ಬೆಂಗಳೂರು | ಪಾರಿವಾಳ ಹಿಡಿಯುವ ವೇಳೆ ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕರ ಪೈಕಿ ಓರ್ವ ಮೃತ್ಯು

Update: 2022-12-04 05:10 GMT

ಬೆಂಗಳೂರು, ಡಿ.4: ಮಹಾಲಕ್ಷ್ಮೀ ಲೇಔಟ್ ವಿಜಯಾನಂದ ನಗರದಲ್ಲಿ ಮೂರು ದಿನಗಳ ಹಿಂದೆ ಪಾರಿವಾಳ ಹಿಡಿಯಲು ಯತ್ನಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಹೈಟೆನ್ಶನ್ ವಿದ್ಯುತ್ ವಯರ್ ತಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಬಾಲಕರ ಪೈಕಿ ಓರ್ವ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.

ಇಲ್ಲಿನ ನಿವಾಸಿ ಮಂಜುನಾಥ್ ಮತ್ತು ಪ್ರೇಮಾ ದಂಪತಿಯ ಪುತ್ರ ಸುಪ್ರೀತ್(12) ಮೃತ ಬಾಲಕ. ಮೂರು ದಿನಗಳಿಂದ ಗಂಭೀರಾವಸ್ಥೆಯಲ್ಲಿದ್ದ ಈತ ಇಂದು ಬೆಳಗ್ಗೆ 7:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ಗಾಯಗೊಂಡಿರುವ ಇನ್ನೋರ್ವ ಬಾಲಕ ಚಂದ್ರು(10) ಸ್ಥಿತಿ ಕೂಡಾ ಗಂಭೀರಾವಸ್ಥೆಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಪಾರಿವಾಳ ಹಿಡಿಯುವ ಹವ್ಯಾಸ ಹೊಂದಿರುವ ಈ ಇಬ್ಬರು ಬಾಲಕರು ಗುರುವಾರ ಸಂಜೆ 6:30ರ ಸುಮಾರಿಗೆ ಪಾರಿವಾಳ ಹಿಡಿಯುವ ಯತ್ನದಲ್ಲಿ ಆಕಸ್ಮಿಕವಾಗಿ ಹೈಟೆನ್ಶನ್ ವಿದ್ಯುತ್ ವಯರ್  ಸ್ಪರ್ಶಕ್ಕೆ ಒಳಗಾಗಿದ್ದರು. ಇದರಿಂದ ಇಬ್ಬರಿಗೂ ತೀವ್ರತರದ ಸುಟ್ಟ ಗಾಯಗಳಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಬೆಂಗಳೂರು | ಪಾರಿವಾಳ ಹಿಡಿಯುವ ವೇಳೆ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಇಬ್ಬರು ಬಾಲಕರು ಗಂಭೀರ

Similar News