​ಉಳ್ಳಾಲ ನಗರ ಸಭೆ ವ್ಯಾಪ್ತಿಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ಸಂವಾದ ಕಾರ್ಯಕ್ರಮ

Update: 2022-11-29 15:32 GMT

​ಉಳ್ಳಾಲ: ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ 2022 ದ.ಕ ಜಿಲ್ಲೆ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ  ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರ ಮಂಗಳೂರು ತಾಲೂಕು, ಪಡಿ ಸಂಸ್ಥೆ ಬೆಂದೂರ್ ವೆಲ್ ಕಂಕನಾಡಿ ಸಹಕಾರದೊಂದಿಗೆ ಉಳ್ಳಾಲ ನಗರ ಸಭೆ ವ್ಯಾಪ್ತಿಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ಸಂವಾದ ಕಾರ್ಯಕ್ರಮವು ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ನಡೆಯಿತು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ದ.ಕ ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ಶೋಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹೆಣ್ಣು ಮಕ್ಕಳ ಮೇಲಿನ ಹೀನಾಯವಾದ ಅಪರಾಧವನ್ನು ತಡೆಗಟ್ಟಲು ಪೋಕ್ಸೋ ಕಾಯಿದೆಯನ್ನು ತರಲಾಗಿದೆ. ಹೆಣ್ಣು ಮಕ್ಕಳು ಹೆಚ್ಚಾಗಿ ಹೊಗಳಿಕೆಗೆ ಮರುಳಾಗುತ್ತಾರೆ. ಪರಿಸರದವರು ಯಾವ ಉದ್ದೇಶಕ್ಕೆ ನಮ್ಮಲ್ಲಿ ಮಾತನಾಡುತ್ತಾರೆ ಎಂಬ  ತಿಳುವಳಿಕೆ ನಮ್ಮಲ್ಲಿರಬೇಕು ಎಂದರು.

ಉಳ್ಳಾಲ ನಗರ ಸಭೆ ವ್ಯಾಪ್ತಿಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್, ನಮ್ಮೆಲ್ಲರಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಿರ್ಭೀತಿಯಿಂದ ಓಡಾಡಲು ಧೈರ್ಯ ಬಂದಿದ್ದರೆ ಅದು ನಮ್ಮಂತ ರಾಜಕಾರಣಿಯಿಂದ ಅಲ್ಲ, ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಆಗಿದೆ.  ಈ ನಿಟ್ಟಿನಲ್ಲಿ ಭಾರತ ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಲು ಸಂವಿಧಾನ ಸಹಕಾರಿಯಾಗಿದೆ. ದೇವರು ನೀಡಿದ ಆಯುಷ್ಯದಲ್ಲಿ ನಾವೆಲ್ಲರೂ ಸಂತೋಷದಿಂದ ಬದುಕಬೇಕು. ದ್ವೇಷ ಮತ್ತು ದುಶ್ಚಟದಿಂದ ದೂರ ಇರಬೇಕು ಎಂದು ಹೇಳಿದರು.

ಉಳ್ಳಾಲ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ರೇವಣ್ಣ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ತೊಕ್ಕೊಟ್ಟು ಅಂಬಾವನ ನಾಗಕನ್ನಿಕಾ ದೇವಸ್ಥಾನದ ಅಧ್ಯಕ್ಷರಾದ ಸುಂದರ್ ಗಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಮತ್ತು ಮಕ್ಕಳ ರಕ್ಷಣಾಧಿಕಾರಿ ಶೈಲಜಾ ಕಾರಗಿ, ದ.ಕ. ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳ್ಳೇಪಾಡಿ, ಮೆಸ್ಕಾಂ ಇಲಾಖೆಯ ಹಿರಿಯ ಇಂಜಿನಿಯರ್ ಮಾರಪ್ಪ, ಉದ್ಯಮಿ ಅಲ್ತಾಫ್ ಒಡೆಯರ್, ಚೈಲ್ಡ್ ಲೈನ್ 1098ರ ಸದಸ್ಯೆ ರೇವತಿ, ಪಡಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಗ್ಲೀಷ, ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯ ಹ್ಯಾರಿಸ್ ಮೊದಲಾದವರು ಉಪಸ್ಥಿತರಿದ್ದರು.

ವಕಾಲತ್ತು ಸಂಯೋಜಕ ಸಿದ್ಧಾಂತ್ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಹಕ್ಕುಗಳ ಮಾಸೋತ್ಸವ  ಸಮಿತಿ 2022 ದ.ಕ ಜಿಲ್ಲೆಯ ಸಂಚಾಲಕಿ ಕಮಲಾ ಗೌಡ ಸ್ವಾಗತಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಆರ್ ಉಷಾ ನಾಯಕ್ ಆಶಯ ಗೀತೆ ಹಾಡಿದರು. ಮಂಗಳೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಆಶಾ ಲತಾ ಸುವರ್ಣ ವಂದಿಸಿದರು.

Similar News