ಇಬ್ಬರು ನ್ಯಾಯಮೂರ್ತಿಗಳ ವರ್ಗಾವಣೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ: ಎ.ಪಿ.ರಂಗನಾಥ್
ಬೆಂಗಳೂರು, ನ. 18: ತೆಲಂಗಾಣದ ಹೈಕೋರ್ಟ್ನಿಂದ ನ್ಯಾಯಮೂರ್ತಿ ಅಭಿಷೇಕ್ರೆಡ್ಡಿ ಮತ್ತು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿಖಿಲ್ ಎಸ್. ಕರೀಲ್ ಅವರನ್ನು ವರ್ಗಾವಣೆ ಮಾಡಿರುವುದು ನಿಜಕ್ಕೂ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಮಾರಕವಾಗಿದೆ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಹೇಳಿದ್ದಾರೆ.
ಕೊಲಿಜಿಯಂನ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ತೆಲಂಗಾಣ ಮತ್ತು ಗುಜರಾತ್ನ ನಮ್ಮ ಸಹೋದ್ಯೋಗಿಗಳೊಂದಿಗೆ(ವಕೀಲರ) ನಾನು ಸೇರುತ್ತೇನೆ ಎಂದು ತಿಳಿಸಿದ್ದಾರೆ.
ನ್ಯಾಯಾಂಗದ ಸ್ವಾತಂತ್ರ್ಯವು ನಮ್ಮ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ ಮತ್ತು ವಕೀಲರಾಗಿ, ಕಾರ್ಯಾಂಗದ ನೇರ/ಪರೋಕ್ಷ ಹಸ್ತಕ್ಷೇಪದಿಂದ ನ್ಯಾಯಾಂಗವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.
ಈ ಅನಿವಾರ್ಯ ಸಾಂವಿಧಾನಿಕ ಮೌಲ್ಯವನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದಿದ್ದಾರೆ. ತೆಲಂಗಾಣ ಮತ್ತು ಗುಜರಾತ್ ಬಾರ್ ಕೌನ್ಸಿಲ್ನಿಂದ ವ್ಯಕ್ತವಾದ ವಿರೋಧವನ್ನು ನಾನು ಪ್ರಶಂಶಿಸುತ್ತೇನೆ ಮತ್ತು ಆ ರಾಜ್ಯಗಳಲ್ಲಿನ ನಮ್ಮ ಸಹೋದ್ಯೋಗಿಗಳೊಂದಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.