ಲೋಕಾಯುಕ್ತದಲ್ಲಿ ಅನ್ಯರ ಒತ್ತಡ, ವರ್ಗಾವಣೆ ಭಯವಿಲ್ಲ: ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್

''ಎಪಿಎಂಸಿ ಭ್ರಷ್ಟಾಚಾರ ಬಯಲು ಮಾಡುತ್ತೇವೆ''

Update: 2022-12-02 18:42 GMT

ಬೆಂಗಳೂರು, ಡಿ. 2: ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುವವರಿಗೆ ವರ್ಗಾವಣೆ, ಅನ್ಯರ ಒತ್ತಡ, ಅಮಾನತುಗಳ ಭಯವಿಲ್ಲ. ಹೀಗಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರದ ಪಿಡುಗು ತೊಲಗಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಕರೆ ನೀಡಿದರು.

ಶುಕ್ರವಾರ ನಗರದ ಲೋಕಾಯುಕ್ತ ಕಚೇರಿ ಸಭಾಂಗಣದಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಅರಿವು ಮೂಡಿಸುವ ಎರಡು ದಿನಗಳ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಲೋಕಾಯುಕ್ತದಲ್ಲಿ ವರ್ಗಾವಣೆ, ಅನ್ಯರ ಒತ್ತಡ, ಅಮಾನತುಗಳ ಭಯವಿಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಅವಕಾಶವಿದೆ. ಆದರೆ ಲೋಕಾಯುಕ್ತದ ಆಶಯಗಳಿಗೆ ಬದ್ಧರಾಗಿದ್ದು, ಭ್ರಷ್ಟಾಚಾರದ ವಿರುದ್ಧ ಸೈನಿಕರಂತೆ ಕೆಲಸ ಮಾಡಬೇಕು ಎಂದು ಅವರು ನುಡಿದರು.

ಇನ್ನೂ, ಪ್ರತಿ ಜಿಲ್ಲೆಯಲ್ಲಿಯೂ ಅತ್ಯಂತ ಭ್ರಷ್ಟರಾಗಿರುವ ಅಧಿಕಾರಿಗಳನ್ನು ಗುರುತಿಸಿ ಅವರ ಅಸ್ತಿ ವಿವರಗಳನ್ನು ಸಂಗ್ರಹಿಸಬೇಕು. ಅವರ ಆಸ್ತಿ ಸಂಪಾದನೆಯ ಮಾರ್ಗವನ್ನು ಪತ್ತೆ ಹಚ್ಚಿದ ಬಳಿಕ ಲೋಕಾಯುಕ್ತರಿಂದ ಅನುಮತಿ ಪಡೆದು, ನ್ಯಾಯಾಲಯದ ವಾರಂಟ್‍ನೊಂದಿಗೆ ಅವರ ಮೇಲೆ ದಾಳಿ ನಡೆಸಿ, ಸೂಕ್ತ ತನಿಖೆ ಕೈಗೊಂಡು ಭ್ರಷ್ಟರಿಗೆ ಶಿಕ್ಷೆ ಆಗುವ ಹಾಗೆ ನೋಡಿಕೊಳ್ಳಿ ಎಂದು ಅವರು ಸೂಚಿಸಿದರು.

ನಾವು ನಮ್ಮ ಮಿತಿಯಲ್ಲಿ ಕೆಲಸ ಮಾಡಿದರೆ ಅದಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತವೆ. ಲೋಕಾಯುಕ್ತಕ್ಕೆ ಬಲ ಇಲ್ಲ ಎಂದು ಅಧೀರರಾಗುವ ಅಗತ್ಯವಿಲ್ಲ. ಉತ್ತಮ ರೀತಿಯಲ್ಲಿ ಪ್ರಕರಣದ ತನಿಖೆ ಮಾಡುವುದು ನಮ್ಮ ಶಕ್ತಿಯಾಗಿದ್ದು, ಶಿಷ್ಟಾಚಾರಗಳಿಗೆ ಒಳಪಟ್ಟು ನಿಷ್ಠೆಯಿಂದ ತನಿಖೆ ನಡೆಸಿ ಎಂದು ಅವರು ತಿಳಿಸಿದರು.

ನಮ್ಮಲ್ಲಿನ ಶಿಕ್ಷೆಯ ಪ್ರಮಾಣ ಶೇ.25ರಷ್ಟಿದೆ. ಕೇಂದ್ರಿಯ ತನಿಖಾ ಸಂಸ್ಥೆಯ ಶಿಕ್ಷೆಯ ಪ್ರಮಾಣ ಶೇ.68 ಇದೆ. ನಮ್ಮ ಶಿಕ್ಷೆಯ ಪ್ರಮಾಣವನ್ನು ಶೇ.85ಕ್ಕಿಂತ ಹೆಚ್ಚು ಮಾಡಬೇಕು ಎಂಬುದು ನನ್ನ ಆಶಯವಾಗಿದೆ ಎಂದ ಅವರು, ಈ ಮೊದಲು ಪ್ರತಿ ತಿಂಗಳು ಮುನ್ನೂರು-ನಾಲ್ನೂರು ಪ್ರಕರಣಗಳು ದಾಖಲಾಗುತ್ತಿದ್ದರೆ, ಕಳೆದ ತಿಂಗಳಲ್ಲಿ 844 ಪ್ರಕರಣ ದಾಖಲಾಗಿದೆ. ಇದು ಲೋಕಾಯುಕ್ತದ ಮೇಲಿನ ಜನರ ಹೆಚ್ಚುತ್ತಿರುವ ನಿರೀಕ್ಷೆ ಮತ್ತು ಭರವಸೆಯ ಸಂಕೇತ ಎಂದರು. 

ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ. ಆದರೆ ಹೆಚ್ಚು ಸಮಯ ಕೆಲಸ ಮಾಡುವ ಮೂಲಕ ಜನರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸೋಣ. ನಾನು ರಾತ್ರಿ 9 ಗಂಟೆ ತನಕ ಕರ್ತವ್ಯ ನಿರ್ವಹಿಸಲು ಸಿದ್ಧನಿದ್ದೇನೆ ಎಂದು ಪಾಟೀಲ್ ಹೇಳಿದರು.

ನಿಗಾ ಇರಲಿ: ಬಿತ್ತನೆ ಬೀಜ ಕೇಂದ್ರಗಳು, ಆಸ್ಪತ್ರೆ, ಉಪ ನೋಂದಾಣಿ ಅಧಿಕಾರಿಗಳ ಕಚೇರಿಗಳ ಮೇಲೆ ನಿಗಾ ಇಡಬೇಕು. ಖಾತಾ ಬದಲಾವಣೆಗೆ ಹತ್ತು ಸಲ ಬನ್ನಿ ಎನ್ನುವ ಅಧಿಕಾರಿಗಳಿಗೆ ತಕ್ತ ಶಾಸ್ತಿ ಮಾಡಿ. ಪ್ರಕರಣ ದಾಖಲಿಸಿ ಪಾಠ ಕಲಿಸಿ. ನಾನು ನಿಮ್ಮೆಲ್ಲರ ಕೆಲಸದ ಮೇಲೆ ಗಮನವಿಟ್ಟಿದ್ದು ಪ್ರತಿ ತಿಂಗಳ ಮತ್ತು ದ್ವಿಮಾಸಿಕ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ಹೆಚ್ಚಾದರೆ ಅದಕ್ಕೆ ನೀವೇ ಹೊಣೆ ಆಗುತ್ತಿರಿ ಎಂದು ಲೋಕಾಯುಕ್ತರು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣಿಂದ್ರ, ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ರಿಜಿಸ್ಟ್ರಾರ್ ಉಷಾ ರಾಣಿ ಸೇರಿದಂತೆ ಪ್ರಮುಖರಿದ್ದರು.

'ಎಪಿಎಂಸಿ ಭ್ರಷ್ಟಾಚಾರ ಬಯಲು ಮಾಡುತ್ತೇವೆ':  ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಗದಗದ ರೈತನೊಬ್ಬ 415 ಕಿಮೀ ಸಂಚರಿಸಿ ಬೆಂಗಳೂರಿಗೆ ಬಂದು 205 ಕೆಜಿ ಈರುಳ್ಳಿಯನ್ನು ಕೇವಲ 8.36ರೂ.ಗಳಿಗೆ ಮಾರಾಟ ಮಾಡಿರುವ ಸುದ್ದಿ ಪ್ರಕಟಗೊಂಡಿತ್ತು. ಎಪಿಎಂಸಿಯಲ್ಲಿನ ವ್ಯಾಪಾಕ ಭ್ರಷ್ಟಾಚಾರದ ದ್ಯೋತಕವಿದು. ಈ ಪ್ರಕರಣ ಸೇರಿದಂತೆ ರಾಜ್ಯಾದ್ಯಂತ ಎಪಿಎಂಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಆಳವಾದ ತನಿಖೆಯನ್ನು ನಡೆಸುತ್ತೇನೆ. ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತರು ಹೇಳಿದರು.

Similar News