ಡಿ.3: ಮುಸ್ಲಿಂ ಐಕ್ಯತಾ ಸಂದೇಶ ಕಾರ್ಯಕ್ರಮ

Update: 2022-11-30 12:54 GMT

ಮಂಗಳೂರು: ದ.ಕ.ಜಿಲ್ಲಾ ಮುಸ್ಲಿಂ ಜಸ್ಟೀಸ್ ಫೋರಂ (ಎಂಜೆಎಫ್)ವತಿಯಿಂದ  ಮುಸ್ಲಿಂ ಐಕ್ಯತಾ ಸಂದೇಶ ಕಾರ್ಯಕ್ರಮವು ಡಿ.3ರಂದು ಸಂಜೆ 4ಕ್ಕೆ ನಗರದ ಕಂಕನಾಡಿಯ ಜಂ ಇಯ್ಯತುಲ್ ಫಲಾಹ್ ಸಭಾಂಗಣದ ಮರ್ಹೂಂ ಅಮೀರ್ ತುಂಬೆ ವೇದಿಕೆಯಲ್ಲಿ ನಡೆಯಲಿದೆ ಎಂದು ಎಂಜೆಎಫ್ ಸ್ಥಾಪಕಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಮೇಲೆ ಕಪೋಲಕಲ್ಪಿತ ಆರೋಪ ಹೊರಿಸಿ ಅದೇ ಅಂತಿಮ ಎಂಬಂತೆ ತೀರ್ಮಾನಕ್ಕೆ ಬರುವ ಪ್ರಯತ್ನಗಳು ನಡೆಯುತ್ತಿದೆ. ಈ ಬಗ್ಗೆ ಸಮುದಾಯದ ಹೊಣೆಗಾರಿಕೆಯ ಬಗ್ಗೆ ಚರ್ಚಿಸಲು ಮತ್ತು ಏಕಪಕ್ಷೀಯ ತೀರ್ಮಾನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮುಸ್ಲಿಂ ಸಮುದಾಯದ ಮೇಲಾಗುವ ದೌರ್ಜನ್ಯ, ಅನ್ಯಾಯ, ನಿಂದನೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಮುದಾಯಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಕಾರ್ಯಾಚರಿಸುವ ಎಂಜೆಎಫ್ ಯಾವತ್ತೂ ಕೂಡ ಅಪರಾಧಗಳನ್ನು ಜಾತಿ-ಧರ್ಮದ ಆಧಾರದ ಮೇಲೆ ನೋಡಿಲ್ಲ. ಮುಸ್ಲಿಂ ಸಮುದಾಯ ಎದುರಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ರಚನಾತ್ಮಕ ಮತ್ತು ಸಂಘಟನಾತ್ಮಕ ಪ್ರಯತ್ನ ಮಾಡುತ್ತಿವೆ. ಆ ಹಿನ್ನೆಲೆಯಲ್ಲೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಫೀಉದ್ದೀನ್ ಕುದ್ರೋಳಿ ತಿಳಿಸಿದರು.

ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ‌್ರಶೀದ್ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನ್ಯಾಯವಾದಿ ಮುಝಾಫರ್ ಅಹ್ಮದ್ ಮತ್ತು ಲೇಖಕ ಜಿ. ಮೆಹಬೂಬ್ ಮುಖ್ಯ ಭಾಷಣ ಮಾಡಲಿದ್ದಾರೆ. ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಬಿ.ಎಂ. ಮುಮ್ತಾಝ್ ಅಲಿ, ಬಶೀರ್ ಶಾಲಿಮಾರ್, ಮುಹಮ್ಮದ್ ಹನೀಫ್ ಹಾಜಿ, ಮಾಜಿ ಮೇಯರ್ ಕೆ. ಅಶ್ರಫ್, ಮುಸ್ತಫಾ ಕೆಂಪಿ, ಇಕ್ಬಾಲ್ ಎಲಿಮಲೆ, ಅಶ್ರಫ್ ಕಲ್ಲೇಗ, ಎಂ.ಎಸ್.ಮುಹಮ್ಮದ್, ಬಿ.ಎ.ನಝೀರ್ ಬೆಳ್ತಣಗಡಿ, ಯಾಸೀನ್ ಕುದ್ರೋಳಿ, ಅಬ್ಬಾಸ್ ಸುನೈನಾ, ಹನೀಫ್ ಹಾಜಿ ಗೋಳ್ತಮಜಲು, ಅಶ್ರಫ್ ಬದ್ರಿಯಾ, ಇಸ್ಮಾಯೀಲ್ ಉಳ್ಳಾಲ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಂಜೆಎಫ್ ಅಧ್ಯಕ್ಷ ಇರ್ಶಾದ್ ಯು.ಟಿ., ಉಪಾಧ್ಯಕ್ಷ ಅಲಿ ಹಸನ್, ಪ್ರಧಾನ ಕಾರ್ಯದರ್ಶಿ ವಹಾಬ್ ಕುದ್ರೋಳಿ, ಕಾರ್ಯದರ್ಶಿ ಅಬ್ದುಸ್ಸಲಾಂ ಉಚ್ಚಿಲ್, ಕಾರ್ಯಕಾರಿ ಸಮಿತಿ ಸದಸ್ಯ ಇಮ್ರಾನ್ ಎ.ಆರ್., ಉಪಸ್ಥಿತರಿದ್ದರು.

Similar News