×
Ad

'ಯೋಜನೆಗಳು ಕಾಲು ಮುರಿದುಕೊಂಡು ಬಿದ್ದಲ್ಲಿಯೇ ಇವೆ': ಪ್ರಧಾನಿ ಮೋದಿಗೆ 10 ಪ್ರಶ್ನೆ ಕೇಳಿದ ಸಿದ್ದರಾಮಯ್ಯ

Update: 2022-11-10 20:45 IST

ಬೆಂಗಳೂರು, ನ.10: ರಾಜಧಾನಿ ಬೆಂಗಳೂರಿಗೆ ಇಂದು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (siddaramiha) 10 ಪ್ರಶ್ನೆಗಳನ್ನು ಕೇಳಿ, ಉತ್ತರಿಸುವಂತೆ ಆಗ್ರಹಿಸಿದ್ದಾರೆ.

ಗುರುವಾರ ದೇವನಹಳ್ಳಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಲ್ಕು ವರ್ಷಗಳ ಹಿಂದೆ ನೀವು ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಾಗ ನೀಡಿದ್ದ ಭರವಸೆಗಳು ಏನಾಗಿವೆ ಎಂದು ಕೇಳಿದರು.

ಅದರಲ್ಲೂ,ರಾಜ್ಯ ಸರಕಾರದ ಶೇ.40ರಷ್ಟು ಕಮಿಷನ್ ಭ್ರಷ್ಟಚಾರ ಬಗ್ಗೆ ಅನೇಕ ಪತ್ರಗಳನ್ನು ಬರೆಯಲಾಗಿದೆ. ನಿಮ್ಮದೇ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ ಇದೇ ಕಮಿಷನ್ ಕಾರಣದಿಂದ ಆತ್ಮಹತ್ಯೆಗೆ ಶರಣಾದರು. ಜತೆಗೆ, ಗುತ್ತಿಗೆದಾರ ಬಸವರಾಜು ಎಂಬುವರು ದಯಾ ಮರಣ ಕೋರಿ ಸ್ವತಃ ನಿಮಗೆ ಪತ್ರ ಬರೆದಿದ್ದಾರೆ. ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ ಸರಕಾರದ ಕಿರುಕುಳಗಳನ್ನು ಪ್ರಸ್ತಾಪಿಸಿ ಪತ್ರ ಬರೆದಿದೆ. ಈ ಎಲ್ಲ ಪತ್ರಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಇನ್‍ಸ್ಪೆಕ್ಟರ್ ಹುದ್ದೆಗೆ 60 ಲಕ್ಷದಿಂದ 70 ಲಕ್ಷನೀಡಿದ್ದಾರೆಂದು ಸಚಿವ ಎಂ.ಟಿ.ಬಿ ನಾಗರಾಜ್‍ ಹೇಳಿದ್ದಾರೆ. ಪೊಲೀಸರು ಲಂಚ ತಿಂದು ಕುಳಿತಿದ್ದಾರೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಒಪ್ಪಿಕೊಂಡಿದ್ದಾರೆ. ಪಿಎಸ್ಸೈ ನೇಮಕಾತಿ ಹಗರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳೂ ಸಿಕ್ಕಿ ಬಿದ್ದಿದ್ದಾರೆ.ಸಚಿವ ಎಸ್.ಟಿ.ಸೋಮಶೇಖರ್ ಅವರ ಮೇಲಿನ ಲಂಚ ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.

ಆರೋಗ್ಯ ಸಚಿವ ಸುಧಾಕರ್ ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಸಚಿವರಾದ ಶಿವರಾಂ ಹೆಬ್ಬಾರ್, ಬಿ.ಸಿ.ಪಾಟೀಲ, ಗೋಪಾಲಯ್ಯ, ಬಿ.ಬಸವರಾಜ್, ಶ್ರೀರಾಮುಲು, ಆನಂದ್ ಸಿಂಗ್, ಪ್ರಭು ಚೌಹಾಣ್ ಹೀಗೆ ಸಾಲು ಸಾಲು ಸಚಿವರ ಮೇಲೆ ಲಂಚ, ದುರಾಡಳಿತ, ಅಕ್ರಮಗಳ ಆರೋಪಗಳು ಕೇಳಿ ಬಂದಿವೆ. ಅನೇಕ ಸಚಿವರು ಸಿಡಿ ಪ್ರಕರಣಗಳಲ್ಲಿ ತಡೆಯಾಜ್ಞೆ ಪಡೆದಿದ್ದಾರೆ. 

ಗೋವುಗಳ ಮೇವು ಸರಬರಾಜಿಗೂ ಲಂಚ ಆರೋಪಗಳು ಬಂದರೂ ಮಾಮೂಲಿಯಂತೆ ದಿವ್ಯ ಮೌನಕ್ಕೆ ಜಾರಿದ್ದ ನಿಮಗೆ ಚುನಾವಣೆ ಕಾರಣಕ್ಕೆ ರಾಜ್ಯ ಮತ್ತೆ ಮತ್ತೆ ನೆನಪಾಗುತ್ತಿದೆ. ಇದನ್ನು ನಾವು ಯಾವ ಮಾತುಗಳಲ್ಲಿ ವಿವರಿಸಬೇಕು ಹೇಳಿ ಎಂದು ಪ್ರಧಾನಿಗೆ ಕೇಳಿದರು.

ಇನ್ನೂ, ಸಿಬಿಐ, ಇಡಿ, ಐಟಿ ಮುಂತಾದ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಜನರ ಧ್ವನಿ ಅಡಗಿಸುವ ಯತ್ನ ನಡೆಯುತ್ತಿದೆ. ಆದರೆ, ರಾಜ್ಯ ಸರಕಾರದಲ್ಲಿರುವ ಎಷ್ಟು ಮಂದಿ ಸಚಿವರು ಮತ್ತು ರಾಜ್ಯ ಬಿಜೆಪಿಯಲ್ಲಿರುವ ಎಷ್ಟು ನಾಯಕರುಗಳ ವಿರುದ್ಧ ಈ ತನಿಖಾ ಸಂಸ್ಥೆಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿವೆ ಎಂದು ಪ್ರಶ್ನೆ ಮಾಡಿದರು.

ರಾಜ್ಯದ ಕಾನೂನು ಸುವ್ಯವಸ್ಥೆ, ಆಡಳಿತ ಕುಸಿದಿದ್ದರೆ ರಾಜ್ಯದ ಹಣದುಬ್ಬರ ಶೇ.7.62ಕ್ಕೆ ಏರಿಕೆಯಾಗಿದೆ. ರಾಜ್ಯದ ನಿರುದ್ಯೋಗ ಪ್ರಮಾಣ ಶೇ.38.7ಕ್ಕೆ ಏರಿಕೆಯಾಗಿದೆ. ಕೃಷಿ ವೆಚ್ಚ ರಾಕೆಟ್ ವೇಗದಲ್ಲಿ ಏರುತ್ತಿದೆ. ಈ ವೆಚ್ಚದ ಅರ್ಧದಷ್ಟು ಕೂಡ ಬೆಂಬಲ ಬೆಲೆ ಮೂಲಕ ರೈತರಿಗೆ ಸಿಗುತ್ತಿಲ್ಲ. ಬೆಳೆ ಹಾನಿಗೆ ಪರಿಹಾರ ಸೂಕ್ತವಾಗಿ ಸಿಕ್ಕಿಲ್ಲ. ಬೆಳೆ ಸಾಲಕ್ಕೆ ರೈತರ ಪರದಾಟ ನಿಂತಿಲ್ಲ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ಡಬ್ಬಲ್ ಇಂಜಿನ್ ಸರಕಾರ ಟೋಪಿ ಹಾಕಿದೆ ಎಂದು ಟೀಕಿಸಿದರು.

ಬಿಜೆಪಿ ಸರಕಾರಗಳ ವೈಫಲ್ಯಗಳ ಕುರಿತಂತೆ ನಾವು ಇದುವರೆಗೂ 73 ಪ್ರಶ್ನೆಗಳನ್ನು "ನಿಮ್ಮ ಬಳಿ ಉತ್ತರ ಇದೆಯೇ'' ಎಂದು ಕೇಳಿದ್ದೇವೆ. ಒಂದಕ್ಕೂ ಉತ್ತರಿಸಲು ಸರಕಾರದಿಂದ ಸಾಧ್ಯವಾಗಿಲ್ಲ ಏಕೆ ಎಂದ ಅವರು, ರಾಜ್ಯದ ಆರ್ಥಿಕತೆಗೆ ನೆರವಾಗುವ ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗಳನ್ನು ಜಾರಿ ಮಾಡಲಿಲ್ಲ. ಇವುಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿ ಎನ್ನುವ ಎಂಬ ರೈತರ ಬೇಡಿಕೆಗೆ ನೀವು ಸಾಂಪ್ರದಾಯಿಕ ಮೌನವನ್ನೇ ಏಕೆ ಪಾಲಿಸಿದ್ದೀರಿ ಎಂದು ಹೇಳಿದರು.

ಎಸ್ಸಿ, ಎಸ್ಟಿ ಸಮುದಾಯಗಳ ಮೀಸಲು ಹೆಚ್ಚಳದ ಕುರಿತು ರಾಜ್ಯದಲ್ಲಿ ಎಲ್ಲ ಪಕ್ಷಗಳೂ ಸೇರಿ ಸರ್ವಾನುಮತದ ತೀರ್ಮಾನ ತೆಗೆದುಕೊಂಡಿದ್ದೇವೆ. ರಾಜ್ಯ ಸರಕಾರ ಕೇಂದ್ರಕ್ಕೆ ಸೂಕ್ತ ಕ್ರಮಕ್ಕಾಗಿ ಕಳಿಸಿದೆ. ಇದನ್ನು ಸಂವಿಧಾನದ 9ನೆ ಶೆಡ್ಯೂಲಿಗೆ ಕೂಡಲೆ ಸೇರಿಸಬೇಕು. ಆದರೆ ಈ ಕುರಿತು ಕೇಂದ್ರದ ನಿಲುವು ಏನು? ನಮ್ಮ ಸರಕಾರವಿದ್ದಾಗ 2013 ರಿಂದ 2018ರವರೆಗೆ ಹಲವಾರು ಜಾತಿಗಳನ್ನು ಎಸ್ಸಿ, ಎಸ್ಟಿ ಪಟ್ಟಿಗೆ ಸೇರಿಸಬೇಕೆಂದು ಶಿಫಾರಸು ಮಾಡಿದ್ದೆವು. ಅವುಗಳ ಕುರಿತು ನಿಮ್ಮ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಪ್ರಮುಖವಾಗಿ ತುಮಕೂರು-ದಾವಣಗೆರೆ ಮುಂತಾದ ರೈಲ್ವೆ ಯೋಜನೆಗಳಿಗೆ ಅಗತ್ಯವಾದಷ್ಟು ಹಣ ಬಂದಿಲ್ಲ. ಯೋಜನೆಗಳು ಕಾಲು ಮುರಿದುಕೊಂಡು ಬಿದ್ದಲ್ಲಿಯೆ ಇವೆ. ರಾಯಚೂರಿನ ಜನತೆಯ ಏಮ್ಸ್ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ರಾಜ್ಯದ ಪಾಲಿಗೆ ಒದಗಿ ಬಂದಿದ್ದ ಎರಡು ಸಿಆರ್‍ಪಿಎಫ್ ಬೆಟಾಲಿಯನ್‍ಗಳನ್ನು ಕಿತ್ತು ಉತ್ತರಪ್ರದೇಶಕ್ಕೆ ವರ್ಗಾಯಿಸಲಾಯಿತು.

ಕೇಂದ್ರದ ಆಯೋಗಗಳು ನಡೆಸುವ ಪ್ರವೇಶ ಪರೀಕ್ಷೆಯಿಂದ ಕನ್ನಡವನ್ನು ಕಿಕ್‍ಔಟ್ ಮಾಡಿ ಕನ್ನಡಿಗರ ಪಾಲಿನ ಉದ್ಯೋಗವನ್ನು ಕಿತ್ತುಕೊಳ್ಳಲಾಗಿದೆ. ಇದಕ್ಕೆ ನಿಮ್ಮ ಉತ್ತರವೇನು ಎಂದು ಕೇಳಿದರು.

''ವಿಗ್ರಹಗಳಿಂದ ವಿಚಾರ ಕೊಲ್ಲುವ ಪ್ರಯತ್ನ'': 

''ಮಹರ್ಷಿ ವಾಲ್ಮೀಕಿ, ನಾಡಪ್ರಭು ಕೆಂಪೇಗೌಡರು, ದಾಸ ಶ್ರೇಷ್ಠರಾದ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ರಾಜ್ಯಕ್ಕೆ ಬರುತ್ತಿದ್ದೀರಿ. ಅವರೆಲ್ಲಾ ಕನ್ನಡ ಮಣ್ಣಿನ ಸಾಂಸ್ಕೃತಿಕ ನಾಯಕರು. ವಿಗ್ರಹಗಳಿಗೆ ಮಾಲಾರ್ಪಣೆ ಮಾಡುತ್ತಾ ಅವರ ವಿಚಾರಗಳನ್ನು ಕೊಲ್ಲುವ ಸಂಪ್ರದಾಯವನ್ನು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಬೆದರಿಕೆ ಮೂಲಕ ಆಚರಣೆಗೆ ತರುತ್ತಿವೆ.  ನೀವೀಗ ಮಾಲಾರ್ಪಣೆ ಮಾಡುವ ಎಲ್ಲ ಮಹನೀಯರ ಬಗ್ಗೆ ನಿಜವಾದ ಗೌರವ, ಶ್ರದ್ಧೆ ಇದ್ದರೆ ಇವರನ್ನೆಲ್ಲಾ ರಾಷ್ಟ್ರೀಯ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಿ, ಅವರ ಪ್ರತಿಮೆಗಳನ್ನು ಪಾರ್ಲಿಮೆಂಟಿನ ಮುಂದೆ ಸ್ಥಾಪಿಸುವ ಭರವಸೆ ನೀಡಿ. ಜಗತ್ತಿಗೆ ರಾಮಾಯಣದಂಥ ಶ್ರೇಷ್ಠ ಗ್ರಂಥವನ್ನು ನೀಡಿ ಶ್ರೀರಾಮನಂತಹ ವ್ಯಕ್ತಿತ್ವವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರ ಮಂದಿರವನ್ನು ಅಯೋಧ್ಯೆಯಲ್ಲಿ ಸ್ಥಾಪಿಸಿ''.

-ಸಿದ್ದರಾಮಯ್ಯ, ವಿಪಕ್ಷ ನಾಯಕ, ವಿಧಾನಸಭೆ

Similar News