ಬೆಂಗಳೂರು: ಸ್ನೇಹಿತನ ಕೊಲೆಗೈದು ಮೃತದೇಹದೊಂದಿಗೆ ಠಾಣೆಗೆ ಹಾಜರಾದ ಆರೋಪಿ!

Update: 2022-11-22 11:30 GMT

ಬೆಂಗಳೂರು (Bengaluru), ನ.22: ಹಣ ವಂಚನೆ ಸಂಬಂಧಿಸಿದಂತೆ ಸ್ನೇಹಿತನನ್ನು ಕೊಲೆಗೈದು ಮೃತದೇಹವನ್ನು ರಾಮ ಮೂರ್ತಿನಗರ ಪೊಲೀಸ್ ಠಾಣೆಗೆ ಮೃತದೇಹ ತಂದಿದ್ದ ಆರೋಪಿಯನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ರಾಮಮೂರ್ತಿ ನಗರದ ಜಯಂತಿ ನಗರದ ನಿವಾಸಿ ಮಹೇಶಪ್ಪ ಎಂಬಾತನನ್ನು ಕೊಂದು ಮೃತದೇಹವನ್ನು ಠಾಣೆಗೆ ತಂದಿದ್ದ ಆರೋಪಿ ರಾಜಶೇಖರ್ ಬಂಧಿತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂಜನಗೂಡು ಬಳಿಯ ಹಿಮನ ಗುಂಡಿ ಹಳ್ಳಿಯಿಂದ ಮಹೇಶಪ್ಪ ನನ್ನು ಬೆಂಗಳೂರಿಗೆ ಕರೆತಂದಿದ್ದ ರಾಜಶೇಖರ್ ಜೊತೆ ಮಹೇಶಪ್ಪಗೆ ಒಳ್ಳೆ ಸ್ನೇಹವಿತ್ತು. ಬ್ಯಾಂಕ್‍ಗಳಲ್ಲಿ ಸಾಲಕೊಡಿಸುವುದಾಗಿ ಹಲವರಿಂದ ಹಣ ಪಡೆದಿದ್ದ. ಮಹೇಶಪ್ಪ ಎಲ್ಲ ವ್ಯವಹಾರಗಳಲ್ಲೂ ರಾಜಶೇಖರ ಮತ್ತು ಆತನ ತಾಯಿ ಸುವಿಧಾ ಜೊತೆಗಿದ್ದರು. ಆದರೆ ಯಾರಿಗೂ ಸಾಲ ಕೊಡಿಸದೇ ಪಡೆದ ಹಣ ವಾಪಸ್ ನೀಡದೇ ಮಹೇಶಪ್ಪ ಪರಾರಿಯಾಗಿದ್ದನು.

ಇದರಿಂದಾಗಿ ಮಧ್ಯದಲ್ಲಿದ್ದ ರಾಜಶೇಖರ ತನ್ನ ಮನೆಯನ್ನೆ ಮಾರಿ ಹಲವರಿಗೆ ಕೊಟ್ಟು ಬೇಸತ್ತಿದ್ದು, ಇದರಿಂದ ಮಹೇಶಪ್ಪನನ್ನು ಹುಡುಕಿಕೊಂಡು ಹಳ್ಳಿಗೆ ಹೋಗಿದ್ದ. ಅಲ್ಲಿಂದ ಮಹೇಶಪ್ಪನನ್ನು ಕಾರಿನಲ್ಲಿ ಕರೆತಂದು ಮಾರ್ಗ ಮಧ್ಯೆ ಅವಲಹಳ್ಳಿ ಬಳಿ ಹಣ ವಾಪಸ್ ನೀಡುವಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು ಬೆಳಗ್ಗೆ ತನಕ ಗಾಯಾಳುವನ್ನು ಇರಿಸಿಕೊಂಡಿದ್ದನು.

ಆರೋಪಿ ಬೆಳಗ್ಗೆ ಎಚ್ಚರವಾಗಿ ನೋಡಿದಾಗ ಮಹೇಶಪ್ಪ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಬೆಳಗಿನ ಜಾವ ಕಾರು, ಮೃತದೇಹ, ಹಲ್ಲೆ ಮಾಡಿದ್ದ ಮಾರಕಾಸ್ತ್ರ ಸಹಿತ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದ ರಾಜಶೇಖರ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಬೆಂಗಾವಲು ವಾಹನ ಅಪಘಾತ; ಪೊಲೀಸ್ ಸಿಬ್ಬಂದಿಗೆ ಗಾಯ

Similar News