ಸಿದ್ದರಾಮಯ್ಯ ಕುರಿತು ಕುಚೇಷ್ಟೇ ಹೇಳಿಕೆ; BJP ಕುಡಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ: ಶಿವಣ್ಣ ಎಚ್ಚರಿಕೆ

Update: 2022-12-06 15:38 GMT

ಬೆಂಗಳೂರು, ಡಿ. 6: ‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಕುಚೇಷ್ಟೇ ಹೇಳಿಕೆ ನೀಡಿರುವ ಬಿಜೆಪಿಯ ಸಿ.ಟಿ.ರವಿ ಕೂಡಲೇ ಕ್ಷಮೆ ಕೋರಬೇಕು. ಇಲ್ಲವಾದರೆ ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರ ವಿರೋಧಿ ರಾಜಕಾರಣವನ್ನು ಮಾಡುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ಕುಡಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಸಿ.ಟಿ.ರವಿ ಅವರು ಮರ್ಯಾದೆಯ ಸೀಮೆಯನ್ನು ಮೀರಿ ಮಾತನಾಡಿದ್ದಾರೆ. ಅವರ ರೀತಿಯಲ್ಲೇ ನಾವು ಮಾತನಾಡುವುದಕ್ಕೆ ಸಾಧ್ಯವಿದೆ. ನಾವು ಮೋದಿಯವರನ್ನು ಮನುವಾದಿ ಮೋದಿ, ಅಹಿಂದ ವಿರೋಧಿ ಅಮಿತ್ ಶಾ, ಶೂದ್ರ ವಿರೋಧಿ ಆರೆಸ್ಸೆಸ್ ಎಂದು ಹೇಳಿಕೆ ನೀಡಿದರೆ ನೀವು ಸಹಿಸಿಕೊಳ್ಳುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.

‘ಹೇಳಿಕೆ ಕೊಟ್ಟ ನಂತರ ಸಿ.ಟಿ.ರವಿ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆ. ‘ಹೌದು ಹುಲಿಯಾ’ ಹೇಳಿಕೆಯನ್ನು ಸ್ವೀಕರಿಸಿದ ರೀತಿ ಇದನ್ನು ಸ್ವೀಕರಿಸಲಿ ಎಂದು ವಿತಂಡವಾದ ಮಾಡುತ್ತಿದ್ದಾರೆ. ಮುಗ್ಧ ಅಭಿಮಾನಿಯೊಬ್ಬ ಮಾಡಿದ ಪ್ರಶಂಸೆಯನ್ನು ಸ್ವೀಕರಿಸಲಾಗಿದೆ ಎಂದ ಮಾತ್ರಕ್ಕೆ ಕೋಮುವಾದಿ ಮನಸ್ಥಿತಿಯ ಸಿ.ಟಿ.ರವಿ ಹೇಳಿಕೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ಶಿವಣ್ಣ ತಿರುಗೇಟು ನೀಡಿದ್ದಾರೆ. 

Similar News