×
Ad

ಸರಕಾರಕ್ಕೆ ಜನ ಬೇಕಿದ್ದರೆ ಪ್ರಧಾನಿ ಕಾರ್ಯಕ್ರಮಕ್ಕೆ ನಮ್ಮ ಕಾರ್ಯಕರ್ತರನ್ನು ಕಳುಹಿಸುತ್ತೇವೆ: ಡಿ.ಕೆ.ಶಿವಕುಮಾರ್

Update: 2022-11-10 17:01 IST

ಬೆಂಗಳೂರು, ನ.10:  ತಮ್ಮ ಕಾರ್ಯಕ್ರಮಕ್ಕೆ ಸರಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಕರೆ ತರಲು ಆದೇಶ ಹೊರಡಿಸಿದ್ದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಯನ್ನು ಕೇಳಬೇಕು. ಈ ರೀತಿ ಮಾಡಿರುವುದು ನಾಚಿಕೆಗೇಡಿನ ವಿಚಾರವಲ್ಲವೇ? ಇದು ಬಿಜೆಪಿಯ ಜನಶಕ್ತಿ ಕುಸಿದಿರುವುದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D. K. Shivakumar) ಹೇಳಿದರು.

ಗುರುವಾರ ನಗರದ ಚಿತ್ರಕಲಾ ಪರಿಷತ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಕ್ಕೆ ಜನ ಬೇಕಿದ್ದರೆ ನಾವು ನಮ್ಮ ಪಕ್ಷದ ಕಾರ್ಯಕರ್ತರನ್ನು ಕಳುಹಿಸುತ್ತೇವೆ. ಆದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರಕಾರದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಬಾರದು ಎಂದರು.

ಜನ ಸಾಯುವಾಗ ಸರಕಾರಕ್ಕೆ ರಸ್ತೆ ಗುಂಡಿಗಳು ಕಾಣಲಿಲ್ಲ. ವಿರೋಧ ಪಕ್ಷಗಳು ಈ ಗುಂಡಿ ಮುಚ್ಚಲು ಹೋಮ, ಪೂಜೆ ಮಾಡಿದರು. ಸರಕಾರ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ, ಈಗ ಮುಚ್ಚುತ್ತಿದ್ದಾರೆ. ಪ್ರಧಾನಿ ಕಳೆದ ಬಾರಿ ಬಂದಾಗ ಡಾಂಬರು ಹಾಕಿದ ರಸ್ತೆಗಳು, ಅವರು ದಿಲ್ಲಿಗೆ ಹೋಗುತ್ತಿದ್ದಂತೆ ಕಿತ್ತು ಬಂದವು ಎಂದು ಶಿವಕುಮಾರ್ ಹೇಳಿದರು.

ಬಿಜೆಪಿ ಕೆಂಪೇಗೌಡರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಸರಕಾರದ ಹಣದಲ್ಲಿ ಪ್ರತಿಮೆ ಮಾಡಿರುವುದು ದೊಡ್ಡ ಅಪರಾಧ. ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದವರಿಗೆ ನಾವು 2 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಪ್ರತಿ ಎಕರೆಗೆ 6 ಲಕ್ಷದಂತೆ ಹಾಗೂ ಹಣ ನೀಡಿದ್ದೇವೆ. ಅವರಿಗೆ ಹೇಳಿದ್ದರೆ ಅವರೇ ಪ್ರತಿಮೆ ನಿರ್ಮಾಣ ಮಾಡುತ್ತಿದ್ದರು'' ಎಂದರು.

''ಆದರೆ ಸರಕಾರ ದುಡ್ಡು ಹಾಕಿದ್ದು ಯಾಕೆ? ಈ ವಿಚಾರವಾಗಿ ನಾನು ಶಂಕುಸ್ಥಾಪನೆ ದಿನವೇ ಹೇಳಿದ್ದೆ. ವಿಮಾನ ನಿಲ್ದಾಣದವರು ಇದರಿಂದ ಸಂಪಾದನೆ ಮಾಡುತ್ತಿಲ್ಲವೇ, ಧರ್ಮಕ್ಕೆ ಮಾಡುತ್ತಿದ್ದರೇ? ಇನ್ನು 2 ಸಾವಿರಕ್ಕೂ ಹೆಚ್ಚು ಎಕರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ನೀಡಿದ್ದೇವೆ. ಈ ಬಗ್ಗೆ ಮುಖ್ಯಕಾರ್ಯದರ್ಶಿ ಯಾಕೆ ಮೌನವಾಗಿದ್ದಾರೆ? ರಾಜ್ಯ ಸರಕಾರ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರಾಗಿದೆ. ಪ್ರತಿಮೆ ಲೋಕಾರ್ಪಣೆಯನ್ನು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ'' ಎಂದು ಶಿವಕುಮಾರ್ ಟೀಕಿಸಿದರು.

ಸಂಸತ್ತಿನಲ್ಲೂ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಹಳ ಸಂತೋಷ, ಅಲ್ಲಿಯೂ ಪ್ರತಿಮೆ ನಿರ್ಮಾಣ ಮಾಡಲಿ, ವಿಧಾನಸೌಧ ಅವರಣದಲ್ಲೂ ಮಾಡಲಿ’ ಎಂದರು.

ಸಿದ್ದರಾಮಯ್ಯ ಬಗ್ಗೆ ಮುಕುಡಪ್ಪ ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಸಿದ್ದರಾಮಯ್ಯ ಬಗ್ಗೆ ಬೇರೆಯವರು ಏನು ಹೇಳಿದ್ದಾರೆ ಗೊತ್ತಿಲ್ಲ. ಇದು ಖಾಸಗಿಯಾಗಿ ಮಾತನಾಡಿರುವ ವಿಚಾರ. ಈ ಬಗ್ಗೆ ತಿಳಿದು ಮಾತನಾಡುತ್ತೇನೆ. ನಮ್ಮ ನಾಯಕರ ಘನತೆ ಹಾಳು ಮಾಡಲು ಷಡ್ಯಂತ್ರ ನಡೆಯುತ್ತಿದೆ' ಎಂದರು.

Similar News