ಅಪಸ್ಮಾರ ಲಕ್ಷಣಗಳು ಮತ್ತು ಚಿಕಿತ್ಸೆ

ಇಂದು ವಿಶ್ವ ಅಪಸ್ಮಾರ ಜಾಗೃತಿ ದಿನ

Update: 2022-11-17 07:34 GMT

ಅಪಸ್ಮಾರ ಎಂದಾಕ್ಷಣ ನೆನಪಾಗುವುದು ಕೈ ಕಾಲು ನಡುಗಿಸುತ್ತ, ಒದ್ದಾಡುತ್ತ ಎಚ್ಚರ ತಪ್ಪುವ ರೋಗಿ. ಹೊರ ಚಾಚಿದ ನಾಲಿಗೆ, ನಾಲಿಗೆ ಕಚ್ಚಿಕೊಂಡಿದ್ದರಿಂದ ಜಿನುಗುವ ರಕ್ತ, ಬಾಯಲ್ಲಿ ನೊರೆ, ಸುತ್ತಲೂ ಹೌಹಾರಿ ನಿಂತ ಜನ...... ಇದು ಅಪಸ್ಮಾರದ ಒಂದು ಪ್ರಕಾರವಷ್ಟೇ. ಇದ್ದಕ್ಕಿದ್ದಹಾಗೆ ಏನೂ ಮಾತನಾಡದೇ ಶೂನ್ಯವಾಗಿ ಕುಳಿತುಕೊಳ್ಳುವುದು, ಎಂದೂ ತೊದಲದೆ ಇದ್ದವರು ತೊದಲುವುದು, ಸತತವಾಗಿ ಸ್ವಲ್ಪಹೊತ್ತು ಒಂದು ಕಣ್ಣನ್ನು ಮಿಟುಕಿಸುವುದು, ತುಟಿಗಳನ್ನು ವಿಚಿತ್ರವಾಗಿ ಅಲುಗಾಡಿಸುವುದು, ಒಮ್ಮೆಲೆ ಜೋಲಿ ತಪ್ಪುವುದು.....ಇವೆಲ್ಲ ಅಪಸ್ಮಾರದ ಇತರ ಪ್ರಕಾರಗಳು. ಒಮ್ಮಾಮ್ಮೆ ಕೈ ಮೇಲೆ ಹುಳ ಹರಿದಾಡುತ್ತಿದೆ ಎಂಬ ಭ್ರಮೆ ಉಂಟಾಗಬಹುದು. ಇದೂ ಕೂಡ ಅಪಸ್ಮಾರ!. ಪಿಟ್ಸ್, ಎಪಿಲೆಪ್ಸಿ, ಸೀಸರ್, ಮಲರೋಗ, ಮೂರ್ಛೆರೋಗ ಎಂತಲೂ ಇದನ್ನು ಕರೆಯುತ್ತಾರೆ.

ಏನು ಕಾರಣ?

ಮೆದುಳಿನ ಕೋಶಗಳ ನಾಶ, ಮೆದುಳಿಗೆ ತಗಲುವ ಸೋಂಕು, ಮೆದುಳಿಗೆ ಆಮ್ಲಜನಕ ಪೂರೈಕೆಯಲ್ಲಿನ ಕೊರತೆ.... ಇವು ಅಪಸ್ಮಾರಕ್ಕೆ ಮುಖ್ಯ ಕಾರಣ. ಬಹುತೇಕ ಪ್ರಕರಣಗಳಲ್ಲಿ ಅಪಸ್ಮಾರ ಬರಲು ಯಾವ ಕಾರಣವೂ ಗೋಚರವಾಗುವುದಿಲ್ಲ. ಇದನ್ನು ‘ಈಡಿಯೋಪತಿಕ್ ಎಪಿಲೆಪ್ಸಿ’(ಕಾರಣ ತಿಳಿಯದ ಅಪಸ್ಮಾರ) ಎನ್ನುತ್ತಾರೆ.

ಕೆಲವೇ ಪ್ರಕರಣಗಳಲ್ಲಿ ಇದು ಆನುವಂಶಿಕವಾಗಿ ಬರಬಹುದು. ಶೇ.1 ಅಥವಾ 2ರಷ್ಟು ಪ್ರಕರಣಗಳಲ್ಲಿ ಗುರುತಿಸಬಹುದಾದಂತಹ ಕಾರಣಗಳಿಂದ ಅಪಸ್ಮಾರ ಬರುತ್ತದೆ. ಉದಾ: ಬ್ಯಾಕ್ಟೀರಿಯಾ, ವೈರಸ್‌ಗಳಿಂದುಂಟಾಗುವ ಮೆದುಳು ಜ್ವರ, ತಲೆಗೆ ತೀವ್ರ ಪೆಟ್ಟು, ವಿಷವಸ್ತುಗಳ ಸೇವನೆ, ಮದ್ಯಪಾನ, ಮಾದಕ ವಸ್ತುಗಳ ಚಟ ಇರುವವರು, ರಕ್ತನಾಳ ಒಡೆದು ಮೆದುಳಿನೊಳಗೆ ರಕ್ತ ಸ್ರಾವ, ಮೆದುಳಿನಲ್ಲಿ ಗಡ್ಡೆ, ಮೆದುಳು ನಶಿಸಿ ಹೋಗುವ ರೋಗಗಳು...

20 ವರ್ಷ ವಯಸ್ಸಾದ ಮೇಲೆ ಮೊದಲ ಬಾರಿಗೆ ಫಿಟ್ಸ್ ಬಂದರೆ, ಮೆದುಳಿಗೆ ಹಾನಿಯಾಗುವ ಇತರ ಲಕ್ಷಣಗಳು ಕಂಡು ಬಂದರೆ ಮಾತ್ರ ಎಕ್ಸ್‌ರೇ, ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಮಾಡಿಸಬೇಕು. ಮೆದುಳಿನ ವಿದ್ಯುಲ್ಲೇಖ (ಇಇಜಿ)ದಲ್ಲಿ ಈ ರೋಗಿಗಳಲ್ಲಿ ನರಕೋಶಗಳ ಮಟ್ಟದಲ್ಲಿ ಏರುಪೇರಿನ ಚಟುವಟಿಕೆ ಕಂಡು ಬರುವುದು ದಾಖಲಾಗುತ್ತದೆ.

ರೋಗದ ಲಕ್ಷಣಗಳು:

ಪ್ರಜ್ಞೆ ತಪ್ಪಿಬೀಳುವುದೆಲ್ಲ ಅಪಸ್ಮಾರವಲ್ಲ. ಉಪವಾಸದಿಂದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಾಗಿ, ವ್ಯಕ್ತಿ ಪ್ರಜ್ಞೆ ತಪ್ಪಿ ಕೆಳಕ್ಕೆ ಬೀಳಬಹುದು. ತುಂಬಾ ಹೊತ್ತು ನಿಂತಿದ್ದರಿಂದ ಕೈ ಕಾಲುಗಳಲ್ಲಿ ರಕ್ತ ಹೆಚ್ಚು ಸೇರಿ, ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿ, ವ್ಯಕ್ತಿ ಕೆಳಕ್ಕೆ ಬೀಳಬಹುದು. ವಿಪರೀತ ಬಿಸಿಲು, ದೈಹಿಕ ಶ್ರಮ, ವಾಂತಿ ಭೇದಿ, ರಕ್ತಸ್ರಾವದಿಂದ ಸುಸ್ತಾಗಿ ಪ್ರಜ್ಞೆ ತಪ್ಪಬಹುದು. ಮಾನಸಿಕ ಕ್ಲೇಶ, ಆಘಾತದಿಂದ ಪ್ರಜ್ಞೆ ತಪ್ಪಬಹುದು. ಆದ್ದರಿಂದ ಅಪಸ್ಮಾರದ ವಿಶೇಷ ಲಕ್ಷಣಗಳನ್ನು ಗಮನಿಸುವುದು ಮತ್ತು ಅವನ್ನು ವೈದ್ಯರಿಗೆ ಹೇಳುವುದು ಅನ್ವಯವಾಗುತ್ತದೆ. ಅಪಸ್ಮಾರ ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಥಟ್ಟನೆ ಕಾಣಿಸಿಕೊಳ್ಳುತ್ತದೆ. ಅಟ್ಯಾಕ್ ಬಂದು ವ್ಯಕ್ತಿ ಪ್ರಾಣಾಪಾಯದಲ್ಲಿ ಸಿಕ್ಕಿ ಕೊಳ್ಳಬಹುದು. ಉದಾ : ವಾಹನ ಚಾಲನೆ ಮಾಡುವಾಗ, ರಸ್ತೆ ಮಧ್ಯದಲ್ಲಿ, ಬೆಂಕಿ, ನೀರಿನ ಹತ್ತಿರ ಇದ್ದಾಗ, ತಿರುಗುವ ಯಂತ್ರದ ಬಳಿ ಕೆಲಸ ಮಾಡುವಾಗ, ಮಹಡಿಯ ಮೇಲೆ, ಮರದ ಮೇಲೆ ಇದ್ದಾಗ, ಒಂಟಿಯಾಗಿದ್ದಾಗ, ನಿದ್ರೆಯಲ್ಲಿರುವಾಗ ಈ ರೀತಿ ಅಟ್ಯಾಕ್ ಆಗಿ, ವ್ಯಕ್ತಿಗೆ ಬಲವಾದ ಏಟು, ಗಾಯಗಳಾಗುತ್ತವೆ. ಕೈ ಕಾಲು ಜೋರಾಗಿ ಅದುರುವಾಗ, ನಾಲಿಗೆ ಕಚ್ಚಿಕೊಂಡು ರಕ್ತ ಬಂದಿರುತ್ತದೆ. ಮಲ ಮೂತ್ರ ವಿಸರ್ಜನೆ ಯಾಗಿರುತ್ತದೆ. ಪ್ರತಿಯೊಂದು ಅಟ್ಯಾಕ್ ಹಿಂದಿನ ಅಟ್ಯಾಕ್‌ನ ತದ್ರೂಪವಾಗಿರುತ್ತದೆ. ಯಾವ ಬದಲಾವಣೆಯೂ ಇರುವುದಿಲ್ಲ. ಪ್ರತೀ ಅಟ್ಯಾಕ್‌ನಲ್ಲೂ ಎಲ್ಲವೂ ಒಂದು ನಿರ್ದಿಷ್ಟ ರೀತಿಯಲ್ಲೇ ಕಾಣಿಸಿಕೊಳ್ಳುತ್ತವೆ. ರೋಗಿಗೆ ಕೈ ಕಾಲುಗಳಲ್ಲಿ ಸೆಳವು ಉಂಟಾಗಿ ಆತ ಮೂರ್ಛೆ ತಪ್ಪಿಬಿದ್ದರೆ ಅದು ಕ್ಲಾಸಿಕಲ್ ಫಿಟ್ಸ್. ಇಂತಹ ಅಟ್ಯಾಕ್ ಬರುವ ಒಂದೆರಡು ದಿನ ಮೊದಲು ಬೆವರು ಬಿಡುವುದು, ನಡುಕ, ಹೃದಯ ಬಡಿತ ಹೆಚ್ಚುವುದು, ಆಯ ತಪ್ಪಿದಂತಾಗುವುದು, ಶೂನ್ಯತಾಭಾವ, ಸುಮ್ಮನೆ ಭಯ.... ಒಟ್ಟಿನಲ್ಲಿ ಕೆಟ್ಟದ್ದೇನೋ ಸಂಭವಿಸಲಿದೆ ಎನ್ನುವ ಭಾವನೆ. ಒಮ್ಮೆ ಅಟ್ಯಾಕ್ ಬಂದ ನಂತರ ಇನ್ನೊಮ್ಮೆ ಯಾವಾಗ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಒಂದೇ ದಿನದಲ್ಲಿ ಇದು ಮೂರು ನಾಲ್ಕು ಬಾರಿ ಬರಬಹುದು ಅಥವಾ ವರ್ಷದಲ್ಲಿ ಒಂದೆರಡು ಸಲ ಬರಬಹುದು. ‘ಸ್ಟೆಟಸ್ ಎಪಿಲೆಪ್ಸಿ’ಯಲ್ಲಿ ಒಂದು ಅಟ್ಯಾಕ್ ಬಂದ ಮೇಲೆ ಪ್ರಜ್ಞೆ ತಪ್ಪಿದ ರೋಗಿ ಎಚ್ಚರಗೊಳ್ಳುವ ಮೊದಲೇ ಇನ್ನೊಂದು ಅಟ್ಯಾಕ್ ಬರುತ್ತದೆ. ಮತ್ತೆ ಎಚ್ಚರಗೊಳ್ಳುವಷ್ಟರಲ್ಲಿಯೇ ರೋಗಿ ಇನ್ನೊಮ್ಮೆ ಕುಸಿಯುತ್ತಾನೆ. ಪ್ರಜ್ಞೆ ತಪ್ಪಿ ಅದುರುವ ಸಮಯದಲ್ಲಿ ರೋಗಿ ಹೊರಗಿನ ಯಾವ ಪ್ರಚೋದನೆಗೂ ಸ್ಪಂದಿಸುವುದಿಲ್ಲ. ಆಗ ನಡೆದದ್ದು ಆತನಿಗೆ ಸ್ವಲ್ಪವೂ ನೆನಪಿರುವುದಿಲ್ಲ.ಅಟ್ಯಾಕ್ ನಂತರ ಸ್ವಲ್ಪ ಹೊತ್ತು ರೋಗಿ ಅತೀವವಾಗಿ ಸುಸ್ತಾದವನಂತೆ ಕಾಣುತ್ತಾನೆ. ವಿಪರೀತ ತಲೆನೋವು, ಮೈಕೈ ನೋವು, ವಾಕರಿಕೆ, ವಾಂತಿಯಂತಹ ತೊಂದರೆಗಳಿಂದ ಬಳಲಬಹುದು. ಆ ದಿವಸವೆಲ್ಲ ಮಂಕಾಗಿ, ಮಾಮೂಲಿನ ಕೆಲಸ, ಚಟುವಟಿಕೆಗಳನ್ನು ಮಾಡಲಾಗದಿರಬಹುದು.

ಅಪಸ್ಮಾರಕ್ಕೆ ಚಿಕಿತ್ಸೆ:

ಬಳಕೆಯಲ್ಲಿರುವ ಔಷಧಿಗಳಲ್ಲಿ ವೈದ್ಯರು ಒಂದನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸುತ್ತಾರೆ. ಯಾವ ರೋಗಿಗೆ ಎಷ್ಟು ಪ್ರಮಾಣದ ಔಷಧಿ ಬೇಕಾಗುತ್ತದೆ ಎಂಬುದು ಸ್ವಲ್ಪ ದಿನಗಳ ನಂತರವೇ ತಿಳಿಯುವುದು. ಔಷಧಿ ಪರಿಣಾಮಕಾರಿ ಯಾಗಿ ಕೆಲಸ ಮಾಡಿ ಫಿಟ್ಸ್ ಬರುವುದನ್ನು ನಿಲ್ಲಿಸಬೇಕಾದರೆ ರೋಗಿ ಮತ್ತು ಮನೆಯವರು ಈ ಕೆಳಗೆ ಕೊಟ್ಟಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

* ವೈದ್ಯರು ಸೂಚಿಸಿದ ಔಷಧ ಪ್ರಮಾಣವನ್ನು ಒಂದು ಡೋಸ್ ತಪ್ಪದೇ ಕ್ರಮವಾಗಿ ತಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಔಷಧ ಸೇವನೆಯನ್ನು ಮರೆಯಬಾರದು.

* 15 ಅಥವಾ 30 ದಿನಗಳಿಗೊಮ್ಮೆ ವೈದ್ಯರನ್ನು ಕಾಣಬೇಕು. ಅನವಶ್ಯಕವಾಗಿ ವೈದ್ಯರನ್ನು ಬದಲಿಸಬಾರದು. * ರೋಗಿ ವೇಳೆಗೆ ಸರಿಯಾಗಿ ಆಹಾರ ಸೇವಿಸ ಬೇಕು. ಆದರೆ, ಆಹಾರ ಪಥ್ಯವೇನೂ ಇಲ್ಲ. ಯಾವುದೇ ಸಬೂಬು ಹೇಳಿ ರೋಗಿ ಉಪವಾಸ ಮಾಡಬಾರದು. ನಿದ್ರೆಗೆಡಬಾರದು.

* ಜ್ವರ, ವಾಂತಿ, ಭೇದಿ ಇತ್ಯಾದಿ ಬೇರೆ ಯಾವುದೇ ರೋಗ ಲಕ್ಷಣ ಕಂಡು ಬಂದರೆ ತಡಮಾಡದೇ ವೈದರ ಸಲಹೆ ಪಡೆಯಬೇಕು. * ವೈದ್ಯರು ತಿಳಿಸಿದ ಔಷಧ ಸೇವನೆಯನ್ನು ಕನಿಷ್ಠ ಐದು ವರ್ಷಗಳ ಕಾಲ ಸೇವಿಸಬೇಕು.

ಕೀಳಾಗಿ ಕಾಣಬೇಡಿ:

ಅಪಸ್ಮಾರ ರೋಗಿಗಳನ್ನು ಕೀಳಾಗಿ, ಹೀನಾಯವಾಗಿ ಕಾಣಬಾರದು. ಎಲ್ಲ ರೀತಿಯ ಪ್ರೋತ್ಸಾಹ, ಪ್ರೀತಿ ಪ್ರೇರಣೆ, ಮಾರ್ಗದರ್ಶನ, ಆಸರೆಯನ್ನು ನೀಡಬೇಕು. ಜ್ಯೂಲಿಯಸ್ ಸೀಸರ್, ಅಲೆಕ್ಸಾಂಡರ್, ನೆಪೋಲಿಯನ್ ಬೋನಾಪಾರ್ಟೆ, ಖ್ಯಾತ ಕ್ರಿಕೆಟ್ ಆಟಗಾರ ಟೋನಿಗ್ರೆಗ್.....ಇವರೆಲ್ಲ ಅಪಸ್ಮಾರ ರೋಗಿಗಳೇ. ಆದರೆ, ಅವರ ಸಾಧನೆಗೆ ರೋಗವೇನಾದರೂ ಅಡ್ಡಿ ಬಂತೆ? ರೋಗಿಗಳು ಔಷಧಿಯನ್ನು ಸರಿಯಾಗಿ ತಗೆದುಕೊಂಡು ಅವಶ್ಯಕ ಮುಂಜಾಗ್ರತೆ ವಹಿಸಿದರೆ ಅವರೂ ಇತರರಂತೆ ಜೀವನ ನಡೆಸಬಹುದು. ಸಾಧಕರೂ ಆಗಬಹುದು!

Similar News