ಹೆಬ್ರಿ: ತೋಟಕ್ಕೆ ಮಂಗ, ಕಾಡುಪ್ರಾಣಿಗಳ ದಾಳಿ; ಕೃಷಿಕರು ಕಂಗಾಲು

► ಎಕರೆಗೆ ಮೂರು ಲಕ್ಷ ರೂ. ಪರಿಹಾರ ನೀಡಿ: ರೈತರ ಬೇಡಿಕೆ ► ಇಲ್ಲ, ರೈತರಿಗೆ ಬಂದೂಕು ಲೈಸನ್ಸ್ ನೀಡಿ: ಕೃಷಿಕರ ಆಗ್ರಹ

Update: 2022-11-23 14:05 GMT

ಹೆಬ್ರಿ, ನ.23: ಅಡಿಕೆ, ತೆಂಗು, ಬಾಳೆ ಸಹಿತ ರೈತರು ಕಷ್ಟಪಟ್ಟು ಬೆಳೆಸಿದ ಕೃಷಿಗೆ, ತೋಟಗಳಿಗೆ ಮಂಗಗಳ ಸಹಿತ ಕಾಡುಪ್ರಾಣಿಗಳು ಪ್ರತಿನಿತ್ಯವೂ ಎಂಬಂತೆ ಹಿಂಡುಹಿಂಡಾಗಿ ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ಕೃಷಿಯನ್ನು ಹಾಳು ಮಾಡುತ್ತಿವೆ. ಇದರಿಂದ ಬೆವರು ಬಸಿದು ದುಡಿಯುವ ರೈತರು ಬದುಕುವ ಸ್ಥಿತಿಯಲ್ಲೂ ಇಲ್ಲ, ಕಾಡುಪ್ರಾಣಿಗಳಿಂದ ರಕ್ಷಣೆಯೂ ಇಲ್ಲ ಎಂಬಂತಾಗಿದೆ. ರೈತರ ಹಿತವನ್ನು ಕಾಯಬೇಕಾದ ಸರಕಾರ ಇತ್ತ ಗಮನವನ್ನೇ ನೀಡುವುದಿಲ್ಲ. ಹೀಗಾದರೆ ಕೃಷಿಕರು, ರೈತರು ಬದುಕುವುದಾದರೂ ಹೇಗೆ ಎಂದು ಹೆಬ್ರಿ ತಾಲೂಕಿನ ರೈತರು ಅತ್ಯಂತ ನೋವು ವ್ಯಕ್ತಪಡಿಸುತ್ತಿದ್ದಾರೆ.

ಹೆಬ್ರಿ, ಕಾರ್ಕಳ ತಾಲೂಕಿನ ಬಹುತೇಕ ಕೃಷಿಕ್ಷೇತ್ರಗಳಿಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮುನಿಯಾಲು ಗೋಪಾಲ ಕುಲಾಲ್, ರೈತರ ಸಂಕಷ್ಟ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂಡುಹಿಂಡಾಗಿ ಮಂಗಗಳ ದಾಂಗುಡಿ: ಸಾಧಾರಣವಾಗಿ ಒಂದು ಮಂಗ ದಿನಕ್ಕೆ 5 ಸಿಯಾಳ ಕುಡಿಯುತ್ತದೆ. ರೈತರು ಸಿಯಾಳ ಅಂಗಡಿಗೆ ಮಾರಾಟ ಮಾಡಿದಾಗ ಖರೀದಿಸುವುದು 20ರಿಂದ 25 ರೂಪಾಯಿಗೆ. ಮಂಗ ಕುಡಿದ 5 ಸಿಯಾಳದ ಬೆಲೆ  100ರಿಂದ 125. ಹಿಂಡುಹಿಂಡಾಗಿ ಮಂಗಗಳು ಸಿಯಾಳ ಕುಡಿದರೆ ಬೆಳೆಗಾರರಿಗೆ ಏನು ದೊರೆಯುತ್ತದೆ. ಬೊಂಡದ ಜೊತೆಗೆ ಅಡಿಕೆ, ತರಕಾರಿ, ಬಾಳೆ ಹಾಗೂ ಭತ್ತದ ಕೃಷಿಯೂ ಮಂಗಗಳ ದಾಂಧಲೆಗೆ ಸಿಕ್ಕಿ ಸರ್ವ ನಾಶವಾಗುತ್ತವೆ. ಹೀಗಾದರೆ ತೋಟದ ಬೆಳೆಗಾರರು ಬದುಕುವುದಾದರೂ ಹೇಗೆ ಗೋಪಾಲ ಕುಲಾಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಂಕೆಗಳು ಬಂದು ಬೇಸಾಯ ಮಾಡಲು ಸಿದ್ಧ ಮಾಡಿರುವ ನೇಜಿ, ದನಗಳಿಗೆ ಮೇಯಲು ಬೆಳೆಸಿರುವ ಹುಲ್ಲು, ಬೆಳೆದ ಭತ್ತದ ಪೈರು ಎಲ್ಲವನ್ನೂ ತಿಂದು ನಾಶ ಮಾಡುತ್ತವೆ. ಕಡವೆಗಳು ಹಿಂಡಾಗಿ ಬಂದು ಭತ್ತ, ಅಡಿಕೆ, ತೆಂಗು, ಬಾಳೆಗಿಡಗಳನ್ನೇ ತಿಂದು ನಾಶ ಪಡಿಸುತ್ತಿವೆ. ಕಾಡುಕೋಣಗಳು ಬಹುತೇಕ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡುತ್ತಿವೆ. ಕಾಡುಕೋಣಗಳು ತಿಂದು ಹಾಳು ಮಾಡುವುದಕ್ಕಿಂತ ಹೆಚ್ಚು ಗಿಡಗಳನ್ನು ತುಳಿದು ತುಂಡು ಮಾಡುತ್ತವೆ. ಅಡಿಕೆ ತೆಂಗು, ಬಾಳೆ ಸಹಿತ ಬಹುತೇಕ ಕೃಷಿಯನ್ನು ನಾಶ ಪಡಿಸುತ್ತದೆ. ಇವುಗಳನ್ನು ಓಡಿಸುವುದೇ ಕಷ್ಟ. ನೋಡುವಾಗಲೇ ಭಯಹುಟ್ಟುತ್ತದೆ.

ಇತ್ತೀಚೆಗೆ ಚಿರತೆ, ಹುಲಿಗಳು ಕೂಡ ಅಲ್ಲಲ್ಲಿ ಹೆಚ್ಚಾಗಿ ಕಾಣ ಸಿಗುತ್ತಿವೆ. ಸಾಕುನಾಯಿ, ದನಕರುಗಳನ್ನು ಹಿಡಿದು ತಿನ್ನುತ್ತಿವೆ. ಇವುಗಳಿಂದ ಎಲ್ಲರಿಗೂ ಅಪಾಯವಿದೆ. ಇವುಗಳ ಕೆಲವೊಮ್ಮೆ ಮನುಷ್ಯರ ಮೇಲೂ ದಾಳಿ ಮಾಡುವ ಭೀತಿಯಿದೆ ಎಂದು ಗೋಪಾಲ ಕುಲಾಲ್ ರೈತರ ಭವಣೆಯ ಸಮಗ್ರ ಮಾಹಿತಿ ನೀಡುತ್ತಾ ವಿವರಿಸಿದರು.

ವಿಪರೀತವಾಗಿದೆ ನವಿಲುಗಳ ಕಾಟ: ಇನ್ನು ನವಿಲುಗಳ ಕಾಟ ಇತ್ತೀಚಿನ ದಿನಗಳಲ್ಲಿ ವಿಪರೀತ ಎನ್ನುವಷ್ಟು ಹೆಚ್ಚಾಗಿದೆ. ಎಲ್ಲಿ ಕಂಡರೂ ನವಿಲುಗಳ ಗುಂಪು ಕಾಣಸಿಗುತ್ತದೆ. ತರಕಾರಿ, ತರಕಾರಿ ಗಿಡ, ಹೂವು ಎಲ್ಲವನ್ನು ಇವು ನಾಶ ಪಡಿಸುತ್ತವೆ. ಒಟ್ಟಿನಲ್ಲಿ ಎಲ್ಲಾ ಪ್ರಾಣಿ ಪಕ್ಷಿಗಳ ದಾಳಿಯಿಂದ ರೈತರು ಕೃಷಿ ಮಾಡಿ ಬದುಕುವುದೇ ಕಷ್ಟವಾಗಿದೆ. 

ರೈತರು ಕೃಷಿಗೆ ಬ್ಯಾಂಕ್ ಸಹಿತ ಸಹಕಾರ ಸಂಘಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೃಷಿ ಮಾಡಿರುತ್ತಾರೆ. ಮಳೆ -ಗಾಳಿ ಸಹಿತ ಹವಾಮಾನಗಳ ವೈಪರಿತ್ಯದ ಸಮಸ್ಯೆಯಿಂದ ಒಂದೆಡೆ ಕೃಷಿ ಎಂಬುದು ಜೂಜಿನಂತಾದರೆ, ಇನ್ನೊಂದೆಡೆ ಕಾಡುಪ್ರಾಣಿಗಳ ಸಮಸ್ಯೆ. ಬೆಲೆ ಏರಿಕೆ ರೈತರು ಎದುರಿಸುತ್ತಿರುವ ಅತೀದೊಡ್ಡ ಸಂಕಷ್ಟ. ಹೀಗೆ ನಿತ್ಯವೂ ಇಷ್ಟು ಸಮಸ್ಯೆ ಎದುರಿಸಿ ಬೆಳೆದ ಬೆಳೆಯ ಫಲ ರೈತರ ಕೈಗೆ ಸಿಗುವುದಿಲ್ಲ. ಹೀಗಾದರೇ ಸಾಲ ಮರುಪಾವತಿ ಮಾಡುವುದು ಹೇಗೆ, ಜೀವನ ಮಾಡುವುದು ಹೇಗೆ. ಸರಕಾರ ರೈತರ ಗಂಭೀರ ಸಮಸ್ಯೆಯನ್ನು ವಿಶೇಷವಾಗಿ ಮನಗಂಡು ರೈತರು, ರೈತ ಮುಖಂಡರಲ್ಲಿ ಚರ್ಚೆ ಮಾಡಿ ಸೂಕ್ತ ಪರಿಹಾರ ನೀಡುವ ಯೋಜನೆಯನ್ನು ರೂಪಿಸಬೇಕಿದೆ ಎಂದು ಗೋಪಾಲ ಕುಲಾಲ್ ಒತ್ತಾಯಿಸುತ್ತಾರೆ.

ಎಕರೆಗೆ 3 ಲಕ್ಷ ಪರಿಹಾರ ಕೊಡಿ: ರೈತರು ಹೇಳಿಕೊಂಡು ಮುಗಿಯಲಾರದಷ್ಟು ಹತ್ತು ಹಲವು ಸಂಕಷ್ಟಗಳನ್ನು ನಿರಂತರವಾಗಿ ಎದುರಿಸುತ್ತಿದ್ದಾರೆ. ಸಂಬಂಧಿಸಿದ ಇಲಾಖೆಗಳು ಕಾಡುಪ್ರಾಣಿಗಳಿಂದ ಬೆಳೆ ನಾಶ ಸಹಿತ ರೈತರ ಸಂಕಷ್ಟಗಳ ಸಮೀಕ್ಷೆ ನಡೆಸಿ ಪ್ರತೀ ರೈತರಿಗೂ ಎಕರೆಗೆ 3 ಲಕ್ಷ ರೂ. ಪರಿಹಾರ ವನ್ನು ರೈತರ ಖಾತೆಗೆ ಹಾಕಬೇಕು ಎಂಬುದು ರೈತ ಮುಖಂಡ ಗೋಪಾಲ ಕುಲಾಲ್‌ರ ಬೇಡಿಕೆ.

ಇಲ್ಲವಾದಲ್ಲಿ ರೈತರೆಲ್ಲರಿಗೂ ಯಾವೂದೇ ಷರತ್ತುಗಳಿಲ್ಲದೆ ಬಂದೂಕು ಪರವಾನಿಗೆಯನ್ನು ಶೀಘ್ರವಾಗಿ ನೀಡಬೇಕು. ನಾವೇ ಕಾಡುಪ್ರಾಣಿಗಳನ್ನು ಬಂದೂಕು ತೋರಿಸಿ ಬೆದರಿಸಿ ಕೃಷಿಮಾಡಿಕೊಂಡು ಬದುಕುತ್ತೇವೆ. ಸಾವು ಬದುಕಿನ ನಡುವೆ ಹೋರಾಡುವ ನಮ್ಮ ರೈತರನ್ನು ಬದುಕಲು ಬಿಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮುನಿಯಾಲು ಗೋಪಾಲ ಕುಲಾಲ್ ಮನವಿ ಮಾಡಿದ್ದಾರೆ.

ರೈತರ ಈ ಸಮಸ್ಯೆಗಳ ಕುರಿತಂತೆ ಸರಕಾರ ಪ್ರಾಮಾಣಿಕವಾಗಿ ಪರಿಶೀಲಿಸಿ, ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಜಿಲ್ಲೆಯಲ್ಲಿ ಎಲ್ಲ ಕೃಷಿಕರೂ ಸೇರಿ ದೊಡ್ಡಮಟ್ಟದ ಹೋರಾಟವನ್ನು ಮಾಡುತ್ತೇವೆ ಎಂಬ ಎಚ್ಚರಿಕೆಯ ಸಂದೇಶ ಗೋಪಾಲ ಕುಲಾಲ್ ನೀಡುತ್ತಾರೆ. 

Similar News