ಬೆಂಗಳೂರಿನಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗುವ ಸಾಧ್ಯತೆ ಇದೆ: ಸಿಎಂ ಬೊಮ್ಮಾಯಿ‌

''ಎಲ್ಲರಿಗೂ ವಸತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧ''

Update: 2022-11-13 16:44 GMT

ಬೆಂಗಳೂರು: 'ರಾಜ್ಯದಲ್ಲಿ ಎಲ್ಲರಿಗೂ ವಸತಿ ಕಲ್ಪಿಸಲು ಬಹಳ ದೊಡ್ಡ ಪ್ರಮಾಣದಲ್ಲಿ ನಾವು ಕ್ರಮ ತೆಗೆದುಕೊಂಡಿದ್ದೇವೆ. 18 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ನಾನು ಐದು ಲಕ್ಷ‌‌ಮನೆ ಮಂಜೂರು ಮಾಡಿದ್ದೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ. 

ಇಂದು ವಸತಿ ಇಲಾಖೆಯ ಕರ್ನಾಟಕ ಗೃಹ ಮಂಡಳಿ ವತಿಯಿಂದ ಕೆಂಗೇರಿ ವಡಗೇರಹಳ್ಳಿಯಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.

ಹಿಂದಿನ ಕಾಂಗ್ರೆಸ್ ಸರ್ಕಾರ 2018 ರಲ್ಲಿ ಸರ್ಕಾರದ ಕೊನೆಯ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಘೋಷಣೆ ಮಾಡಿತ್ತು.‌ 15 ಲಕ್ಷ ಮನೆ  ಘೋಷಿಸಿ, 2.500 ಕೋಟಿ ರೂ ಇಟ್ಟಿತ್ತು. ಅದರಲ್ಲಿ 1000 ಕೋಟಿ ಖರ್ಚು ಮಾಡಿದ್ದೇನೆಂದು ಘೋಷಣೆ ಮಾಡಿತ್ತು. ಅಲ್ಲದೆ ಪ್ರಧಾನಮಂತ್ರಿ ಯೋಜನೆಯನ್ನೂ ಜನರಿಂದ ದೂರ ಇಟ್ಟಿತ್ತು. ಸ್ವಪ್ರತಿಷ್ಟೆಗಾಗಿ ಒಂದು ಸರ್ಕಾರ ಜನರ ಹಿತ ಕಾಯದೇ ಅನ್ಯಾಯ ಮಾಡಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ನಮ್ಮ ಸರ್ಕಾರ ಬಂದ ಮೇಲೆ 18 ಲಕ್ಷ ಮನೆ ನಿರ್ಮಾಣ ಕಾರ್ಯ ನಡೆದಿದ್ದು, ನಮ್ಮ ಸರ್ಕಾರ ಬಂದ ಮೇಲೆ 5 ಲಕ್ಷ ಮನೆಗಳನ್ನು ನಾನು ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ಸ್ಲಂ ಬೋರ್ಡ್ ನಿಂದ 80 ಸಾವಿರ ಮನೆ ಮಂಜೂರು ಮಾಡಲಾಗಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ 1 ಲಕ್ಷ ಮನೆ‌ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ಈಗಾಗಲೇ 40 ಸಾವಿರ ಮನೆಗಳ ಹಂಚಿಕೆ  ಮಾಡಿ ಚಾಲನೆ ನೀಡಲಾಗಿದೆ. ಇದು ಕ್ರಿಯಾಶೀಲ ಸಚಿವ ಸೋಮಣ್ಣ ಅವರಿಂದ ಸಾಧ್ಯವಾಗಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಕ್ರಿಯಾಶೀಲ ಸಚಿವರಾಗಿರುವ ಎಸ್.‌ಟಿ ಸೋಮಶೇಖರ್ ಬಹಳ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ 8,000 ಕೋಟಿ ನೀಡಲಾಗಿದ್ದು, ಅದರ ಕೆಲಸ ನಡೆಯುತ್ತಿದೆ. ಮಳೆಯಿಂದ ಸ್ವಲ್ಪ ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ. ಮಳೆ ನಿಂತರೆ ಎಲ್ಲ ಕೆಲಸಗಳು ವೇಗವಾಗಿ ನಡೆಯುತ್ತವೆ.  ಒಂದು ತಿಂಗಳಲ್ಲಿ ರಸ್ತೆ ದುರಸ್ತಿ ಕೆಲಸ ವೇಗವಾಗಿ ನಡೆಯುತ್ತದೆ ಎಂದು  ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ದೇಶದಲ್ಲಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಅತಿ ಹೆಚ್ಚು ಜನರು ಬೆಂಗಳೂರು ನಗರಕ್ಕೆ ಅಗಮಿಸುತ್ತಿದ್ದಾರೆ. ಪ್ರತಿ ದಿನ 5,000 ವಾಹನಗಳ ನೋಂದಣಿ ಆಗುತ್ತಿದೆ. ಹೀಗೆ ಮುಂದುವರಿದರೆ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರು ಡಿ ಕಂಜೆಸ್ಡೆಡ್ ಮಾಡುವ ಅಗತ್ಯವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ಶೀಘ್ರವೇ ಬೆಂಗಳೂರಿಗೆ ಹೊಸ ಪ್ರಸ್ತಾವನೆಯನ್ನು ಜನರ ಮುಂದೆ ಇಡುತ್ತೇವೆ. ಹಿಂದಿನ ಸರ್ಕಾರ ನಾಲ್ಕು ಪ್ಲೋರ್ ಮನೆ ಕಟ್ಟಿದರೆ ಅಕುಪೆನ್ಸಿ ಸರ್ಟಿಪಿಕೆಟ್ ಪಡೆಯಲು ಆಳುವವರ ಮನೆಗೆ ಹೋಗುವಂತೆ ಮಾಡಿದ್ದರು. ಅದನ್ನು ತೆಗೆದು ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ‌ಬೆಂಗಳೂರಿನ ಸಮಗ್ರ ಅಭಿವೃದ್ದಿಯ ಚಿತ್ರಣ ಇಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ಈ ಸಂದರ್ಭದಲ್ಲಿ ವಸತಿ ಸಚಿವ ವಿ.‌ಸೋಮಣ್ಣ, ಸಹಕಾರ ಸಚಿವ ಎಸ್. ಟಿ.‌ ಸೋಮಶೇಖರ್ ಮತ್ತಿತರರು ಹಾಜರಿದ್ದರು.

Similar News