ಮಂಗಳೂರು: ಕೋಳಿ ಮಾಂಸ ನೀಡದ ಸಿಟ್ಟಿನಲ್ಲಿ ಹಲ್ಲೆ ಆರೋಪ; ದೂರು ದಾಖಲು

Update: 2022-11-18 16:47 GMT

ಮಂಗಳೂರು: ಕೋಳಿ ಮಾಂಸ ನೀಡದ ಸಿಟ್ಟಿನಲ್ಲಿ ಕೋಳಿ ಅಂಗಡಿಯ ಮಾಲಕನಿಗೆ ಇಬ್ಬರು ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ನಗರದ ಪಡೀಲ್ ನಿವಾಸಿ ಪುಷ್ಪರಾಜ್ ಹಲ್ಲೆಗೊಳಗಾದ ಅಂಗಡಿಯ ಮಾಲಕ. ಇವರು ಕಣ್ಣೂರು ಕೊಡಕ್ಕಲ್ ಬಳಿ ಕೆ.ಕೆ. ಚಿಕನ್ ಸೆಂಟರ್ ನಡೆಸುತ್ತಿದ್ದು, ಅ.31ರ ರಾತ್ರಿ ಅಂಗಡಿಯ ಬಾಗಿಲು ಮುಚ್ಚಿದ ಬಳಿಕ ಪರಿಚಯದ ರಾಹುಲ್ ಮತ್ತು ನಿಕ್ಷಿತ್ ಆಗಮಿಸಿ ಕೋಳಿ ಕೇಳಿದರು ಎನ್ನಲಾಗಿದೆ. ಅಂಗಡಿಯ ಬಾಗಿಲು ಮುಚ್ಚಲಾಯಿತು ಎಂದು ಪುಷ್ಪರಾಜ್ ಹೇಳಿದಾಗ ಕೋಳಿ ಮಾಂಸ ಕೊಡಲೇಬೇಕು ಎಂದು ಹಠ ಹಿಡಿದು ಬಳಿಕ ಅವಾಚ್ಯ ಶಬ್ದದಿಂದ ಬೈದ ಆರೋಪಿಗಳಾದ ರಾಹುಲ್ ಮತ್ತು ನಿಕ್ಷಿತ್ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಕಂಕನಾಡಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಗೊಳಗಾದ ಪುಷ್ಪರಾಜ್‌ರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಮಿಷನರ್‌ಗೆ ಮನವಿ: ಘಟನೆ ನಡೆದು 18 ದಿನವಾಗಿದೆ. ಪೊಲೀಸರಿಗೆ ದೂರನ್ನೂ ನೀಡಲಾಗಿದೆ. ಗಂಭೀರ ಹಲ್ಲೆಗೊಳಗಾದ ಪುಷ್ಪರಾಜ್ ಶಸ್ತ್ರಚಿಕಿತ್ಸೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆರೋಪಿಗಳಾದ  ನಿಕ್ಷಿತ್ ಮತ್ತು ರಾಹುಲ್ ರಾಜಾರೋಷವಾಗಿ ತಿರುಗಾಡುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಹಾಗಾಗಿ ಆರೋಪಿಗಳನ್ನು ಬಂಧಿಸಿ ಸಹೋದರ ಪುಷ್ಪರಾಜ್‌ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪುಷ್ಪರಾಜ್‌ರ ಅಕ್ಕ ಶೋಭಾ ಕೇಶವ್ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

Similar News