ಸುರತ್ಕಲ್‌: ನಮ್ಮೂರ ಹೆಮ್ಮೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Update: 2022-11-28 15:54 GMT

ಸುರತ್ಕಲ್‌, ನ.28: ಎನ್‌ಎಸ್‌ಯುಐ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯ ನಮ್ಮೂರ ಹೆಮ್ಮೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಗರದ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಎನ್‌ಎಸ್‌ಯುಐ ರಾಜ್ಯ ಉಸ್ತುವಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಶೈಕ್ಷಣಿಕಕ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಇಂದಿನ ಈ ಕಾರ್ಯಕ್ರಮದ ಉದ್ದೇಶ. ಅದರಂತೆ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿರುವ ಎನ್‌ಎಸ್‌ಯುಐ ಸುರತ್ಕಲ್ ಬ್ಲಾಕ್ ಸಮಿತಿಯ ನಡೆ ಶ್ಲಾಘನೀಯ. ಇದನ್ನು ವಿದ್ಯಾರ್ಥಿಗಳು ಸ್ಪೂರ್ತಿಯಾಗಿ ಪಡೆದುಕೊಂಡು ಜೀವನದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಬೇಕು ಎಂದು ಶುಭಹಾರೈಸಿದರು.

ಖಂಡಿತಾ ವಿದ್ಯಾರ್ಥಿಗಳು ದೇಶದ ಭವಿಷ್ಯದ ಶಕ್ತಿ. ಶೈಕ್ಷಣಿಕವಾಗಿ ನಾವು ಮುಂದುವರಿಯುವುದರ ಜೊತೆಗೆ ವಿದ್ಯಾರ್ಥಿ ದಿಸೆಯಲ್ಲೇ ನಾವು ಹೋರಾಟ ಮನೋಭಾವವನ್ನು ಕೂಡ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ಶಕ್ತಿ ದೇಶದ ಭವಿಷ್ಯ. ಅನ್ಯಾಯವನ್ನು ಮೆಟ್ಟಿ ನಿಲ್ಲುವ ಮೂಲಕ, ನಮ್ಮ ನಡುವೆ ಅನ್ಯಾಯ, ಶೋಷಣೆ ವಿರುದ್ಧ ಮಾತಾಡುವಂತಹ, ಅದರ ವಿರುದ್ಧ ಹೋರಾಟಗಳನ್ನು ಸಂಘಟಿಸುವ ಮೂಲಕ ನಾವು ಶಕ್ತಿಯಾಗಿ ಬಲಿಷ್ಠಗೊಳಿಸಬೇಕು. ಇವತ್ತು ವಿದ್ಯಾರ್ಥಿಗಳ ಮಧ್ಯೆ ಕೋಮು ವಿಷ ಬೀಜ ಬಿತ್ತಲು ವಿವಿಧ ಸಂಘಟನೆಗಳು ಪ್ರಯತ್ನಿಸುತ್ತಿರುವುದು ನಿಮ್ಮೆಲ್ಲರ ಗಮನಕ್ಕೆ ಬಂದಿರಬಹುದು. ಅದರ ಹಿಂದೆ ಕೆಲವರಿಗೆ ರಾಜಕೀಯ ಲಾಭ ಲೆಕ್ಕಾಚಾರಗಳು ಕೂಡ ಇದೆ. ಮಕ್ಕಳು ಯಾವುದೇ ಕಾರಣಕ್ಕೂ ಮತೀಯ ಸಂಘಟನೆಗಳ ಜೊತೆ ಗುರುತಿಸಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬಾರದು. ನಾವು ಅನ್ಯಾಯದ ವಿರುದ್ಧ ಧ್ವನಿ ಎತ್ತುವಾಗ, ಅಲ್ಲಿ ಯಾವುದೇ ಧರ್ಮದವ ಇರಲಿ, ಧರ್ಮದ ಲೇಬಲ್ ಅನ್ನು ಹತ್ತಿರ ಸುಳಿಯಲು ಬಿಡದೆ ಪಕ್ಷಾತೀತವಾಗಿ ಧ್ವನಿಎತ್ತಬೇಕೆಂದು ನುಡಿದರು.

ಇದೇ ಸಂದರ್ಭ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಾಧಕರನ್ನು ಅಥಿತಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ಮೊಯ್ದೀನ್‌ ಬಾವಾ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉಮೇಶ್ ದಂಡಕೇರಿ, ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್, ಮಾಜಿ ಉಪ ಮೇಯರ್ ಪುರುಷೋತ್ತಮ್ ಚಿತ್ರಾಪುರ ಮೊದಲಾದವರು ಮಾತನಾಡಿದರು.

ಬಶೀರ್ ಬೈಕಂಪಾಡಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ, ಬಿ.ಕೆ ತಾರನಾಥ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷರಾದ ಸವಾದ್ ಸುಳ್ಯ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಖ್ ಬಾಯಬೆ, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುಹಾನ್ ಆಳ್ವ, ಅನ್ವೀತ್ ಕಟೀಲ್, ಭರತ್ ರಾಮ್ ಗೌಡ, ಎನ್‌ಎಸ್‌ಯುಐ ಸುರತ್ಕಲ್ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಮಾನ್ ಪೂಜಾರಿ, ಮುಖಂಡರಾದ ಸದಾಶಿವ ಶೆಟ್ಟಿ, ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಹ್ಷೀರ್ ಮುಂತಾದವರು ಉಪಸ್ಥಿತರಿದ್ದರು.

ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು. ಸುಹಾನ್ ಆಳ್ವ ಧನ್ಯವಾದಗೈದರು.

Similar News