ತೂತು ಬಿದ್ದ ಅಪ್ಪನಂಗಾಲು

Update: 2022-12-05 05:06 GMT

ಸೆಯದ್ ಯೇಜಸ್ ಪಾಷ ಅವರ ‘ತೂತು ಬಿದ್ದ ಅಪ್ಪನಂಗಾಲು’ ಸಂಕಲನದ ಕವಿತೆಗಳು ಬದುಕಿನ ಶ್ರದ್ಧೆಯ ನೇರ ಪ್ರತಿಫಲನಗಳಾಗಿರುವುದು. ಕವಿತೆಯ ವೌಲ್ಯವನ್ನು ಹೆಚ್ಚಿಸುವಂತಿದೆ. ತೂತು ಬಿದ್ದ ಅಪ್ಪನಂಗಾಲು ಅನ್ನಕ್ಕಾಗಿ ಮಕ್ಕಳ ಕನಸುಗಳಗಾಗಿ ಕ್ರಮಿಸಿದ ಮಾರ್ಗಗಳಲ್ಲಿ ಮೂಡಿಸಿದ ಹೆಜ್ಜೆ ಗುರುತುಗಳಲ್ಲಿ ರಕ್ತದ ಕಲೆಗಳವೆ. ನೋವು - ಯಾತನೆ - ತಳಮಳಗಳ ಕಂಪನವಿದೆ. ಆ ತಲ್ಲಣಗಳ ನಡುವೆಯೇ ನೆಮ್ಮದಿಯ ಹುಡುಕಾಟವಿದೆ. ಯೇಜಸ್ ಅವರ ಕವಿತೆಗಳಲ್ಲಿ ಈ ವೈಯಕ್ತಿಕ ತಳಮಳಗಳನ್ನು ದುಡಿಯುವ ವರ್ಗದ ಏಳುಬೀಳುಗಳಿಗೆ ವಿಸ್ತರಿಸುವ ಗುಣವಿದೆ. ಆದ್ದರಿಂದ ಅಂಗಾಲು ಸಹಜವಾಗಿದೆ. ಸಮಷ್ಟಿ ಬದುಕಿನ ನೋವು ಹಾಗೂ ಆತ್ಮಗೌರವಗಳಿಗೆ ರೂಪಕವಾಗುತ್ತದೆ.

 ಯೇಜಸ್ ಪಾಷ ಅವರ ಈ ಮೊದಲ ಕವನ ಸಂಕಲನ ‘ತೂತು ಬಿದ್ದ ಅಪ್ಪನಂಗಾಲು’ವಿನಲ್ಲಿ ಸಮಕಾಲೀನ ಸಂದರ್ಭದ ವಿವಿಧ ಜೀವನಾಸಕ್ತಿಗಳ ಕುರಿತಾದ ಇಪ್ಪತ್ತೊಂಭತ್ತು ಕವನಗಳವೆ.ವರ್ತಮಾನದ ಹಲವು ಹತ್ತು ರಸ್ತೆಗಳ ಕೂಟದಲ್ಲಿ ನಿಂತು ಕವಿ ಸುತ್ತ ನಡೆಯುವ ಜೀವಗಳ ಮಿಡಿತಗಳಿಗೆ ಆ ಮೂಲಕ ಏರ್ಪಡುವ ಬದುಕಿನ ಉಸಿರಾಟಕ್ಕೆ ಸಾಕ್ಷಿಯಾಗುತ್ತಾರೆ. ಕವಿಯ ಮನಸ್ಸು ಎಲ್ಲಾ ದಾರಿಗಳ ವಿಷಮತೆಗಳೊಂದಿಗೆ ಹೆಜ್ಜೆಹಾಕುತ್ತ ಆಂತರ್ಯದ ಪಿಸುಮಾತುಗಳನ್ನು ಸಹಾನುಭೂತಿಯಿಂದ ಕೇಳಿಸಿಕೊಳ್ಳಲು ತವಕಿಸುತ್ತದೆ. ತಪ್ಪಿದ ಲಯಗಳ ಅಪಶೃತಿಗಳೊಂದಿಗೆ ಸಮಶೃತಿಯ ಹುಡುಕಾಟದಲ್ಲಿ ಮುನ್ನಡೆಯುವ ಭರವಸೆಯನ್ನು ಸಹಯಾತ್ರಿಗಳಲ್ಲಿ ಮೂಡಿಸಲು ಚಡಪಡಿಸುತ್ತಾರೆ. ‘ಪಯಣ ಆರಂಭಗೊಂಡಿದೆ’ ಎಂಬ ಕವಿತೆಯ ಕೆಳಗಿನ ಸಾಲುಗಳನ್ನು ಗಮನಿಸಿದರೆ ಈ ಯಾತ್ರೆಯ ಸ್ವರೂಪ ಅರಿವಿಗೆ ಬರಬಲ್ಲದು.

ಅಂಬೆಗಾಲಿಡುತ್ತ ಆಡುತ್ತ ಹೊಸಲಿನಿಂದ ಆಚೆ ಕಾಲ್ಪಟ್ಟಾಗ ಆರಂಭದ ಪಯಣದ ಹೆಜ್ಜೆ ಬಂಧನಗಳ ಸೆಳೆತಗಳಿಗೆ ಅಂಟಿಕೊಂಡ ಬದುಕು. ಪ್ರಕೃತಿಯ ಸೊಬಗಿನ ಸೃಷ್ಟಿಯ ವಿಸ್ಮಯದ ಜೊತೆ ಪ್ರೀತಿ ಪ್ರೇಮ ಸಂಸಾರದ ಪಯಣ ಆರಂಭಗೊಂಡಿದೆ. ಮರೆಯಾಗುವ ರಾತ್ರಿಗಳಲ್ಲಿ ಒಂದು ಹಿಡಿ ನಕ್ಷತ್ರಗಳ ಲೆಕ್ಕ ಹಾಕುತ್ತ ಎಲ್ಲೊ ತಪ್ಪಾಗಿ ಮತ್ತೆ ಆರಂಭಗೊಂಡಿದೆ. ಹತ್ತಿ ಹತ್ತಿ ಕುಮಾರ ಪರ್ವತ ಎಲ್ಲೊ ದಾರಿ ತಪ್ಪಾಗಿ ಮತ್ತೆ ಅಲ್ಲೆ ಆರಂಭಗೊಂಡಿವೆ.

ವೃಷ್ಟಿ ಸಮಷ್ಟಿಗಳೆರಡೂ ಬದಕನ್ನು ಸಂಕೇತಿಸುವ ಈ ಚಿತ್ರಣ ಯೇಜಸ್ ಅವರ ಪ್ರೌಢ ಹಾಗೂ ಸಮತೋಲನದ ಚಿಂತನೆಗೆ ಸಮರ್ಥ ನಿದರ್ಶನ ಎನ್ನಬಹುದು. ಕಟು ವಾಸ್ತವಗಳ ಬೆಳಕಿನಲ್ಲಿ ಬದುಕಿನ ಭರವಸೆಗಳನ್ನು ಕಂಡುಕೊಳ್ಳಲು ಹವಣಿಸುವ ಯೇಜಸ್ ಎಲ್ಲೂ ನಿಲುಕದ ಕನಸುಗಳತ್ತ ಕೈ ಚಾಚುವುದಿಲ್ಲ. ಆದ್ದರಿಂದ ಸಿದ್ಧಾಂತ ಘೋಷಣೆಗಳಿಂದ ಇಡಿಕಿರದ ಹುಸಿ ಕ್ರಾಂತಿಕಾರಿಗಳ ಆವೇಶವಾಗಲಿ ರಾಜಕಾರಣಿಗಳಂತಹ ಟೊಳ್ಳು ಭರವಸೆಗಳಾಗಲಿ ಇಲ್ಲಿನ ಕವಿತೆಗಳಲ್ಲ. ‘ತೂತು ಬಿದ್ದ ಅಪ್ಪನಂಗಾಲು’ ಕವಿತೆ ಕೆಳಗಿನ ಸಾಲುಗಳಲ್ಲಿ ಅವರ ಒಟ್ಟು ಕಾವ್ಯಾಭಿವ್ಯಕ್ತಿಯ ಆಶಯಕ್ಕೆ ಅನುಗುಣವಾದ ನಿಲುವನ್ನು ಗುರುತಿಸಬಹುದು.

Similar News