊದಲು ಅತಿ ತಾಪಮಾನ, ಆನಂತರ ಅತಿವೃಷ್ಟಿ ಮತ್ತು ಪ್ರವಾಹ ಹೀಗೆ ಹವಾಮಾನ ವೈಪರೀತ್ಯಗಳು ಒಂದು ಅನುಕ್ರಮದಲ್ಲಿ ಘಟಿಸುತ್ತಿರುವುದನ್ನು ಪಾಕಿಸ್ತಾನದಲ್ಲಿನ ಪ್ರಕೃತಿ ವಿಕೋಪದಂಥವುಗಳ ಮೂಲಕ ಗಮನಿಸಬಹುದು. ತಾಪಮಾನ ಹೆಚ್ಚಿದಂತೆ ಅದರ ವೈಪರೀತ್ಯಗಳೂ ಹೆಚ್ಚುತ್ತವೆ. ಆದರೆ ಅವುಗಳ ಕೊನೆಯಿರದ ತೀವ್ರತೆಗೆ ನಾವು ಹೊಂದಿಕೊಳ್ಳಬಲ್ಲೆವೆಂಬುದು ಮಾತ್ರ ಸುಳ್ಳು.

ತುರ್ತಾಗಿ ಇದರ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗಿದೆ ಎಂಬ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ ತಜ್ಞರು. ಭೂಮಿಯು ಹಿಂದೆಂದೂ ಇರದ ಮಟ್ಟದಲ್ಲಿ ತಾಪದ ಏರಿಕೆಗೆ ಒಳಗಾಗಿದ್ದು, ಜನರು ಇದರ ತೀವ್ರ ಪರಿಣಾಮಗಳನ್ನು ಅನುಭವಿಸಬೇಕಾಗಿದೆ. ಕೈಗಾರಿಕೀಕೃತ ಉತ್ತರದ ದೇಶಗಳು ಇದರ ಹೊಣೆ ಹೊರಲೇಬೇಕು ಮತ್ತು ಜಾಗತಿಕ ದಕ್ಷಿಣದಲ್ಲಿ ಆಗುತ್ತಿರುವ ಹಾನಿಯ ಪರಿಹಾರ ಭರಿಸಬೇಕು ಎಂಬ ಒತ್ತಾಯಗಳೂ ಕೇಳಿಬರತೊಡಗಿವೆ. 


ಈ ತಿಂಗಳ 18ರವರೆಗೆ ನಡೆಯಲಿರುವ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ದೇಶಗಳು ವಹಿಸಿಕೊಳ್ಳಬೇಕಾದ ಜವಾಬ್ದಾರಿ ಮತ್ತು ತಾಪಮಾನ ಏರಿಕೆಯ ಮಟ್ಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಮೂಹಿಕ ಕ್ರಮವೊಂದರ ಕುರಿತ ನಿಲುವು ನಿರ್ಧಾರವಾಗಲಿದೆ ಎಂಬ ನಿರೀಕ್ಷೆಯಿದೆ. ಬಾಂಗ್ಲಾದೇಶ, ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರವಾಹದಂತಹ ಹವಾಮಾನ ಕಾರಣದ ವಿಪರೀತಗಳ ಹೆಚ್ಚಳವಾಗುತ್ತಿರುವುದು ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮವೇ ಆಗಿದ್ದು, ದಕ್ಷಿಣ ಏಶ್ಯವು ಖಂಡಿತವಾಗಿಯೂ ದುರ್ಬಲವಾಗಿದೆ ಎಂಬುದನ್ನೂ ತಜ್ಞರು ಒತ್ತಿಹೇಳುತ್ತಿದ್ದಾರೆ. ಇದೆಲ್ಲದಕ್ಕೂ ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸಿರುವ 200 ದೇಶಗಳ ಪ್ರತಿನಿಧಿಗಳ ಬಳಿ ಏನು ಉತ್ತರವಿದೆಯೋ, ಚರ್ಚೆಯ ಫಲಿತಾಂಶವು ಏನಿರಲಿದೆಯೋ ನೋಡಬೇಕಿದೆ.

Similar News