ಚಿಲುಮೆ ಸಂಸ್ಥೆ ಹಗರಣ | ಮತಪಟ್ಟಿ ಪರಿಷ್ಕರಣೆ, ಸಲಹೆಗೆ ರಾಜಕೀಯ ಪಕ್ಷಗಳಿಗೆ ಆಹ್ವಾನ

Update: 2022-12-06 12:55 GMT

ಬೆಂಗಳೂರು, ಡಿ.6: ‘ಚಿಲುಮೆ’ ಸಂಸ್ಥೆ ಹಗರಣ ಸಂಬಂಧ ಮತದಾರರ ಪಟ್ಟಿಯ ಬಗ್ಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ನೀಡುವಂತೆ ರಾಜಕೀಯ ಪಕ್ಷಗಳಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.

ಈ ಸಂಬಂಧ ಬಿಬಿಎಂಪಿ ಅಧಿಕೃತ ಮಾಹಿತಿ ಪ್ರಕಟಿಸಿದ್ದು, ಮೊದಲಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಮತದಾರರ ಪಟ್ಟಿಯ ಬಗ್ಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಮತದಾರರ ಹೆಸರು ರದ್ದತಿ ಮಾಡಲಾದ ಮತದಾರರ ಪಟ್ಟಿಯ ಬಗ್ಗೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ವಿಶೇಷ ಅಧಿಕಾರಿ ಅಜಯ್ ನಾಗಭೂಷಣ್ ಅವರೊಂದಿಗೆ ಡಿ.7ರಂದು ಚರ್ಚೆ ನಡೆಸಬಹುದಾಗಿದೆ ಎಂದು ತಿಳಿಸಲಾಗಿದೆ.

ಮಹದೇವಪುರ ವಲಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಹದೇವಪುರ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ಈ ಸಭೆ ನಡೆಯಲಿದ್ದು, ಮಾನ್ಯತೆಯುಳ್ಳ ಎಲ್ಲ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಸಭೆಗೆ ಹಾಜರಾಗಿ ಎಂದು ಸೂಚಿಸಲಾಗಿದೆ.

Similar News