ಹಲ್ಲೆ ಪ್ರಕರಣ: ಮುಹಮ್ಮದ್ ನಲಪಾಡ್ ವಿರುದ್ಧದ ವಿಚಾರಣೆ ಮುಂದುವರಿಕೆಗೆ ಕೋರ್ಟ್ ಆದೇಶ

Update: 2022-11-15 17:28 GMT

ಬೆಂಗಳೂರು, ನ.15: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತಡೆಯಾಜ್ಞೆಯ ದಿನಾಂಕ ವಿಸ್ತರಣೆಯಾಗದ ಹಿನ್ನೆಲೆ ಕೇಸ್‍ನ ತನಿಖೆಯನ್ನು ಮುಂದುವರಿಸುವಂತೆ ನಗರದ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. 

ಮೊಹಮ್ಮದ್ ನಲಪಾಡ್ ಪರ ವಕೀಲರು, ಶ್ಯಾಮ್ ಸುಂದರ್ ಅವರು ಈ ಪ್ರಕರಣದಲ್ಲಿ ಎಸ್‍ಪಿಪಿ ಆಗುವಂತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ನ್ಯಾ.ಎಸ್.ನಟರಾಜ್ ಅವರಿದ್ದ ನ್ಯಾಯಪೀಠ, ನಲಪಾಡ್ ಪರ ವಕೀಲರ ಆಕ್ಷೇಪ ತಳ್ಳಿಹಾಕಿ ಸಾಕ್ಷ್ಯ ವಿಚಾರಣೆ ಮುಂದುವರಿಸಲು ಆದೇಶ ಹೊರಡಿಸಿದೆ.

ಮೊಹಮ್ಮದ್ ನಲಪಾಡ್ (Mohammed Haris Nalapad) ಫೆಬ್ರವರಿ 17, 2018 ರಂದು ಯುಬಿ ಸಿಟಿ ರೆಸ್ಟೋರೆಂಟ್‍ವೊಂದರಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದರು. ರಾತ್ರಿ ಸುಮಾರು 11 ಗಂಟೆಗೆ ಯುಬಿ ಸಿಟಿ ರೆಸ್ಟೊರೆಂಟ್‍ಗೆ ವಿದ್ವತ್ ಊಟಕ್ಕೆಂದು ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮೇಲೆ ಹಲ್ಲೆ ಮಾಡಿದ್ದಾರೆ.

ಬಳಿಕ ವಿದ್ವತ್ ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅಲ್ಲಿಗೆ ತೆರಳಿದ ನಲಪಾಡ್ ಮತ್ತು ತಂಡ ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಇತರೆ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. 116 ದಿನಗಳ ಜೈಲುವಾಸದ ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಮೊಹಮ್ಮದ್ ನಲಪಾಡ್ ಹೊರಬಂದಿದ್ದರು. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್‍ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು ಈ ಆದೇಶ ಹೊರಡಿಸಿದ್ದರು. ಸದ್ಯ ಮಧ್ಯಂತರ ತಡೆಯಾಜ್ಞೆಯ ದಿನಾಂಕ ಮುಗಿದಿದೆ. ತಡೆಯಾಜ್ಞೆಯ ಅವಧಿಯನ್ನು ವಿಸ್ತರಿಸುವಂತೆ ನಲಪಾಡ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ ಸೆಷನ್ಸ್ ಕೋರ್ಟ್‍ನ ನಲಪಾಡ್ ಪರ ವಕೀಲರ ಆಕ್ಷೇಪ ತಳ್ಳಿಹಾಕಿ ಸಾಕ್ಷ್ಯ ವಿಚಾರಣೆ ಮುಂದುವರಿಸಲು ಆದೇಶ ಹೊರಡಿಸಿದೆ.   

Similar News